ದಿನೇ ದಿನೇ ಭಾರತೀಯ ರೈಲ್ವೆಯ ಹಣಕಾಸು ಸ್ಥಿತಿ ಹದಗೆಡುತ್ತಿದೆ. ಸಂಸತ್ತಿನಲ್ಲಿ ಸಲ್ಲಿಸಲಾಗಿರುವ ಸಿಎಜಿ ವರದಿ ಈ ವಾಸ್ತವಾಂಶವನ್ನು ದೃಢಪಡಿಸಿದೆ. ರೈಲ್ವೆ ಬಜೆಟ್ಟಿನಲ್ಲಿ ಸಾಮಾನ್ಯವಾಗಿ ರೂಪಾಯಿ ಆದಾಯ ಗಳಿಸಲು ಮಾಡಿದ ವೆಚ್ಚದ ಅನುಪಾತವನ್ನು ಓಆರ್ ಅಥವಾ ಚಾಲ್ತಿ ಅನುಪಾತ ಎಂದು ಪರಿಗಣಿಸಲಾಗುತ್ತದೆ. ಚಾಲ್ತಿ ಅನುಪಾತ ಹೆಚ್ಚುತ್ತಾ ಹೊಂದಂತೆ ಸಂಸ್ಥೆಯ ಲಾಭದಾಯಕತೆ ಕಡಿಮೆಯಾಗುತ್ತದೆ. 2016-17ರಲ್ಲಿ ಈ ಅನುಪಾತವು ಶೇಕಡಾ 96.5ನ್ನು ತಲುಪಿತ್ತು. ಮುಂದಿನ ವರ್ಷ ಇದು ಶೇಕಡಾ 98.44ನ್ನು ತಲುಪಲಿದೆ. ಪರಿಸ್ಥಿತಿಯ ಗಂಭೀರತೆಯನ್ನು ಇದು ಸೂಚಿಸುತ್ತದೆ. ವಾಸ್ತವದಲ್ಲಿ ರೈಲು ಸರಕು ಸಾಗಾಣಿಕೆ ಸೇವೆಗಳ ಮೇಲೆ NTPC ಮತ್ತು IRcON ಇಂಟರ್ ನ್ಯಾಶನಲ್ ಲಿಮಿಟೆಡ್ನಂತಹ ಸಾರ್ವಜನಿಕ ರಂಗದ ಕಂಪನಿಗಳು ಮಾಡುವ ಮುಂಗಡ ಪಾವತಿಗಳ ಮೊತ್ತ 7,000 ಕೋಟಿ ರೂಪಾಯಿಗಳಿಗೂ ಹೆಚ್ಚು. ಪ್ರಸಕ್ತ ವರ್ಷದಲ್ಲಿ ರೈಲ್ವೆಯಲ್ಲಿ ಆದಾಯ ಕೊರತೆ ಉಂಟಾಗುವುದನ್ನು ತಡೆಹಿಡಿಯಲು ಇದು ಸಹಕಾರಿಯಾಗಿದೆ. ಆದಾಯ ಕೊರತೆಯ ಚಾಲ್ತಿ ಅನುಪಾತವು 102.66ರಷ್ಟು ತಲುಪಿ ಸಾರ್ವಕಾಲಿಕ ದಾಖಲೆಯನ್ನೂ ನಿರ್ಮಿಸುವ ಸಾಧ್ಯತೆ ತೋರುತ್ತಿದೆ.
