ಉತ್ತರಕಾಶಿ(ಉತ್ತರಾಖಂಡ): ದೇಶದಲ್ಲಿ ಕೊರೊನಾದ ಎರಡನೇ ಅಲೆ ಹೆಚ್ಚಾಗುತ್ತಿದ್ದು, ಆತಂಕ ಹುಟ್ಟುಸುತ್ತಿದೆ. ಮತ್ತೊಂದೆಡೆ ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡುತ್ತಿದೆ. ಆದರೆ, ಉತ್ತರಕಾಶಿಯ ಸಾರ್ ಬಡಿಯಾರ್ ಪ್ರದೇಶದಲ್ಲಿ ವ್ಯಾಕ್ಸಿನ್ ಪಡೆಯಲು ಜನರು ಹರಸಾಹಸ ಪಡುತ್ತಿದ್ದಾರೆ.
ಸಾರ್ ಬಡಿಯಾರ್ ಪ್ರದೇಶ ಗುಡ್ಡಗಾಡು ಪ್ರದೇಶವಾಗಿದ್ದು, ದೂರದೂರದ ಪ್ರದೇಶಗಳಲ್ಲಿ ಜನರು ವಾಸಿಸುತ್ತಿದ್ದಾರೆ. ಹೀಗಿರುವಾಗ ಅಲ್ಲಿನ ಆರೋಗ್ಯ ಇಲಾಖೆ ಸುಮಾರು 8 ಕಿಮೀ ದೂರದಲ್ಲಿ ಕೊರೊನಾ ವಿತರಣಾ ಕೇಂದ್ರ ತೆರೆದಿದೆ. ಕೇಂದ್ರಕ್ಕೆ ಹೋಗಲು ಇಲ್ಲಿನ ಜನರಿಗೆ ಯಾವುದೇ ವಾಹನ ವ್ಯವಸ್ಥೆಯಾಗಲಿ, ರಸ್ತೆ ವ್ಯವಸ್ಥೆ ಇಲ್ಲ. ಜನರು ಲಸಿಕೆ ಪಡೆಯಬೇಕಾದರೆ ಇಷ್ಟು ದೂರ ಕ್ರಮಿಸಬೇಕಾದ ಅನಿವಾರ್ಯತೆ ಇದ್ದು, ಹಿರಿಯ ನಾಗರಿಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.

ನಾವು ಆರೋಗ್ಯ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆಯಬೇಕಾದರೆ ಸುಮಾರು 8 ರಿಂದ 9 ಕಿಮೀ ನಡೆದುಕೊಂಡು ಹೋಗಬೇಕು. ನನಗೆ 60 ವರ್ಷ ವಯಸ್ಸಾಗಿದ್ದು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇನೆ. ನಮಗೆ ಯಾವುದೇ ವಾಹನವಾಗಲಿ, ಸೇತುವೆಯಾಗಲಿ ಇಲ್ಲ. ಅಧಿಕಾರಿಗಳು ನಮಗಾಗಿ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ಅಲ್ಲಿನ ಹಿರಿಯ ಜೀವಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಹಿಂದೆ ಜಿಲ್ಲಾಡಳಿತವು ವೃದ್ಧರಿಗೆ ಅನುಕೂಲವಾಗಲಿ ಎಂದು ವ್ಯಾಕ್ಸಿನೇಷನ್ ಕೇಂದ್ರವನ್ನು ಹತ್ತಿರದ ಗ್ರಾಮಗಳಾದ ಪಾಂಟಿ ಮತ್ತು ಸಾರ್ಗಳಲ್ಲಿ ಸ್ಥಾಪಿಸಿತ್ತು. ಆದರೆ, ಎರಡು ದಿನಗಳ ಹಿಂದೆ ಕೇಂದ್ರವನ್ನು ತರಾತುರಿಯಲ್ಲಿ ಬದಲಾಯಿಸಿ ಸರ್ನಾಲ್ ಗ್ರಾಮದಲ್ಲಿ ಸ್ಥಾಪನೆ ಮಾಡಿದೆ. ಇದರಿಂದಾಗಿ ಸುಮಾರು 8 ಗ್ರಾಮಗಳ ಜನರು ತೊಂದರೆ ಅನುಭವಿಸುತ್ತಿದ್ದು, ಅದರಲ್ಲೂ ವೃದ್ಧರು ಗೋಳು ಹೇಳ ತೀರದ್ದಾಗಿದೆ.

ಓದಿ: ಪಂಚರಾಜ್ಯ ಕದನ: ಅಸ್ಸೋಂನಲ್ಲಿ ಬಿಜೆಪಿಗಿದೆ ಕಠಿಣ ಸವಾಲು
ಸರ್ಕಾರದ ನಿಯಮದ ಪ್ರಕಾರ ವ್ಯಾಕ್ಸಿನ್ ನೀಡುವಂತಹ ವಾಹನ ಅಥವಾ ಕೆಂದ್ರಗಳನ್ನ 1.2 ಕಿಮೀ ಅಂತರ ಒಳಗೆ ಸ್ಥಾಪಿಸಬೇಕೆಂಬ ನಿಯಮವಿದೆ. ಆದರೆ, ಉತ್ತರಕಾಶಿಯಲ್ಲಿ ಮಾತ್ರ ಈ ನಿಯಮ ಪಾಲನೆಯಾಗಿಲ್ಲ. ಈ ಕುರಿತಂತೆ ಅಧಿಕಾರಿಗಳನ್ನು ಕೇಳಿದರೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಸಬೂಬು ಹೇಳಿತ್ತಿದ್ದಾರೆ.