ತೆಲಂಗಾಣ: ಅಂಗವೈಕಲ್ಯ ದೇಹಕ್ಕೆ ಹೊರತು ಮನಸ್ಸಿಗಲ್ಲ, ಈ ಮಾತು ಅಕ್ಷರಶಃ ನಿಜ. ತಮ್ಮ ಬಲವಾದ ಇಚ್ಚಾ ಶಕ್ತಿಯಿಂದ ದೈಹಿಕ ಅಂಗವೈಕಲ್ಯವನ್ನು ಮೆಟ್ಟಿ ನಿಂತಿದ್ದಾರೆ ಈ ವ್ಯಕ್ತಿ. ಯಾರ ಸಹಾಯವನ್ನು ಪಡೆಯದೇ ಚಮ್ಮಾರಿಕೆ ನಂಬಿ ಬದುಕುತ್ತಿದ್ದಾರೆ. ತಮ್ಮ ಇಬ್ಬರು ಹೆಣ್ಣು ಮಕ್ಕಳಿಗಾಗಿ ಸುಂದರವಾದ ಬದುಕು ಕಟ್ಟಿಕೊಡಲು, ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರೇ ತೆಲಂಗಾಣದ ಖೈರತಾಬಾದ್ ನಿವಾಸಿ ಅಮೀರ್ಪುರ್ ಮಲ್ಲೇಶ್. ಇವರು ಇಂದಿನ ಜನರಿಗೆ ಆದರ್ಶವಾಗಿದ್ದಾರೆ.
ಮಲ್ಲೇಶ್ ಬಾಲ್ಯದಿಂದಲೂ ಶೂಗಳನ್ನು ರಿಪೇರಿ ಮಾಡುತ್ತ ಬಂದಿದ್ದು, ತಮ್ಮ ತಾಯಿಯೊಂದಿಗೆ ಫುಟ್ಪಾತ್ನಲ್ಲಿ ಕುಳಿತು ಈ ಕಾಯಕ ಮಾಡುತ್ತಿದ್ದರು. ಆರಂಭಿಕ ದಿನಗಳಲ್ಲಿ ಜೀವನ ತುಂಬಾ ಚೆನ್ನಾಗಿತ್ತು. ಆದರೆ, ಮಧುಮೇಹ ಇವರ ಜೀವನವನ್ನು ನುಚ್ಚು ನೂರು ಮಾಡಿತು. ಗ್ಯಾಂಗ್ರಿನ್ನಿಂದಾಗಿ ಅವರ ಎರಡೂ ಕಾಲುಗಳನ್ನು ಕತ್ತರಿಸಬೇಕಾಯಿತು.
ಮಧುಮೇಹದಿಂದ ಅವರು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದರು. ಹಲವಾರು ರೀತಿಯ ಚಿಕಿತ್ಸೆ ನೀಡಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ವೈದ್ಯರು ಅವರ ಎಡಗಾಲನ್ನು ಕತ್ತರಿಸಿದರು. ಮುಂದಿನ 2 ವರ್ಷಗಳಲ್ಲಿ ಅವರ ಬಲಗಾಲಿಗೆ ತೀವ್ರವಾಗಿ ಸೋಂಕು ತಗುಲಿದ ಕಾರಣ, ಅದನ್ನೂ ಕೂಡ ತೆಗೆದು ಹಾಕಬೇಕಲಾಯಿತು. ಆದರೆ ಅವರು ಎಂದಿಗೂ ಎದೆಗುಂದಲಿಲ್ಲ ಹಾಗೂ ತಮ್ಮ ಆತ್ಮ ಸ್ಥೈರ್ಯವನ್ನು ಇಂದಿಗೂ ಕಳೆದುಕೊಂಡಿಲ್ಲ.
ಮಲ್ಲೇಶ್ ಅವರು ತಮ್ಮ ಮಕ್ಕಳಾದ ವೈಷ್ಣವಿ ಹಾಗೂ ಸಿರಿಶಾ ಅವರಿಗೆ, ಖೈರತಾಬಾದ್ನಲ್ಲಿ ಶಿಕ್ಷಣ ಕೊಡಿಸುತ್ತಿದ್ದಾರೆ. ಜೀವನದ ನಿರ್ವಹಣೆಗಾಗಿ ಅವರು ಮತ್ತೆ ಉದ್ಯೋಗವನ್ನು ಪ್ರಾರಂಭಿಸಿದ್ದಾರೆ. ಬೆಳಿಗ್ಗೆ 9:30 ರಿಂದ ರಾತ್ರಿ 8 ರವರೆಗೆ ಫುಟ್ಪಾತ್ನಲ್ಲಿ ಚಮ್ಮಾರಿಕೆ ಮಾಡಿ, ತಮ್ಮ ಕೆಲಸದಿಂದ ಗಳಿಸುವ ಹಣದಿಂದ ಮಕ್ಕಳ ಭವಿಷ್ಯವನ್ನು ಭದ್ರ ಪಡಿಸುತ್ತಿದ್ದಾರೆ.
ಮಲ್ಲೇಶ್ ಅವರಿಗೆ ಎರಡು ಕಾಲುಗಳು ಇಲ್ಲದಿದ್ದರೂ ಅವರು, ಇತರರಿಂದ ಸಹಾಯವನ್ನು ಕೇಳಿಲ್ಲ. ಆದರೆ ಜನರು ಸಹಾಯ ಮಾಡಲು ಬಂದರೆ, ಅವನು ಅವರನ್ನು ತಿರಸ್ಕರಿಸುವುದಿಲ್ಲ. ಈಗ ಮಲ್ಲೇಶ್ ತನ್ನ ಅಲ್ಪ ಆದಾಯದೊಂದಿಗೆ ಮತ್ತು ರಾಜ್ಯ ಸರ್ಕಾರದ ಮಾಸಿಕ ಅಂಗವೈಕಲ್ಯ ಪಿಂಚಣಿಯ ಸಹಾಯದಿಂದ ತನ್ನ ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ. ಅವರಿಗೆ ಯಾವುದೇ ತೊಂದರೆಯಾದರೂ ಅವರು, ಮಕ್ಕಳಿಗೆ ತಿಳಿಸುವುದಿಲ್ಲ.
ಕಳೆದ 12 ವರ್ಷಗಳಿಂದ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದೆ ಮಲ್ಲೇಶ್, ವೃತ್ತಿ ಪರವಾಗಿ ಶ್ರಮಿಸುವ ಮೂಲಕ ಮುಂದುವರಿಯುತ್ತಿದ್ದಾರೆ. ಅಂಗವೈಕಲ್ಯ ಮೆಟ್ಟಿ ನಿಂತು ದುಡಿಯುತ್ತಿರಯವ ಅವರ ಸಾಧನೆ ನಮ್ಮೆಲ್ಲರಿಗೂ ಸ್ಫೂರ್ತಿ ಎಂಬುದರಲ್ಲಿ ಸಂದೇಹವಿಲ್ಲ.