ಗುಜರಾತ್: ಗುಜರಾತ್ನ ಕೆವಾಡಿಯಾದಲ್ಲಿ ನಿನ್ನೆಯಿಂದ ಪ್ರಾರಂಭವಾದ ಮೂರು ರಕ್ಷಣಾ ಪಡೆ ಕಮಾಂಡರ್ಗಳ 'ಕಂಬೈನ್ಡ್ ಕಮಾಂಡರ್ಸ್ ಕಾನ್ಫರೆನ್ಸ್' ನಲ್ಲಿ (ಸಿಸಿಸಿ) ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಭಾಗವಹಿಸಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ್ದ ರಾಜನಾಥ್ ಸಿಂಗ್, ಎರಡು ದಿನ ಗುಜರಾತ್ ಪ್ರವಾಸ ಕೈಗೊಂಡಿದ್ದು, ಕೆವಾಡಿಯಲ್ಲಿ ನಡೆಯುತ್ತಿರುವ ಭಾರತದ ಭದ್ರತಾ ಪರಿಸ್ಥಿತಿ ಮತ್ತು ರಕ್ಷಣಾ ಸನ್ನದ್ಧತೆಯನ್ನು ಪರಿಶೀಲಿಸಲಾಗುವ ಸಂಯೋಜಿತ ಕಮಾಂಡರ್ಗಳ ಸಮಾವೇಶದಲ್ಲಿ ಇಂದು ಪಾಲ್ಗೊಳ್ಳಲಿದ್ದೇನೆ ಎಂದು ತಿಳಿಸಿದ್ದರು.
ಮಾರ್ಚ್ 4 ರಿಂದ ಮೂರು ದಿನಗಳ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಜಂಟಿ ಕಾರ್ಯಾಚರಣೆ ಯೋಜನೆ, ಸಾಂಸ್ಥಿಕ ಸಮಸ್ಯೆಗಳು, ಮೂರೂ ರಕ್ಷಣಾ ಪಡೆಗಳ ನಡುವಿನ ಹೊಂದಾಣಿಕೆ ಹಾಗೂ ಭಾರತೀಯ ನೌಕಾಪಡೆಯ ಕಾರ್ಯಾಚರಣೆ ಸಿದ್ಧತೆಯನ್ನು ಉತ್ತಮಗೊಳಿಸುವ ಮಾರ್ಗಗಳ ಕುರಿತು ಚರ್ಚೆ ಮಾಡಲಾಗುತ್ತಿದೆ. ಮೂರು ಸೇವೆಗಳಿಂದ ಸುಮಾರು 30 ಅಧಿಕಾರಿಗಳು ಮತ್ತು ವಿವಿಧ ಶ್ರೇಣಿಯ ಸೈನಿಕರು ಭಾಗವಹಿಸಿದ್ದಾರೆ.
ಈ ಸಮಾವೇಶದ ಅಂತಿಮ ದಿನದಂದು ಪ್ರಧಾನಿ ಮೋದಿಯವರು ಅಧ್ಯಕ್ಷತೆ ವಹಿಸಿಕೊಂಡು ಭಾಷಣ ಮಾಡಲಿದ್ದಾರೆ. ಜೊತೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಸಹ ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.