ತಿರುವನಂತಪುರಂ (ಕೇರಳ): ಓಣಂ ಬಂಪರ್ ಲಾಟರಿಯಲ್ಲಿ ಕೇರಳದ ಆಟೋ ರಿಕ್ಷಾ ಚಾಲಕನಿಗೆ ಅದೃಷ್ಟ ಖುಲಾಯಿಸಿದ್ದು, 25 ಕೋಟಿ ರೂಪಾಯಿಗಳ ಬಂಪರ್ ಲಾಟರಿ ಗೆದ್ದಿದ್ದಾರೆ.
ಈ ಆಟೋ ರಿಕ್ಷಾ ಚಾಲಕ ಕಮ್ ಬಾಣಸಿಗನಾಗಿ ಕೆಲಸ ಮಾಡಲೆಂದು ಮಲೇಷ್ಯಾಕ್ಕೆ ಹೋಗಲು ಯೋಜಿಸುತ್ತಿದ್ದರು. ಇದಕ್ಕಾಗಿ 3 ಲಕ್ಷ ರೂ.ಗಳ ಸಾಲದ ಅರ್ಜಿಯನ್ನೂ ಸಹ ಅಂಗೀಕರಿಸಲಾಗಿತ್ತು. ಇದಾದ ಕೇವಲ ಒಂದೇ ದಿನದಲ್ಲಿ 25 ಕೋಟಿ ರೂ.ಗಳ ಓಣಂ ಬಂಪರ್ ಲಾಟರಿ ಬಂದಿದೆ.
ತಿರುವನಂತಪುರಂ ಬಳಿಯ ಶ್ರೀವರಾಹಂ ಮೂಲದ ಅನೂಪ್ ಎಂಬುವವರೇ ಈ ಲಾಟರಿ ಟಿಕೆಟ್ ವಿಜೇತರಾಗಿದ್ದು, TJ 750605 ಸಂಖ್ಯೆಯ ಟಿಕೆಟ್ನ್ನು ಶನಿವಾರವಷ್ಟೇ ಖರೀದಿಸಿದ್ದರು ಎಂಬುದೇ ಅಚ್ಚರಿ ಮತ್ತು ಕುತೂಹಲಕಾರಿ ವಿಷಯವಾಗಿದೆ.
22 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದ: ಕಳೆದ 22 ವರ್ಷಗಳಿಂದ ಲಾಟರಿ ಟಿಕೆಟ್ಗಳನ್ನು ಅನೂಪ್ ಖರೀದಿಸುತ್ತಿದ್ದರು. ಈ ಹಿಂದೆ ಕನಿಷ್ಠ ನೂರರಿಂದ ಗರಿಷ್ಠ 5 ಸಾವಿರ ರೂ.ವರೆಗೆ ಮೊತ್ತದ ಲಾಟರಿ ಹಣ ಗೆದ್ದಿದ್ದಾರೆ. ಹೀಗಾಗಿಯೇ ನನಗೆ ಇಂದು ಕೂಡ ಲಾಟರಿ ಗೆಲ್ಲುವ ನಿರೀಕ್ಷೆ ಇರಲಿಲ್ಲ. ಅಲ್ಲದೇ, ನಾನು ಟಿವಿಯಲ್ಲಿ ಲಾಟರಿ ಫಲಿತಾಂಶಗಳನ್ನು ನೋಡುತ್ತಿರಲಿಲ್ಲ. ಆದರೆ, ನಾನು ನನ್ನ ಫೋನ್ ಪರಿಶೀಲಿಸಿದಾಗ ಲಾಟರಿ ಗೆದ್ದಿರುವ ವಿಷಯ ಗೊತ್ತಾಯಿತು ಎಂದು ಅನೂಪ್ ತಿಳಿಸಿದರು.
