ಸಹರಾನ್ಪುರ(ಉತ್ತರಪ್ರದೇಶ): ದೇಶದಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಹರಾನ್ಪುರ ಪೊಲೀಸ್ ಠಾಣೆಯ ಉಸ್ತುವಾರಿ ಸುಶೀಲ್ಕುಮಾರ್ ಸೈನಿ ಅವರು, ಒಂದು ದಿನ ಪೊಲೀಸ್ ಠಾಣೆಯ ಜವಾಬ್ದಾರಿಯನ್ನು 7ನೇ ತರಗತಿಯ ವಿದ್ಯಾರ್ಥಿನಿಗೆ ಒಪ್ಪಿಸಿದರು. ಜೊತೆಗೆ ವಿದ್ಯಾರ್ಥಿನಿಗೆ ಜನರ ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕು ಅನ್ನೋದರ ಕುರಿತಂತೆ ಸಲಹೆ, ಸೂಚನೆ ನೀಡಿದರು.
ಕಸ್ತೂರ ಬಾ ಗಾಂಧಿ ಬಾಲಕಿಯರ ಶಾಲೆಯ ಪ್ರಾಂಶುಪಾಲರು ಹಾಗೂ 35 ಬಾಲಕಿಯರು ಇಂದು ಪೊಲೀಸ್ ಠಾಣೆಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಪೊಲೀಸ್ ಠಾಣೆಯ ಕಾರ್ಯವೈಖರಿಯ ಬಗ್ಗೆ ವಿದ್ಯಾರ್ಥಿನಿಯರಿಗೆ ಅರಿವು ಮೂಡಿಸಲಾಯಿತು. ಜೊತೆಗೆ ಮಹಿಳಾ ಸುರಕ್ಷತೆಗೆ ಸಂಬಂಧಿಸಿದಂತೆ 1090 ಮತ್ತು 112 ಡಯಲ್ ಸಂಖ್ಯೆಗಳ ಪ್ರಾಮುಖ್ಯತೆಯನ್ನ ಬಾಲಕಿಯರಿಗೆ ತಿಳಿಸಲಾಯಿತು.
ಇದೇ ವೇಳೆ ಅವರು, 7ನೇ ತರಗತಿಯ ವಿದ್ಯಾರ್ಥಿನಿ ಶಹನುಮಾ ಮಲಿಕ್ ಅವರನ್ನು ಒಂದು ದಿನದ ಠಾಣಾ ಉಸ್ತುವಾರಿಯನ್ನಾಗಿ ನೇಮಿಸಿದರು. ವಿದ್ಯಾರ್ಥಿನಿಯು ಪೊಲೀಸ್ ಠಾಣೆಗೆ ದೂರುದಾರರು ತಂದ ಸಮಸ್ಯೆಗಳನ್ನು ಕೇಳಿ ತಕ್ಷಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ವಿದ್ಯಾರ್ಥಿಗಳಲ್ಲಿ ಅಡಗಿರುವ ಸುರಕ್ಷತಾ ಮನೋಭಾವವನ್ನು ಜಾಗೃತಗೊಳಿಸುವ ಸಲುವಾಗಿ ಸಹರಾನ್ಪುರ ಪೊಲೀಸ್ ಠಾಣೆಯ ಉಸ್ತುವಾರಿ ಸುಶೀಲ್ ಕುಮಾರ್ ಸೈನಿ ಇಂತಹ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ್ದರು. ವಿದ್ಯಾರ್ಥಿಯನ್ನು ಒಂದು ದಿನದ ಠಾಣಾ ಉಸ್ತುವಾರಿಯನ್ನಾಗಿ ನೇಮಿಸಿದ್ದರ ಹಿನ್ನೆಲೆ ವಿದ್ಯಾರ್ಥಿಯು ದೂರುದಾರರ ಸಮಸ್ಯೆಗಳನ್ನ ಆಲಿಸಿ ಕ್ರಮ ಜರುಗಿಸುವಂತೆ ಸೂಚಿಸಿದರು.