ವಾರಾಣಸಿ: ಧಾರ್ಮಿಕ ನಗರಿ ಕಾಶಿಯಲ್ಲಿ ಮಂಗಳವಾರದಿಂದ ಮಹಾನಾಟ್ಯ ಜನತಾರಾಜೋತ್ಸವ ಆರಂಭವಾಗಿದ್ದು, ಮೊದಲ ದಿನ ಛತ್ರಪತಿ ಶಿವಾಜಿ ಜೀವನಗಾಥೆಗೆ ವಾರಣಾಸಿ ಸಾಕ್ಷಿಯಾಯಿತು.
ಛತ್ರಪತಿ ಶಿವಾಜಿ ಜೀವನದ ಕಥೆ ಹಾಗೂ ಹಿಂದವಿ ಸ್ವರಾಜ್ ಘೋಷಣೆಯಾದ ಬಗೆಗೆ ಮೊದಲ ಸಂಚಿಕೆ ಆರಂಭವಾಗಿದ್ದು, ಪ್ರಸ್ತುತಿ ವೀಕ್ಷಕರನ್ನು ಮಂತ್ರಮುಗ್ಧಗೊಳಿಸಿದೆ. ನಿಜವಾದ ಆನೆಗಳು, ಕುದುರೆಗಳು ಹಾಗೂ ಒಂಟೆಗಳನ್ನು ನಾಟಕದಲ್ಲಿ ಬಳಸಲಾಗಿದ್ದು, ಕಥಾನಕಕ್ಕೆ ಇನ್ನಷ್ಟು ಜೀವಂತಿಕೆ ತುಂಬಿತ್ತು. ವೀಕ್ಷಕರನ್ನು 17ನೇ ಶತಮಾನಕ್ಕೆ ಹೋದಂತೆ ಮಾಡಿ, ಶಿವಾಜಿ ಪಟ್ಟಾಭಿಷೇಕವನ್ನು ಕಣ್ತುಂಬಿಕೊಳ್ಳುವಂತೆ ಕಲಾವಿದರು ಅಭಿನಯಿಸಿದ್ದಾರೆ.
![Chhatrapati Shivaji mahanatya janata raja begins at varanasi](https://etvbharatimages.akamaized.net/etvbharat/prod-images/22-11-2023/20086167_thumbnailmeg.jpg)
ಬಿಎಚ್ಯುನ ಎಂಪಿ ಥಿಯೇಟರ್ ಮೈದಾನದಲ್ಲಿ ಛತ್ರಪತಿ ಶಿವಾಜಿ ಅವರ ಜೀವನಾಧಾರಿತ ಜನತಾ ರಾಜ ನಾಟಕವನ್ನು ಕಲಾವಿದರು ಪ್ರದರ್ಶಿಸಿದರು. ಮೊದಲ ದಿನ ಛತ್ರಪತಿ ಜೀವನದಿಂದ ಹಿಡಿದು ಪಟ್ಟಾಭಿಷೇಕದವರೆಗಿನ ಘಟನೆಗಳನ್ನು ಪ್ರದರ್ಶಿಸಲಾಯಿತು. ಮಹಾರಾಷ್ಟ್ರದ ಮೇಲೆ ಪಠಾಣರ ದಾಳಿಯೊಂದಿಗೆ ನಾಟಕ ಪ್ರಾರಂಭಗೊಂಡಿತ್ತು. ಅಲ್ಲಲ್ಲಿ ಪುರುಷ ಹಾಗೂ ಮಹಿಳಾ ಕಲಾವಿದರಿಂದ ಮರಾಠಿ ಜಾನಪದ ನೃತ್ಯ, ಲಾವಣಿಯ ಸಂಭ್ರಮವಿತ್ತು. ವಿಶೇಷವೆಂದರೆ ಈ ವೇಳೆ ಹಿಂದವಿ ಸ್ವರಾಜ್ ಘೋಷಣೆ ಎಲ್ಲರನ್ನು ರೋಮಾಂಚನಗೊಳಿಸಿತು.
ಶಿವಾಜಿಯ ಜನನ, ಶಿಕ್ಷಣ, ಯೋಧನಾಗುವ ಬಗೆ, ಬೆಳೆಯುತ್ತಾ ಹಿಂದವಿ ಸ್ವರಾಜ್ನ ಆಜ್ಞೆ ತೆಗೆದುಕೊಳ್ಳುವ ಶಿವಾಜಿ, ಕೊಂಕಣ ಸೇರಿ 84 ಬಂದರುಗಳನ್ನು ಶಿವಾಜಿ ವಶಪಡಿಸಿಕೊಳ್ಳುವ ಮೊದಲಾರ್ಧದಲ್ಲಿತ್ತು. ಮಧ್ಯಂತರದ ನಂತರ ಶಿವಾಜಿ ಶೈಸ್ತಾ ಖಾನ್ನ 1.25 ಲಕ್ಷ ಸೈನಿಕರನ್ನು ಸೋಲಿಸುವುದು, ನಂತರ ಶಿವಾಜಿಗೆ ಪಟ್ಟಾಭಿಷೇಕ- ಆ ಸಂದರ್ಭದ ವೈಭವದ ದೃಶ್ಯ ನಾಟಕದಲ್ಲಿತ್ತು. ಕಾಶಿಯಲ್ಲಿ 17ನೇ ಶತಮಾನವನ್ನು ಕಲಾವಿದರು ಸೇರಿ ಮತ್ತೆ ಜೀವಂತವಾಗಿಸಿದ್ದರು. ಮೊದಲ ದಿನ ಸುಮಾರು 10,000 ಜನರು ನಾಟಕವನ್ನು ವೀಕ್ಷಿಸಿದರು.
