ನವದೆಹಲಿ: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಈಗಾಗಲೇ ಹೈಕಮಾಂಡ್ ಜತೆ ಮಾತಕತೆ ನಡೆಸಿದ್ದು, ನಾಳೆ ಅಥವಾ ನಾಡಿದ್ದು ಸಂಪುಟ ವಿಸ್ತರಣೆಗೊಳ್ಳುವ ಎಲ್ಲ ಲಕ್ಷಣ ಗೋಚರಿಸುತ್ತಿವೆ.
![Karnataka CM Yediyurappa](https://etvbharatimages.akamaized.net/etvbharat/prod-images/5900160_twdfdfdf.jpg)
ಈಗಾಗಲೇ ದೆಹಲಿಯಲ್ಲಿ ವಾಸ್ತವ್ಯ ಹೂಡಿರುವ ಮುಖ್ಯಮಂತ್ರಿ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡುವುದಕ್ಕೂ ಮುಂಚಿತವಾಗಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ಮಾತುಕತೆ ನಡೆಸಿದ್ದಾಗಿ ತಿಳಿದು ಬಂದಿದ್ದು, ಇದಾದ ಬಳಿಕ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಭೇಟಿಯಾಗಲಿದ್ದಾರೆ.
![ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಿಎಸ್ವೈ](https://etvbharatimages.akamaized.net/etvbharat/prod-images/yedi-calls-onnirmala1580393286390-87_3001email_1580393297_985.jpeg)
ನಾಳೆಯೇ ಸಚಿವ ಸಂಪುಟ ವಿಸ್ತರಣೆ ಶೇ.99ರಷ್ಟು ಖಚಿತ ಎಂದು ಯಡಿಯೂರಪ್ಪ ಈಗಾಗಲೇ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿರುವ ಅವರು ಹೆಚ್ಚಿನ ಡಿಸಿಎಂ ಹುದ್ದೆ ಸೃಷ್ಟಿ ಮಾಡುವ ಅವಶ್ಯಕತೆ ಇಲ್ಲ. ಈಗಾಗಲೇ ಮೂವರು ಉಪಮುಖ್ಯಮಂತ್ರಿಗಳಿದ್ದಾರೆ ಎಂದಿದ್ದಾರೆ. ಸಂಪುಟ ವಿಸ್ತರಣೆ ವಿಳಂಬದ ಬಗ್ಗೆ ಮಾತನಾಡಿರುವ ಬಿಎಸ್ವೈ, ದೆಹಲಿಯಲ್ಲಿ ಚುನಾವಣೆ ನಡೆಯುತ್ತಿರುವ ಕಾರಣ ಪ್ರಮುಖ ಮುಖಂಡರು ಬ್ಯುಸಿಯಾಗಿದ್ದು, ಅವರೊಂದಿಗೆ ಮಾತುಕತೆ ನಡೆಸಲು ಸಮಯವಕಾಶ ಸಿಗುತ್ತಿಲ್ಲ ಎಂದಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಎಲ್ಲವೂ ಫೈನಲ್ ಆಗಲಿದೆ ಎಂದಿದ್ದು, ಸಂಪುಟ ವಿಸ್ತರಣೆಗಾಗಿ ಹೈಕಮಾಂಡ್ ಬಹುತೇಕ ಗ್ರಿನ್ ಸಿಗ್ನಲ್ ನೀಡಿದೆ ಎಂದು ತಿಳಿಸಿದ್ದಾರೆ.
ಇನ್ನು ಫೆಬ್ರವರಿ 5ರಿಂದ ರಾಜ್ಯ ಬಜೆಟ್ ಅಧಿವೇಶನ ಆರಂಭಗೊಳ್ಳಲಿದ್ದು, ಅಷ್ಟರೊಳಗೆ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂಬ ಮಾಹಿತಿ ಕೂಡ ಬಿಜೆಪಿ ಖಚಿತ ಮೂಲಗಳಿಂದ ತಿಳಿದು ಬಂದಿದೆ. 224 ಶಾಸಕರನ್ನೊಳಗೊಂಡಿರುವ ರಾಜ್ಯದಲ್ಲಿ 34 ಸಚಿವರು ಇರಬೇಕು. ಬಿಎಸ್ವೈ ನೇತೃತ್ವದ ಸರ್ಕಾರದಲ್ಲಿ ಸದ್ಯ ಡಿಸಿಎಂ, ಸಿಎಂ ಸೇರಿ 18 ಸಚಿವರಿದ್ದಾರೆ. ಇದೀಗ 16 ಸಚಿವರು ಸೇರ್ಪಡೆಯಾಗಬೇಕಾಗಿದೆ. ಶುಕ್ರವಾರ ಮುಖ್ಯಮಂತ್ರಿ ಬಿಎಸ್ವೈ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.