ಅಹಮದಾಬಾದ್ (ಗುಜರಾತ್): ಗೋದ್ರಾ ಹತ್ಯಾಕಾಂಡ ನಡೆದು 19 ವರ್ಷಗಳು ಕಳೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿಯನ್ನು ಈಗ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಫೀಕ್ ಹುಸೇನ್ ಭಟುಕ್ (51) ಬಂಧಿತ ಆರೋಫಿಯಾಗಿದ್ದು, ಈತ ಗೋದ್ರಾ ಮೂಲದವನಾಗಿದ್ದಾನೆ. ಪೂರ್ತಿ ಪ್ರಕರಣದಲ್ಲಿ ಈತನ ಕೈವಾಡವಿದ್ದು, ಘಟನೆ ನಡೆದ ದಿನದಿಂದ ಅಂದರೆ ಸುಮಾರು 19 ವರ್ಷಗಳಿಂದ ತಲೆಮರೆಸಿಕೊಂಡಿದ್ದನು ಎಂದು ಪಂಚಮಹಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೀನಾ ಪಾಟೀಲ್ ತಿಳಿಸಿದ್ದಾರೆ.
ನಿಖರ ಮಾಹಿತಿ ಆಧರಿಸಿದ ಗೋದ್ರಾ ಪೊಲೀಸರು ಸಿಗ್ನಾಲ್ ಫಲಿಯಾ ಎಂಬ ಪ್ರದೇಶದ ಮನೆಯೊಂದರ ಮೇಲೆ ದಾಳಿ ಮಾಡಿ, ಭಟುಕ್ನನ್ನು ಬಂಧಿಸಿದ್ದಾರೆ ಎಂದು ಲೀನಾ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿ ಭೇಟಿ ಮಾಡಿ ಈ ಬೇಡಿಕೆ ಮುಂದಿಟ್ಟ ಮಾಜಿ ಸಿಎಂ ಸಿದ್ದರಾಮಯ್ಯ!
ಗೋದ್ರಾ ಹತ್ಯಾಕಾಂಡದಲ್ಲಿ ಭಟುಕ್ ಪ್ರಮುಖ ಆರೋಪಿಯಾಗಿದ್ದು, ಜನರಿಗೆ ಪ್ರಚೋದಿಸಿ, ಅವರಿಗೆ ಪೆಟ್ರೋಲ್ ನೀಡಿ, ರೈಲು ಕಂಪಾರ್ಟ್ಮೆಂಟ್ಗೆ ಬೆಂಕಿ ಹಚ್ಚಲು ಪ್ರೇರೇಪಿಸಿದ್ದನು. ಇದಾದ ನಂತರ ವಿಚಾರಣೆಯಲ್ಲಿ ಭಟುಕ್ ಹೆಸರು ಕೇಳಿಬರುತ್ತಿದ್ದಂತೆ ದೆಹಲಿಗೆ ಪರಾರಿಯಾಗಿದ್ದನು. ಈತ ಸೇರಿ ಹಲವರ ವಿರುದ್ಧ ಕೊಲೆ ಮತ್ತು ದೊಂಬಿ ಕೇಸ್ ದಾಖಲಾಗಿದೆ.
ಈತನ ಗೋದ್ರಾ ರೈಲ್ವೆ ನಿಲ್ದಾಣದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎಂದು ಲೀನಾ ಪಾಟೀಲ್ ಮಾಹಿತಿ ನೀಡಿದ್ದಾರೆ.
ಏನಿದು ಗೋದ್ರಾ ಪ್ರಕರಣ..?
ಗುಜರಾತ್ನ ಇತಿಹಾಸದಲ್ಲೇ ಈ ಕೋಮು ಗಲಭೆ ಕಪ್ಪು ಚುಕ್ಕೆಯಾಗಿದ್ದು, 2002ರ ಫೆಬ್ರವರಿ 27ರಂದು ನಡೆದಿದೆ. ಸಬರಮತಿ ಎಕ್ಸ್ಪ್ರೆಸ್ನ ರೈಲು ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ 59 ಕರಸೇವಕರನ್ನು ಬೆಂಕಿ ಹಚ್ಚಿ ಕೊಲೆ ಮಾಡಲಾಗಿತ್ತು. ಈ ಆರೋಪದಲ್ಲಿ ಕೆಲವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ. ಈಗ 19 ವರ್ಷಗಳ ನಂತರ ಮುಖ್ಯ ಆರೋಪಿಯನ್ನು ಬಂಧಿಸಲಾಗಿದೆ.