ನವದೆಹಲಿ: ರೈಲ್ವೆ ನಿಲ್ದಾಣಗಳ ಕೌಂಟರ್ಗಳಲ್ಲಿ ಟಿಕೆಟ್ ಬುಕ್ಕಿಂಗ್ 2-3 ದಿನಗಳಲ್ಲಿ ಪುನರಾರಂಭಗೊಳ್ಳಲಿದೆ. ಅದಕ್ಕಾಗಿ ಸಚಿವಾಲಯ ಸುರಕ್ಷಿತ ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಗುರುವಾರ ಹೇಳಿದರು. ಜೊತೆಗೆ ಇನ್ನೂ ಕೆಲವು ರೈಲುಗಳ ಸೇವೆ ಆರಂಭಿಸುವುದಾಗಿ ಅವರು ಪ್ರಕಟಿಸಿದರು.
ರೈಲ್ವೆ ಸಚಿವ ಗೋಯಲ್ ಅವರು, ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರೊಂದಿಗೆ ಸಂವಾದ ನಡೆಸುತ್ತಾ, ಸುಮಾರು 1.7 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ರೈಲು ಟಿಕೆಟ್ ಕಾಯ್ದಿರಿಸಲು ಅನುಮತಿ ನೀಡಲಾಗಿದೆ. ಲಾಕ್ಡೌನ್ ವಿಧಿಸಿದ ನಂತರ ದೇಶವನ್ನು ಸಾಮಾನ್ಯ ಸ್ಥಿತಿಗೆ ಕೊಂಡೊಯ್ಯುವ ಸಮಯ ಇದಾಗಿದೆ ಎಂದರು.
ನಿಲ್ದಾಣಗಳಲ್ಲಿ ಹೆಚ್ಚು ಸುರಕ್ಷತೆ ಕಾಪಾಡಲು ಪ್ರೋಟೋಕಾಲ್ ಅಭಿವೃದ್ಧಿಪಡಿಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಪರಿಸ್ಥಿತಿಗೆ ತಕ್ಕಂತೆ ಇನ್ನೂ ಹೆಚ್ಚಿನ ರೈಲುಗಳನ್ನು ಓಡಿಸಲಿದ್ದೇವೆ ಎಂದು ಪ್ರತಿಪಾದಿಸಿದ ಅವರು, ರೈಲ್ವೆ ನಿಲ್ದಾಣಗಳಲ್ಲಿ ಅಂಗಡಿಗಳ ಕಾರ್ಯಾಚರಣೆಗೆ ಅನುಮತಿ ನೀಡಿದ್ದೇವೆ. ಆಹಾರ ಪದಾರ್ಥಗಳನ್ನು ಪಾರ್ಸೆಲ್ ತೆಗೆದುಕೊಂಡು ಹೋಗಬಹುದು ಎಂದರು.
ಪ್ರತಿಪಕ್ಷದ ನೇತೃತ್ವದ ರಾಜ್ಯಗಳು ಶ್ರಮಿಕ್ ವಿಶೇಷ ರೈಲುಗಳ ಸಚಿವಾಲಯದೊಂದಿಗೆ ಸಹಕರಿಸುತ್ತಿಲ್ಲ ಎಂದು ಗೋಯಲ್ ಈ ವೇಳೆ ಆರೋಪಿಸಿದರು. ಅಲ್ಲದೇ, ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳುಹಿಸಲು ವಿಶೇಷ ರೈಲುಗಳನ್ನು ಓಡಿಸಲು ಕೆಲವು ರಾಜ್ಯಗಳು ನಮಗೆ ಸಹಕಾರ ನೀಡಿಲ್ಲ. ಪಶ್ಚಿಮ ಬಂಗಾಳಕ್ಕೆ ಮರಳಲು ಬಯಸುವ 40 ಲಕ್ಷ ಕಾರ್ಮಿಕರಿದ್ದಾರೆ. ಆದರೆ, ಅಲ್ಲಿಗೆ ಈವರೆಗೂ ಪ್ರವೇಶಿಸಿರುವ ವಿಶೇಷ ರೈಲುಗಳು 27 ಮಾತ್ರ ಎಂದು ತಿಳಿಸಿದರು.
ಎರಡು ದಿನಗಳ ಹಿಂದೆ ಜೂನ್ 1ರಿಂದ ಪ್ರತಿದಿನ 200 ನಾನ್-ಎಸಿ ರೈಲುಗಳನ್ನು ಓಡಿಸುವುದಾಗಿ ಘೋಷಿಸಲಾಗಿತ್ತು. ಇದಕ್ಕಾಗಿ ಐಆರ್ಸಿಟಿಸಿಯ ವೆಬ್ಸೈಟ್ನಲ್ಲಿ ಆನ್ಲೈನ್ ಬುಕ್ಕಿಂಗ್ ಪ್ರಾರಂಭಿಸಲಾಗಿದೆ. ಬರೀ ಎರಡೂವರೆ ಗಂಟೆ ಸಮಯದಲ್ಲಿ ಜೂನ್ 1ರಿಂದ ಪ್ರಾರಂಭವಾಗುವ 2ನೇ ದರ್ಜೆಯ ಪ್ಯಾಸೇಂಜರ್ ರೈಲುಗಳಿಗೆ 4 ಲಕ್ಷ ಟಿಕಟ್ಗಳನ್ನು ಕಾಯ್ದಿರಿಸಲಾಗಿದೆ.