![Chhatrapati Shivaji mahanatya janata raja begins at varanasi](https://etvbharatimages.akamaized.net/etvbharat/prod-images/22-11-2023/20086167_thumailmeg.jpg)
ಮೂರು ದಶಕಗಳ ಹಿಂದೆ ಈ ನಾಟಕ ಆರಂಭ: 300 ಕಲಾವಿದರು ಸೇರಿ ನಾಟಕವನ್ನು ಪ್ರಸ್ತುತ ಪಡಿಸಿದ್ದು, ನಾಟಕದಲ್ಲಿ ಜೀವಂತ ಆನೆ, ಕುದುರೆ, ಒಂಟೆಗಳನ್ನು ಬಳಸಲಾಗಿತ್ತು. ಮಹಾರಾಷ್ಟ್ರದ ಪುಣೆಯಿಂದ 80 ಕಲಾವಿದರು, ಸುಮಾರು 200 ಕಲಾವಿದರು ಸ್ಥಳೀಯರೇ ಆಗಿದ್ದಾರೆ. ಶಿವಾಜಿ ವಂಶಸ್ಥರು ಸ್ಥಾಪಿಸಿದ ಪುಣೆಯ ಮಹಾರಾಜ ಛತ್ರಪತಿ ಶಿವಾಜಿ ಪ್ರತಿಷ್ಥಾನ ಟ್ರಸ್ಟ್ ಮೂರು ದಶಕಗಳ ಹಿಂದೆ ಈ ಮಹಾನ್ ನಾಟಕವನ್ನು ಆರಂಭಿಸಿತ್ತು. ಪ್ರಾರಂಭದಲ್ಲಿ ಇದನ್ನು ಮರಾಠಿಯಲ್ಲಿ ಪ್ರಸ್ತುತಪಡಿಸಲಾಗಿತ್ತು. ನಂತರ ಇದನ್ನು ಹಿಂದಿಗೆ ಅಳವಡಿಸಲಾಯಿತು. ಇದುವರೆಗೆ ಈ ನಾಟಕವು ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಹಲವು ದೇಶಗಳಲ್ಲಿ 1100ಕ್ಕೂ ಹೆಚ್ಚು ಬಾರಿ ಪ್ರದರ್ಶನ ಕಂಡಿವೆ. ಈ ಬಾರಿ ಕಾಶಿಯಲ್ಲಿ 1138ನೇ ಬಾರಿ ಪ್ರದರ್ಶನ ಕಾಣುತ್ತಿದೆ.
350 ವರ್ಷಗಳ ಹಿಂದಿನ ಇತಿಹಾಸಕ್ಕೆ ಸಾಕ್ಷಿಯಾದ ಕಾಶಿ: ಮೊಘಲ್ ಚಕ್ರವರ್ತಿ, ಬ್ರಿಟಿಷರು, ಆದಿಲ್ ಷಾ ಹಾಗೂ ಅಫ್ಜಲ್ ಖಾನ್ ಅವರ ಜೊತೆಗೆ ಶಿವಾಜಿ ಸಂಘರ್ಷಗಳ ಪ್ರಸ್ತುತಿ ಕಣ್ಣಿಗೆ ಕಟ್ಟುವಂತಿದ್ದವು. ಶಿವಾಜಿ ಮಹಾರಾಜರ ಪಟ್ಟಾಭಿಷೇಕಕ್ಕೆ ಕಾಶಿ ಮತ್ತೊಮ್ಮೆ ಸಾಕ್ಷಿಯಾಗಿದೆ.
![Chhatrapati Shivaji mahanatya janata raja begins at varanasi](https://etvbharatimages.akamaized.net/etvbharat/prod-images/22-11-2023/20086167_thumbnaimeg.jpg)
ಇಂದು ಔರಂಗಜೇಬನ ಜೊತೆ ಯುದ್ಧದ ಕಥೆ ಪ್ರದರ್ಶನ: ಹಿಂದವಿ ಸ್ವರಾಜ್ಯ ಕನಸನ್ನು ನನಸಾಗಿಸಲು ಶಿವಾಜಿಯ ಹೋರಾಟ, ಔರಂಗಜೇಬನೊಂದಿಗೆ ಶಿವಾಜಿಯ ಯುದ್ಧದ ಕುರಿತು ಇಂದಿನ ಪ್ರಸ್ತುತಿ ಇರಲಿದೆ. ಇಂದಿನ ಪ್ರದರ್ಶನಕ್ಕೆ ಮುಖ್ಯ ಅತಿಥಿಯಾಗಿ ಉಪಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ಆಗಮಿಸಲಿದ್ದಾರೆ.
ಇದನ್ನೂ ಓದಿ: "ಕರ್ನಾಟಕ ಏಕೀಕರಣ" ನಾಟಕ ಮೂಲಕ ಕನ್ನಡಿಗರ ಸ್ವಾಭಿಮಾನ ಬಡಿದೆಬ್ಬಿಸಿದ ಏಣಗಿ ಬಾಳಪ್ಪ