ಮುಂಬೈ: ಲಾಕ್ಡೌನ್ನಿಂದ ಜೀವನ ವಿಧಾನವೇ ಬದಲಾಗುತ್ತಿರುವ ಈ ದಿನಗಳಲ್ಲಿ ಮಹಾರಾಷ್ಟ್ರ ರಾಜಕಾರಣಿಗಳು ಹಾಗೂ ಸಚಿವರು ಸಹ ಕಾರ್ಯಶೈಲಿಯಲ್ಲಿ ಬದಲಾವಣೆ ತಂದುಕೊಳ್ಳುತ್ತಿದ್ದಾರೆ. ಲಾಕ್ಡೌನ್ ನಿರ್ಬಂಧಗಳಿಂದಾಗಿ ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಸಂಚರಿಸಲು ಸಾಧ್ಯವಾಗದ್ದರಿಂದ ಈಗ ತಂತ್ರಜ್ಞಾನದ ಸಹಾಯದಿಂದ ಕ್ಷೇತ್ರದ ಜನತೆಯೊಂದಿಗೆ ಸಂಪರ್ಕ ಸಾಧಿಸಲು ಹಾಗೂ ಆನ್ಲೈನ್ನಲ್ಲೇ ಜನಸಭೆಗಳನ್ನು ನಡೆಸಲು ಇವರೆಲ್ಲ ಮುಂದಾಗಿದ್ದಾರೆ.
ಪ್ರಸ್ತುತ ಸಮಯದಲ್ಲಿ ರಾಜಕಾರಣಿಗಳು ಮತದಾರರೊಂದಿಗೆ ಕಾರ್ಪೊರೇಟ್ ಶೈಲಿಯಲ್ಲಿ ಸಂಪರ್ಕ ಸಾಧಿಸುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಮಹಾರಾಷ್ಟ್ರ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಸೆಲ್ ಮುಖ್ಯಸ್ಥ ಅಭಿಜೀತ್ ಸಪಕಾಳ. ಮುಂಚೆ ನಡೆಯುತ್ತಿದ್ದ ಮುಖಾಮುಖಿ ಸಭೆಗಳು ಈಗ ನಿಂತು ಹೋಗಿದ್ದು, ವರ್ಚ್ಯುವಲ್ ಮೀಟಿಂಗ್ಗಳು ಈಗ ಸಾಮಾನ್ಯವಾಗುತ್ತಿವೆ.
ವರ್ಚ್ಯುವಲ್ ಮೀಟಿಂಗ್ ನಡೆಸಲು ಕಾರ್ಪೊರೇಟ್ ಕ್ಷೇತ್ರದಲ್ಲಿ ಜನಪ್ರಿಯವಾಗಿರುವ ಝೂಮ್ ಆ್ಯಪ್, ರಾಜಕಾರಣಗಳಿಗೂ ಈಗ ಅತ್ಯಂತ ಇಷ್ಟವಾಗಿದೆ. ಕಾಂಗ್ರೆಸ್ ಪಕ್ಷ ಝೂಮ್ ಆ್ಯಪ್ ಸಬ್ಸ್ಕ್ರೈಬ್ ಮಾಡಿದ್ದು, ಬಳಕೆಯ ಅನುಮತಿ ಪಡೆದುಕೊಂಡಿದೆ. ಸಬ್ಸ್ಕ್ರೈಬ್ ಮಾಡದಿದ್ದರೆ ಕೇವಲ 40 ನಿಮಿಷ ಮಾತ್ರ ಮೀಟಿಂಗ್ ನಡೆಸಬಹುದು ಹಾಗೂ ಸುರಕ್ಷತೆಗೆ ಅಪಾಯ ಬರಬಹುದು ಎಂದು ಅಭಿಜೀತ್ ಸಪಕಾಳ ಹೇಳಿದರು.
ವಿಡಿಯೋ ಕಾನ್ಫರೆನ್ಸಿಂಗ್ ಹೊಸ ಯುಗದ ಸಂಪರ್ಕ ಮಾಧ್ಯಮವಾಗಿದ್ದು, ಬಳಸಲು ಅತಿ ಸುಲಭವೂ ಆಗಿದೆ. ಬಳಕೆಯಲ್ಲಿ ಏನಾದರೂ ಸಮಸ್ಯೆಗಳಾದಲ್ಲಿ ನನ್ನ ಪುತ್ರಿ ಬಗೆಹರಿಸುತ್ತಾಳೆ ಎಂದು ಮಹಾರಾಷ್ಟ್ರದ ಲೋಕೋಪಯೋಗಿ ಸಚಿವ ಅಶೋಕ ಚವಾಣ್ ಹೇಳಿದ್ದಾರೆ.
ಒಟ್ಟಾರೆಯಾಗಿ ಲಾಕ್ಡೌನ್ ನಿರ್ಬಂಧದಲ್ಲಿ ನೂತನ ಸಂವಹನ ಮಾಧ್ಯಮಗಳ ಬಳಕೆ ರಾಜಕಾರಣಿಗಳಿಗೆ ಅನಿವಾರ್ಯವಾಗಿದೆ. ಕ್ಷೇತ್ರದ ಜನತೆ, ಅಧಿಕಾರಿಗಳು ಅಥವಾ ಪಕ್ಷದ ಹಿರಿಯ ಮುಖಂಡರೊಂದಿಗೆ ಸಭೆ ನಡೆಸುವುದು ಹೀಗೆ ಎಲ್ಲದಕ್ಕೂ ಆ್ಯಪ್ ಬಳಕೆ ಸಾಮಾನ್ಯವಾಗುತ್ತಿದೆ.