ಜೈಪುರ: ಜಿಎಸ್ಟಿಯಿಂದ ಬದಲಾದ ತೆರಿಗೆ ನೀತಿಗಳಿಂದ ವ್ಯಕ್ತಿಯೊಬ್ಬ ರೈಲ್ವೆ ಇಲಾಖೆಯಿಂದ ಹಣ ವಾಪಸ್ ಪಡೆಯಲು ಎರಡು ವರ್ಷಗಳ ಕಾಲ ನಡೆಸಿದ ನಿರಂತರ ಹೋರಾಟಕ್ಕೆ ಕೊನೆಗೂ ಗೆಲುವು ಸಿಕ್ಕಿದೆ.
ಕೋಟಾ ಮೂಲಕ ಎಂಜಿನಿಯರ್ ಸುಜೀತ್ ಸ್ವಾಮಿ ಎಂಬುವರು ರೈಲ್ವೇ ಇಲಾಖೆಯಿಂದ 35 ರೂ ಪಡೆಯಲು 2 ವರ್ಷಗಳ ಕಾಲ ಫೈಟ್ ಮಾಡಿದ್ದಾರೆ. ಸತತ ಹೋರಾಟದ ಫಲವಾಗಿ ಇಲಾಖೆಯು 33 ರೂಗಳನ್ನು ಅವರ ಖಾತೆಗೆ ಜಮಾ ಮಾಡಿದ್ದು, ಬಾಕಿ ಉಳಿಸಿಕೊಂಡ 2 ರೂ ನೀಡಬೇಕೆಂದೂ ಅವರು ಆಗ್ರಹಿಸಿದ್ದಾರೆ.
ಆಗಿದ್ದೇನು?
ಸುಜೀತ್ 2017 ಏಪ್ರಿಲ್ನಲ್ಲಿ ಕೋಟಾದಿಂದ ನವದೆಹಲಿಗೆ ತೆರಳಲು 765 ರೂ ಪಾವತಿಸಿ ರೈಲ್ವೆ ಟಿಕೆಟ್ ಕಾದಿರಿಸಿದ್ದರು. ಅವರು ಜುಲೈ 2 ರಂದು ಪ್ರಯಾಣ ಮಾಡಬೇಕಿತ್ತು. ಆದರೆ,ಅವರೇ ಟಿಕೆಟ್ ರದ್ದು ಮಾಡಿದ್ದರಿಂದ 100 ರೂಗಳು ಕಡಿತವಾಗಿ 665 ರೂ ವಾಪಸ್ ಮಾಡಲಾಗಿತ್ತು.
ವೇಯ್ಟಿಂಗ್ ಲಿಸ್ಟ್ನಲ್ಲಿದ್ದ ಟಿಕೆಟ್ ಕ್ಯಾನ್ಸಲ್ ಮಾಡಿದ್ದಕ್ಕೆ 65 ರೂಗಳ ಬದಲು 100 ರೂ ಕಟ್ ಮಾಡಿದ್ದರಿಂದ ಸುಜೀತ್ ಕಾನೂನು ಹೋರಾಟಕ್ಕೆ ಮುಂದಾದರು. ಅಂದೇ ಇಲಾಖೆಗೆ ಆರ್ಟಿಐ ಮೂಲಕ ಪ್ರಶ್ನೆ ಕೇಳಿದ್ದರು.
35ರೂ.ಗಾಗಿ 2 ವರ್ಷ ನಿರಂತರ ಹೋರಾಟ!
ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ ಇದಕ್ಕೆ ಉತ್ತರವಾಗಿ, ಜಿಎಸ್ಟಿ ಜಾರಿಗಿಂತ ಮುಂಚೆ ಟಿಕೆಟ್ ಬುಕ್ ಆಗಿದ್ದು, ಜಾರಿಯಾದ ನಂತರ ರದ್ದಾಗಿದೆ. ಈ ವೇಳೆ ಸರ್ವೀಸ್ ಟ್ಯಾಕ್ಸ್ ಆಗಿ ಕಡಿತ ಮಾಡಲಾದ 35 ರೂಗಳನ್ನು ಹಿಂದಿರುಗಿಸಲಾಗದು ಎಂದು ಖಡಕ್ಕಾಗಿ ಹೇಳಿತ್ತು. ಆ ನಂತರ ಜಿಎಸ್ಟಿ ಜಾರಿಗಿಂತ ಮುನ್ನ ಟಿಕೆಟ್ ಬುಕ್ ಮಾಡಿದ್ದರಿಂದ ಸರ್ವೀಸ್ ಟ್ಯಾಕ್ಸ್ ಮೊತ್ತವನ್ನು ಹಿಂದಿರುಗಿಸುವುದಾಗಿ ಹೇಳಿತ್ತು.
2018ರಲ್ಲಿ ಈತ ಲೋಕ ಅದಾಲತ್ಗೆ ಸಹ ದೂರು ನೀಡಿದ್ದೆ. ಇದು ತನ್ನ ವ್ಯಾಪ್ತಿಯಲ್ಲಿಲ್ಲ ಎಂದು ಅರ್ಜಿ ರದ್ದಾಗಿತ್ತು. ಅಲ್ಲದೆ, ನಾನು ಸಲ್ಲಿಸಿದ್ದ ಆರ್ಟಿಐ ಅರ್ಜಿಯನ್ನು 10 ಬಾರಿ ಬೇರೆ ಬೇರೆ ಇಲಾಖೆಗಳಿಗೆ ರವಾನಿಸಲಾಗಿತ್ತು. ಏನೆಲ್ಲಾ ಹೋರಾಟ ನಡೆಸಿದ ನಂತರ 33 ರೂ ಗಳನ್ನು 2019ರ ಮೇ 1ರಂದು ಬ್ಯಾಂಕ್ ಖಾತೆಗೆ ಹಾಕಲಾಗಿದೆ ಎಂದು ಸುಜೀತ್ ಹೇಳಿಕೊಂಡಿದ್ದಾರೆ.
ನನ್ನಂತೆಯೇ 9 ಲಕ್ಷ ಪ್ರಯಾಣಿಕರು ಜಿಎಸ್ಟಿ ಜಾರಿಗೆ ಮುನ್ನ ಟಿಕೆಟ್ ಬುಕ್ ಮಾಡಿ, ಜಾರಿಯಾದ ನಂತರ ಕ್ಯಾನ್ಸಲ್ ಮಾಡಿಯೂ ಸರ್ವೀಸ್ ಟ್ಯಾಕ್ಸ್ ಹೆಸರಿನಲ್ಲಿ ಹಣ ಕಳೆದುಕೊಂಡಿದ್ದಾರೆ. ಇದರ ಮೊತ್ತ 3.34 ಕೋಟಿ ರೂ ಎಂದು ಆರ್ಟಿಐ ಮೂಲಕ ತಿಳಿದುಬಂದಿದೆ. ಬಹುತೇಕ ಜನರಿಗೆ ಇದು ಗೊತ್ತೇ ಇಲ್ಲ ಎಂದೂ ಅವರು ಹೇಳಿಕೊಂಡಿದ್ದಾರೆ.