ಶ್ರೀನಗರ (ಜಮ್ಮು-ಕಾಶ್ಮೀರ): ಕಾಶ್ಮೀರದಲ್ಲಿ ಅಲ್ಪಸಂಖ್ಯಾತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತು ಎನ್ಐಎ ಶ್ರೀನಗರದ ವಿವಿಧ ಶಾಲೆಗಳ 40 ಶಿಕ್ಷಕರನ್ನು ವಿಚಾರಣೆಗೆ ಕರೆಸಿದೆ. ಅಲ್ಲದೆ, ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾಶ್ಮೀರ ಕಣಿವೆಯಲ್ಲಿ ಕಳೆದ ವಾರ ನಡೆದ ನಾಗರಿಕರ ಹತ್ಯೆಯ ನಂತರ ನೂರಾರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ವರದಿಗಳ ಪ್ರಕಾರ, ಕಣಿವೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೊಲೀಸರು ಮತ್ತು ಇತರ ಭದ್ರತಾ ಏಜೆನ್ಸಿಗಳು 400ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ವಶಕ್ಕೆ ಪಡೆದಿರುವವರ ಪೈಕಿ ಬಹುತೇಕರು ಜಮಾತ್-ಎ-ಇಸ್ಲಾಮಿ ಮತ್ತು ತೆಹ್ರೀಕ್-ಇ-ಹುರಿಯತ್ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗಿದೆ. ಜತೆಗೆ ಕೆಲವರು ಉಗ್ರರ ಜತೆಯೂ ಸಂಪರ್ಕ ಹೊಂದಿದ್ದಾರೆ ಎಂದು ಶಂಕಿಸಲಾಗಿದೆ.
ಕಳೆದ ವಾರ ಶ್ರೀನಗರದಲ್ಲಿ ಉಗ್ರರು, ನಾಲ್ವರು ಹಿಂದೂಗಳು ಮತ್ತು ಸಿಖ್ಖರು ಸೇರಿದಂತೆ ಏಳು ಜನರನ್ನು ಹತ್ಯೆಗೈದಿದ್ದರು. ದೀಪಕ್ ಚಂದ್, ಸತೀಂದರ್ ಕೌರ್, ಖ್ಯಾತ ವೈದ್ಯ ಮಖನ್ ಲಾಲ್ ಬಿಂದ್ರೂ, ಬಂಡಿಪೋರಾದ ಮುಹಮ್ಮದ್ ಶಾಫಿ ಲೋನ್ ಮತ್ತು ಸ್ಥಳೀಯ ಬೀದಿ ವ್ಯಾಪಾರಿ ವೀರೇಂದ್ರ ಪಾಸ್ವಾನ್ ಹಾಗೂ ಇಬ್ಬರು ಶಿಕ್ಷಕರು ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳ ಹಿರಿಯ ಅಧಿಕಾರಿಗಳನ್ನು ಜಮ್ಮುಕಾಶ್ಮೀರಕ್ಕೆ ಕಳುಹಿಸಿದೆ. ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಹತ್ಯೆಯ ನಂತರ, ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಇತರ ಭದ್ರತಾ ಪಡೆಗಳು ಮತ್ತು ಏಜೆನ್ಸಿಗಳಿಗೆ ಉಗ್ರ ಸಂಘಟನೆಗಳ ವಿರುದ್ಧ ಕಾರ್ಯಾಚರಣೆಗಳನ್ನು ಚುರುಕುಗೊಳಿಸುವಂತೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.