ಈ ಲಾಟರಿ ಗೆದ್ದಿರುವುದು ಮೊದಲಿಗೆ ನನಗೆ ನಂಬಲು ಸಾಧ್ಯವಾಗಲಿಲ್ಲ. ಆದ್ದರಿಂದ ಅದನ್ನು ನನ್ನ ಹೆಂಡತಿಗೆ ತೋರಿಸಿದೆ. ಆಗ ಇದೇ ಲಾಟರಿ ಸಂಖ್ಯೆ ಎಂದು ಪತ್ನಿ ಖಚಿತಪಡಿಸಿದಳು. ಆದರೂ, ನಾನು ಇದನ್ನು ನಂಬಲು ಆಗಲಿಲ್ಲ. ಆದ್ದರಿಂದ ಲಾಟರಿ ಟಿಕೆಟ್ ಮಾರಾಟ ಮಾಡುವ ನನಗೆ ತಿಳಿದಿರುವ ಮಹಿಳೆಗೆ ಕರೆ ಮಾಡಿ ನನ್ನ ಟಿಕೆಟ್ನ ಫೋಟೋವನ್ನು ಅವರಿಗೆ ಕಳುಹಿಸಿದೆ. ಅವರೂ ಕೂಡ ಇದೇ ವಿನ್ನಿಂಗ್ ಲಾಟರಿ ಸಂಖ್ಯೆ ಎಂದು ಖಾತ್ರಿಪಡಿಸಿದರು ಎಂದು ಅನೂಪ್ ಸಂತಸ ವ್ಯಕ್ತಪಡಿಸಿದರು.
ಮೊದಲಿಗೆ ಬೇರೆ ಲಾಟರಿ ಟಿಕೆಟ್ ನೋಡಿದ್ದ ಅನೂಪ್: ಆಟೋ ರಿಕ್ಷಾ ಚಾಲಕರಾದ ಅನೂಪ್ ಮೊದಲಿಗೆ ಬೇರೆ ಸಂಖ್ಯೆಯ ಟಿಕೆಟ್ ನೋಡಿದ್ದರು. ಆದರೆ, ಆ ಲಾಟರಿ ಟಿಕೆಟ್ ಅವರಿಗೆ ಇಷ್ಟವಾಗಲಿಲ್ಲ. ಹೀಗಾಗಿ ಅವರು ಬೇರೆಯದನ್ನು ಆಯ್ಕೆ ಮಾಡಿಕೊಂಡು ಬಂಪರ್ ಹೊಡೆದಿದ್ದಾರೆ ಎಂದು ಲಾಟರಿ ಮಾರಾಟದ ಏಜೆನ್ಸಿಯವರು ತಿಳಿಸಿದ್ದಾರೆ.
ಚೆಫ್ ಆಗಲು ನಿರ್ಧರಿಸಿದ್ದ ಆಟೋ ಚಾಲಕ: ಅನೂಪ್ ಚೆಫ್ ಆಗಿ ಕೆಲಸ ಮಾಡಲು ಮಲೇಷ್ಯಾಕ್ಕೆ ತೆರಳಲು ಮುಂದಾಗಿದ್ದರು. ಇದಕ್ಕಾಗಿ ಸಾಲಕ್ಕಾಗಿ ಅರ್ಜಿಯನ್ನೂ ಹಾಕಿದ್ದರು. ಮೂರು ಲಕ್ಷ ರೂ. ಸಾಲದ ಅರ್ಜಿಯನ್ನು ಅಂಗೀಕರಿಸಲಾಗಿತ್ತು. ಆದರೆ, ಇದಾದ ಒಂದೇ ದಿನದ ನಂತರ ಈ ಲಾಟರಿ ಹೊಡೆದಿದೆ. ಈ ಬಗ್ಗೆಯೂ ಮಾತನಾಡಿರುವ ಅನೂಪ್, ಸಾಲದ ಬಗ್ಗೆ ಇಂದು ಕೂಡ ಬ್ಯಾಂಕ್ನವರು ಕರೆ ಮಾಡಿದ್ದರು. ಆದರೆ, ನನಗೆ ಇನ್ಮುಂದೆ ಅದರ ಅಗತ್ಯವಿಲ್ಲ. ನಾನು ಮಲೇಷ್ಯಾಕ್ಕೆ ಹೋಗುವುದಿಲ್ಲ ಅಂತಾ ತಿಳಿಸಿದೆ ಎಂದು ಹೇಳಿದರು.
