ಹೈದರಾಬಾದ್: ನಮ್ಮ ಪೂರ್ವಜರು ನಮಗೆ 'ಜಗತ್ತು ಒಂದು ಕುಟುಂಬ' ಎಂಬ ತತ್ವಶಾಸ್ತ್ರವನ್ನು ನೀಡಿದ್ದಾರೆ. ರಾಷ್ಟ್ರವೆಂದರೆ ಕೇವಲ ಭೌಗೋಳಿಕ ಗಡಿಗೆ ಮಾತ್ರ ಸೀಮಿತ ಎಂದರ್ಥವಲ್ಲ, ದೇಶದ ಕಲ್ಯಾಣವೇ ರಾಷ್ಟ್ರೀಯತೆಯಾಗಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದರು.
ಹೈದರಾಬಾದ್ನ ಎಂಸಿಆರ್ ಹೆಚ್ಆರ್ಡಿ ಸಂಸ್ಥೆಯಲ್ಲಿ ನಡೆದ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 125 ನೇ ಜನ್ಮ ದಿನಾಚರಣೆ ವೇಳೆ ಮಾತನಾಡಿದ ನಾಯ್ಡು, ರಾಷ್ಟ್ರೀಯತೆ ಎಂದರೆ 'ಜೈ ಹಿಂದ್' ಎಂದು ಹೇಳುವುದು ಅಥವಾ 'ಜನ ಗಣ ಮನ' ಅಥವಾ 'ವಂದೇ ಮಾತರಂ' ಹಾಡುವುದು ಎಂದಲ್ಲ. ಪ್ರತಿಯೊಬ್ಬ ಭಾರತೀಯನ ಅಗತ್ಯಗಳನ್ನು ನೋಡಿಕೊಂಡು ಆಹಾರ, ಬಟ್ಟೆ, ವಸತಿ ಸೇರಿದಂತೆ ಮುಂತಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಎಂದರು.
ಸುಭಾಸ್ ಚಂದ್ರ ಬೋಸ್ ಅವರ ಕುರಿತು ಟ್ವೀಟ್ ಮಾಡಿದ ವೆಂಕಯ್ಯ ನಾಯ್ಡು, ನೇತಾಜಿಯವರು ಯುದ್ಧ ಕೈದಿಗಳನ್ನು ಸ್ವಾತಂತ್ರ್ಯ ಹೋರಾಟಗಾರರನ್ನಾಗಿ ಪರಿವರ್ತಿಸಿದ್ದಾರೆ. ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಮತ್ತು ಆಜಾದ್ ಹಿಂದ್ ಫೌಜ್ ಸ್ಥಾಪಿಸುವ ಮೂಲಕ ಬ್ರಿಟೀಷರ ವಿರುದ್ಧ ಸಶಸ್ತ್ರ ಮಿಲಿಟರಿ ಹೋರಾಟ ನಡೆಸಿದ್ದರು ಎಂದು ಬಣ್ಣಿಸಿದರು.