ನವದೆಹಲಿ: ವಂಚನೆಯ ಆರೋಪಿಯಿಂದ ಲಂಚ ಕೇಳಿದ ಗಂಭೀರ ಆರೋಪ ಪ್ರಕರಣದಡಿ ಅಧಿಕಾರಿಗಳೇ ಅಂದರ್ ಆಗಿದ್ದಾರೆ. ಗುಜರಾತ್ನಲ್ಲಿ ಲಂಚ ಪಡೆಯುತ್ತಿದ್ದ ಇಡಿಯ ಇಬ್ಬರು ಅಧಿಕಾರಿಗಳನ್ನು ಸಿಬಿಐ ಬಂಧಿಸಿದೆ.
ಬ್ಯಾಂಕ್ವೊಂದಕ್ಕೆ 104 ಕೋಟಿ ರೂ.ಗಳನ್ನು ವಂಚಿಸಿದ ಆರೋಪ ಎದುರಿಸುತ್ತಿರುವ ಗುಜರಾತ್ ಮೂಲದ ಸಂಸ್ಥೆಯೊಂದರ ಮಾಲೀಕರಿಂದ 75 ಲಕ್ಷ ರೂ. ಲಂಚ ಕೇಳಿದ ಆರೋಪದ ಮೇಲೆ ಇಡಿ ಉಪನಿರ್ದೇಶಕ ಮತ್ತು ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕರನ್ನು ಶುಕ್ರವಾರ ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2013 ರ ಬ್ಯಾಚ್ನ ಐಆರ್ಎಸ್ (ಭಾರತೀಯ ಕಂದಾಯ ಸೇವೆ)ಅಧಿಕಾರಿ, ಉಪನಿರ್ದೇಶಕ ಪೂರ್ಣ ಕಾಮ್ ಸಿಂಗ್ ಮತ್ತು ಇ.ಡಿ. ಸಹಾಯಕ ನಿರ್ದೇಶಕ ಭುವನೇಶ್ ಕುಮಾರ್, ಲಂಚದ ಮೊದಲ ಕಂತಾಗಿ 5 ಲಕ್ಷ ಹಣ ಪಡೆಯುವ ವೇಳೆ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಕ್ಯಾಸ್ಟರ್ ಆಯಿಲ್ ಮತ್ತು ಸ್ಟೀಲ್ ಪೈಪ್ಗಳ ವ್ಯವಹಾರದಲ್ಲಿ ತೊಡಗಿರುವ ಕಂಪನಿಯೊಂದರ ಮಾಲೀಕರು 104 ಕೋಟಿ ರೂ.ಗಳ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಸಿಬಿಐ ಮತ್ತು ಇಡಿ ತನಿಖೆಗೆ ಒಳಪಟ್ಟಿದ್ದಾರೆ ಎಂದು ಸಿಬಿಐ ಎಫ್ಐಆರ್ ತಿಳಿಸಿದೆ.
ಈ ಪ್ರಕರಣದಲ್ಲಿ ವಿಚಾರಣೆಗಾಗಿ ಉದ್ಯಮಿ ಮತ್ತು ಅವರ ಮಗನನ್ನು ಈ ವರ್ಷ ಏಪ್ರಿಲ್ 22 ಮತ್ತು ಮೇ 25 ರಂದು ಅಹಮದಾಬಾದ್ನ ಇಡಿ ಕಚೇರಿಗೆ ಕರೆಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ವೇಳೆ ತಮ್ಮ ವಿರುದ್ಧದ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು 75 ಲಕ್ಷ ರೂ. ಲಂಚ ನೀಡುವಂತೆ ಬಂಧಿತ ಅಧಿಕಾರಿಗಳು ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.