ನವದೆಹಲಿ: ಜನಗಣತಿ ನಂತರ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ ಎಂದು ಹೇಳುವ ಕಾನೂನಿನ ಒಂದು ಭಾಗವನ್ನು ರದ್ದುಗೊಳಿಸುವುದು ತುಂಬಾ ಕಷ್ಟ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಸಲ್ಲಿಸಿದ ಮನವಿಗೆ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್ವಿಎನ್ ಭಟ್ಟಿ ಅವರ ಪೀಠವು ನೋಟಿಸ್ ನೀಡಲು ನಿರಾಕರಿಸಿದೆ.
ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣವೇ ಜಾರಿಗೆ ತರಬೇಕೆಂದು ಕಾಂಗ್ರೆಸ್ ನಾಯಕಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರನ್ನು ಪ್ರತಿನಿಧಿಸಿದ ಹಿರಿಯ ವಕೀಲ ವಿಕಾಸ್ ಸಿಂಗ್, ಜನಗಣತಿ ನಂತರ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ ಎಂದು ಹೇಳುವ ಕಾನೂನಿನ ಒಂದು ಭಾಗವನ್ನು ಅಸಿಂಧುಗೊಳಿಸಬೇಕೆಂದು ವಾದ ಮಂಡಿಸಿದರು. ಈ ವಾದವನ್ನು ಒಪ್ಪಿಕೊಳ್ಳಲು ನಿರಾಕರಿಸಿದಾಗ ನ್ಯಾಯಪೀಠವು, ಇದು ತುಂಬಾ ಒಳ್ಳೆಯ ಹೆಜ್ಜೆ ಎಂದು ಕಾನೂನಿನ ವಿಷಯವಾಗಿ ತಿಳಿಸಿದೆ. ಅಲ್ಲದೇ, ಇದೇ ವಿಷಯದ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಬಾಕಿ ಉಳಿದಿದ್ದು, ನವೆಂಬರ್ 22ರಂದು ಈ ಮನವಿಯನ್ನೂ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದೆ.
ಇದೇ ವೇಳೆ, ಈ ಅರ್ಜಿ ಸಂಬಂಧ ನೋಟಿಸ್ ನೀಡುವಂತೆ ಮತ್ತು ಮನವಿಯನ್ನು ಇತರ ವಿಷಯದೊಂದಿಗೆ ಪಟ್ಟಿ ಮಾಡುವಂತೆ ಅರ್ಜಿದಾರರ ವಕೀಲ ಸಿಂಗ್ ಕೇಳಿಕೊಂಡರು. ಈ ಅರ್ಜಿಗೆ ನೋಟಿಸ್ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಅಲ್ಲದೇ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು ದತ್ತಾಂಶ ಸಂಗ್ರಹಣೆಗೆ ಜನಗಣತಿಯ ಅಗತ್ಯವಿದೆ. ಮಹಿಳಾ ಮೀಸಲಾತಿ ಕಾನೂನಿನ ಸಂದರ್ಭದಲ್ಲಿ ಜನಗಣತಿಯ ಪ್ರಶ್ನೆಯು ಹೇಗೆ ಉದ್ಭವಿಸುತ್ತದೆ ಎಂದು ವಕೀಲ ಸಿಂಗ್ ಪ್ರಶ್ನಿಸಿದರು.