ನವದೆಹಲಿ: ಭಾರತ ಪಾಕಿಸ್ತಾನ ನಡುವೆ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದ್ದು, ದೇಶದೆಲ್ಲೆಡೆ ಜನ ಸಂಭ್ರಮಾಚರಣೆ ನಡೆಸಿದರು.
ಹೌದು, ನಿನ್ನೆ ಇಂಗ್ಲೆಂಡ್ನ ಮ್ಯಾಂಚೆಸ್ಟರ್ನಲ್ಲಿರುವ ಒಲ್ಡ್ ಟ್ರಪೋರ್ಡ್ ಕ್ರೀಡಾಂಗಣದಲ್ಲಿ ನಡೆದ ಭಾರತ ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ ಭರ್ಜರಿಯಾಗೇ ಗೆಲುವು ಸಾಧಿಸಿದ್ದು, ಇದನ್ನು ಜನ ಯುದ್ಧ ಗೆದ್ದಂತೆ ಸಂಭ್ರಮಿಸುತ್ತಿದ್ದಾರೆ.
ಮಹಾರಾಷ್ಟ್ರದ ನಾಗಪುರ, ದೆಹಲಿಯ ಇಂಡಿಯಾ ಗೇಟ್, ಸಿಲಿಗುರಿ, ಮಧ್ಯಪ್ರದೇಶದ ಇಂದೋರ್, ಮುಂಬೈ, ಖಾನ್ಪುರ್, ಬೆಂಗಳೂರು,ಲಕ್ನೋ ಹಾಗೂ ಪಂಜಾಬ್ನ ಅಮೃತಸರ ಸೇರಿದಂತೆ ದೇಶದ ಪ್ರಮುಖ ನಗರಿಗಳಲ್ಲಿ ಜನ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಭಾರತ ಗೆಲುವಿಗೆ ಸಂಭ್ರಮ ವ್ಯಕ್ತಪಡಿಸಿದ್ದು, "ಪಾಕ್ ಮೇಲೆ ಟೀಂ ಇಂಡಿಯಾದಿಂದ ಇನ್ನೊಂದು ದಾಳಿಯಾಗಿದೆ. ಅದ್ಭುತ ಪ್ರದರ್ಶನ ತೋರಿದ ಇಡೀ ತಂಡಕ್ಕೆ ಅಭಿನಂದನೆಗಳು, ಪ್ರತಿಯೊಬ್ಬ ಭಾರತೀಯನಿಗೂ ಇದು ಹೆಮ್ಮೆಯ ವಿಷಯವಾಗಿದ್ದು, ಮನ ಮುಟ್ಟುವ ಈ ಗೆಲುವನ್ನು ಎಲ್ಲರೂ ಸಂಭ್ರಮಿಸಲಿದ್ದಾರೆ" ಎಂದು ಅಮಿತ್ ಷಾ ಹೇಳಿದ್ದಾರೆ.
ಅತ್ತ ಹೀನಾಯವಾಗಿ ಸೋತಿರುವ ಪಾಕಿಸ್ತಾನ ತಂಡದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ಗಳ ಸುರಿಮಳೆಯಾಗಿದೆ. #IndiaVsPakistan #MaukaMauka #MaukaYaDhokha, #baapbaaphotahai ಮುಂತಾದ ಹ್ಯಾಷ್ ಟ್ಯಾಗ್ಗಳನ್ನು ಬಳಸಿಕೊಂಡು ಭಾರತೀಯ ನೆಟ್ಟಿಗರು ಪಾಕಿಸ್ತಾನಿ ಕ್ರಿಕೆಟ್ ತಂಡದ ಕಾಲೆಳೆದಿದ್ದಾರೆ.