ತಿರುವನಂತಪುರಂ (ಕೇರಳ): ಅದೃಷ್ಟ ಯಾವಾಗ ಒಲಿಯುತ್ತೋ ಯಾರಿಗೆ ಗೊತ್ತು. ಕಷ್ಟದ ಸಮಯಕ್ಕೆ ಹಣ ಸಿಕ್ಕರೆ ಅದಕ್ಕಿರುವ ಕಿಮ್ಮತ್ತೇ ಬೇರೆ. ಕೇರಳದ ವ್ಯಕ್ತಿ ಸಾಲ ಪಡೆದಿದ್ದ ಹಣಕ್ಕೆ ಮನೆ ಜಪ್ತಿ ಮಾಡಲು ಬ್ಯಾಂಕ್ ನೋಟಿಸ್ ನೀಡಿತ್ತು. ನೋಟಿಸ್ ಕೈ ಸೇರಿದ ಕೆಲ ಗಂಟೆಗಳಲ್ಲೇ ಅದೃಷ್ಟ ಎಂಬಂತೆ ಆತನಿಗೆ ಲಾಟರಿಯಲ್ಲಿ 70 ಲಕ್ಷ ರೂಪಾಯಿ ಹಣ ಬಂದಿದೆ.
ಈ ಕುತೂಹಲಕಾರಿ, ವಿಚಿತ್ರ ಘಟನೆ ನಡೆದಿದ್ದು, ಕೇರಳದ ಕೊಲ್ಲಂ ಜಿಲ್ಲೆಯಲ್ಲಿ. ಮೀನುಗಾರಿಕೆ ಕಸುಬು ನಡೆಸುತ್ತಿದ್ದ ವ್ಯಕ್ತಿಗೆ ಅಕ್ಟೋಬರ್ 12 ರಂದು ತಾನು ಸಾಲ ಪಡೆದ ಬ್ಯಾಂಕ್ ಹಣ ಪಾವತಿಗೆ ನೋಟಿಸ್ ನೀಡಿತ್ತು. ನಿಗದಿತ ವೇಳೆಗೆ ಸಾಲ ಮರುಪಾವತಿ ಮಾಡದಿದ್ದರೆ ಮನೆಯನ್ನು ಜಪ್ತಿ ಮಾಡುವ ಎಚ್ಚರಿಕೆ ನೀಡಿತ್ತು.
ಸಾಲದ ಸುಳಿಗೆ ಸಿಲುಕಿದ್ದ ಕುಟುಂಬ ಈಗ ಮನೆಯನ್ನು ಕಳೆದುಕೊಳ್ಳುವ ಭೀತಿಯಲ್ಲಿತ್ತು. ಮೀನುಗಾರ ವ್ಯಕ್ತಿ ಬ್ಯಾಂಕಿಂದ ನೋಟಿಸ್ ಬರುವುದಕ್ಕೂ ಮೊದಲು ರಾಜ್ಯ ಸರ್ಕಾರ ನಡೆಸುವ ಅಕ್ಷಯ ಲಾಟರಿಯಲ್ಲಿ ಟಿಕೆಟ್ ಖರೀದಿಸಿದ್ದ. ಮಧ್ಯಾಹ್ನದ ವೇಳೆಗೆ ನೋಟಿಸ್ ಮನೆಗೆ ಬಂದಿತ್ತು.
ಅದೃಷ್ಟ ಎಂಬಂತೆ ಅದೇ ದಿನ ಸಂಜೆಗೆ ತಾನು ಖರೀದಿಸಿದ ಟಿಕೆಟ್ಗೆ ಬರೋಬ್ಬರಿ 70 ಲಕ್ಷ ಲಾಟರಿ ಹೊಡೆದಿತ್ತು. ಈ ಸುದ್ದಿಯನ್ನು ಕೇಳಿದ ಕುಟುಂಬ ಹಿರಿಹಿರಿ ಹಿಗ್ಗಿದೆ. ಹತಾಶೆಯಲ್ಲಿದ್ದ ಕುಟುಂಬಕ್ಕೆ ಲಾಟರಿ ದೇವರಂತೆ ಬಂದು ಕಾಪಾಡಿದೆ. ಲಾಟರಿಯಲ್ಲಿ ಬಂದ ಹಣವನ್ನು ತಾವು ಸಾಲ ಮಾಡಿದ ಬ್ಯಾಂಕ್ನಲ್ಲಿಯೇ ಡೆಪಾಸಿಟ್ ಮಾಡಿದ್ದಾರೆ. ತಾವು ಮಾಡಿದ್ದ 9 ಲಕ್ಷ ಸಾಲವನ್ನು ತೀರಿಸಲು ಮೀನುಗಾರ ಮುಂದಾಗಿದ್ದಾರೆ.
ಇದಕ್ಕೂ ಮೊದಲು ಓಣಂ ಹಬ್ಬದ ವೇಳೆ ಆಟೋ ಡ್ರೈವರ್ವೊಬ್ಬರಿಗೆ 25 ಕೋಟಿ ರೂಪಾಯಿ ಲಾಟರಿ ಹೊಡೆದಿದ್ದು, ದೇಶದಲ್ಲೇ ದೊಡ್ಡ ಸುದ್ದಿಯಾಗಿತ್ತು. ಬಳಿಕ ಮನೆಗೆ ಸಾಲ ಕೇಳಿಕೊಂಡು ಜನರ ದಂಡೇ ಹರಿದು ಬರುತ್ತಿದ್ದು, ಮನಶಾಂತಿಯನ್ನೇ ಕಳೆದುಕೊಂಡಿದ್ದಾಗಿ ಆತ ಹೇಳಿಕೊಂಡಿದ್ದ.
ಓದಿ: ಖುಲಾಯಿಸಿದ ಅದೃಷ್ಟ: 25 ಕೋಟಿ ರೂಪಾಯಿಗಳ ಬಂಪರ್ ಲಾಟರಿ ಗೆದ್ದ ಆಟೋ ಡ್ರೈವರ್