ಕೈಗೆ ಸಿಗಲಿದೆ 15 ಕೋಟಿ ರೂಪಾಯಿ: ಓಣಂ ಬಂಪರ್ ಲಾಟರಿಯಲ್ಲಿ 25 ಕೋಟಿ ರೂ.ಗಳ ಗೆದ್ದಿರುವ ಅನೂಪ್ ಅವರಿಗೆ ತೆರಿಗೆ ಕಡಿತ ಸೇರಿ ಕೊನೆಗೆ ಸುಮಾರು 15 ಕೋಟಿ ರೂ. ಹಣ ಸಿಗಲಿದೆ. ಈ ಹಣದಲ್ಲಿ ಏನು ಮಾಡಲು ಉದ್ದೇಶಿಸಿದ್ದೀರಿ ಎಂಬ ಪ್ರಶ್ನೆಗೆ ಅವರು, ಮನೆ ನಿರ್ಮಿಸುವುದು ಮೊದಲ ಆದ್ಯತೆಯಾಗಿದೆ. ಜೊತೆಗೆ ಬಾಕಿ ಇರುವ ಸಾಲವನ್ನು ತೀರಿಸಲಾಗುವುದು ಎಂದು ತಿಳಿಸಿದರು.
![Kerala auto-rickshaw driver wins Rs 25 crore Onam bumper lottery](https://etvbharatimages.akamaized.net/etvbharat/prod-images/16408165_thum11111.jpeg)
ಅದಲ್ಲದೆ, ನನ್ನ ಸಂಬಂಧಿಕರಿಗೆ ಸಹಾಯ ಮಾಡುತ್ತೇನೆ. ಕೆಲವು ಚಾರಿಟಿ ಕೆಲಸಗಳನ್ನೂ ಮಾಡುತ್ತೇನೆ. ಕೇರಳದ ಹೋಟೆಲ್ ಕ್ಷೇತ್ರದಲ್ಲಿ ಏನನ್ನಾದರೂ ಹೊಸದನ್ನು ಪ್ರಾರಂಭಿಸುವ ಯೋಜನೆ ಇದೆ ಎಂದು ಅನೂಪ್ ಹೇಳಿದ್ದಾರೆ. ಇದೇ ವೇಳೆ ಪತಿ ಜೊತೆಗೆ ಪತ್ನಿ ಮಾತನಾಡಿ, ಅನೂಪ್ 22 ವರ್ಷಗಳಿಂದ ಟಿಕೆಟ್ ಖರೀದಿಸುತ್ತಿದ್ದಾರೆ. ಈಗ ಲಾಟರಿ ಹೊಡೆದ ಬಗ್ಗೆ ಎಲ್ಲರಿಗೂ ತಿಳಿದಾಗಿನಿಂದ ನಮಗೆ ಸಾಕಷ್ಟು ಕರೆಗಳು ಬರುತ್ತಿವೆ ಎಂದರು.
ಕಳೆದ ವರ್ಷದ ಓಣಂ ಬಂಪರ್ ಲಾಟರಿಯಲ್ಲಿ ಆಟೋ ರಿಕ್ಷಾ ಚಾಲಕ ಜಯಪಾಲನ್ ಎಂಬುವರು 12 ಕೋಟಿ ರೂ.ಗಳನ್ನು ಗೆದ್ದಿದ್ದಾರೆ. ಈ ವರ್ಷ ಇದರ ದುಪ್ಪಟ್ಟು ಲಾಟರಿ ಹಣ ಕೂಡ ಆಟೋ ರಿಕ್ಷಾ ಚಾಲಕನಿಗೆ ಬಂದಿದೆ ಎಂಬುದೇ ವಿಶೇಷವಾಗಿದೆ. ಇಲ್ಲಿನ ಗೋರ್ಕಿ ಭವನದಲ್ಲಿ ಭಾನುವಾರ ಮುಂಜಾನೆ ನಡೆದ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ರಾಜ್ಯ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಅವರು ವಿಜೇತ ಸಂಖ್ಯೆಯನ್ನು ಆಯ್ಕೆ ಮಾಡಿದರು.
ಇದನ್ನೂ ಓದಿ: ₹1 ಕೋಟಿ ಲಾಟರಿ ಗೆದ್ದ ವ್ಯಕ್ತಿ.. ಸಾಲದ ಸುಳಿಯಲ್ಲಿ ಸಿಲುಕಿ ಮನೆ ಮಾರಲು ಮುಂದಾದವನಿಗೆ ಜಾಕ್ಪಾಟ್!