ಒಂದು ದಶಕದ ಅವಧಿಯಲ್ಲಿ ಒಆರ್ ಅಂಕಿಸಂಖ್ಯೆಗಳು ಈ ಮಟ್ಟಕ್ಕೆ ತಲುಪುತ್ತಿರುವುದರ ಹಿನ್ನೆಲೆಯಲ್ಲಿ ಸಿಎಜಿಯು ರೈಲ್ವೆಯು ಆಂತರಿಕ ಆದಾಯ ಹೆಚ್ಚಿಸಿಕೊಳ್ಳುವ ಕಡೆಗೆ ಗಮನ ನೀಡಬೇಕು ಎಂದು ಸಲಹೆ ನೀಡಿದೆ. ಅಲ್ಲದೆ, ಅನೇಕರು ಸಬ್ಸಿಡಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ರೈಲ್ವೆ ಸಹ ತನ್ನ ಸಬ್ಸಿಡಿಗಳ ವಿಷಯದಲ್ಲಿ ಉದಾರ ನೀತಿ ತಳೆಯುವ ಅಗತ್ಯವಿಲ್ಲ ಎಂದು ಅದು ಹೇಳಿದೆ. ಉದಾಹರಣೆಗೆ, “ಸ್ವಾತಂತ್ರ್ಯ ಹೋರಾಟಗಾರರ’ ಕೋಟಾವನ್ನು ದುರುಪಯೋಗ ಮಾಡಿಕೊಳ್ಳುವ ಸುಮಾರು 3000 ಪ್ರಕರಣಗಳನ್ನು ಪತ್ತೆ ಮಾಡಿರುವ ಸಿಎಜಿ ತನ್ನ ವರದಿಯಲ್ಲಿ, “ಹತ್ತು ವರ್ಷದ ಬಾಲಕನೊಬ್ಬನಿಗೆ ವಿಶೇಷ ಸ್ವಾತಂತ್ರ್ಯ ಹೋರಾಟಗಾರರ” ರಿಯಾಯ್ತಿ ಸಿಗಲು ಹೇಗೆ ಸಾಧ್ಯ ಎಂಬ ನೇರ ಪ್ರಶ್ನೆಯನ್ನು ಕೇಳಿದೆ.
ಸರ್ಕಾರಕ್ಕೆ ಸಮಾಜ ಕಲ್ಯಾಣದ ಬಾಧ್ಯತೆ ಇರುವುದರಿಂದ ವಯೋವೃದ್ಧರಿಗೆ ಮತ್ತು ಕೆಲವು ನಿರ್ದಿಷ್ಟ ಗುಂಪಿನ ಜನರಿಗೆ ಸಬ್ಸಿಡಿ ನೀಡಬೇಕಿರುತ್ತದೆ. ಹಾಗಂತ ಅಂತಹ ಅನಾಯಾಸ ಕೊಡುಗೆಯನ್ನು ಕೇಡಿಗಳು ದುರಪಯೋಗ ಮಾಡಿಕೊಳ್ಳುವುದನ್ನು ರೈಲ್ವೆಯು ಸಹಿಸಬೇಕಿಲ್ಲ. ಇಂತಹ ಎಲ್ಲ ಚಟುವಟಿಕೆಗಳಿಗೆ ಕೂಡಲೇ ಕೊನೆಹಾಡುವ ಕ್ರಮಗಳನ್ನು ಅದು ಕೈಗೊಳ್ಳಬೇಕು.
ಭಾರತೀಯ ರೈಲ್ವೆಯು ತನ್ನ ಸುಮಾರು 22,000 ರೈಲುಗಳಲ್ಲಿ ಒಂದು ದಿನದಲ್ಲಿ ಏನಿಲ್ಲೆಂದರೂ 2.22 ಕೋಟಿ ಪ್ರಯಾಣಿಕರನ್ನು ಅವರವರ ನಿಗದಿತ ಸ್ಥಳಗಳಿಗೆ ತಲುಪಿಸುತ್ತದೆ. ಈ ಮೂಲಕ ದೇಶದ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಯಲ್ಲಿ ಇದು ಪ್ರಗತಿಪರ ಜೀವರೇಖೆಯನ್ನು ರೂಪಿಸಿದೆ. ಸುದೀಪ್ ಬಂಡೋಪಾಧ್ಯಾಯ ಸ್ಥಾಯಿ ಸಮಿತಿಯ ವರದಿ ಪ್ರಕಾರ 1950ರಿಂದ 2016ರ ನಡುವೆ ರೈಲು ಪ್ರಯಾಣಿಕರ ಸಂಖ್ಯೆ ಶೇಕಡಾ 1344ರಷ್ಟು ಹೆಚ್ಚಳವಾಗಿ, ಸರಕು ಸಾಗಣಿಕೆ ಪ್ರಮಾಣ ಶೇಕಡಾ 1642 ಪಟ್ಟು ಹೆಚ್ಚಳವಾದರೂ ರೈಲ್ವೆ ಜಾಲದ ಹೆಚ್ಚಳವಾಗಿರುವುದು ಕೇವಲ ಶೇಕಡಾ 23ರಷ್ಟು ಮಾತ್ರ. ಅರ್ಧ ಡಜನ್ನಷ್ಟು ಸೌಲಭ್ಯಗಳ ಅಸಮರ್ಪಕತೆಯ ಮೇಲೆ ಒತ್ತಡ ಹೆಚ್ಚುತ್ತಿರುವುದು ಒಂದು ಕಡೆಗಾದರೆ ಆದ್ಯತೆ ಹೊಂದಿಲ್ಲದ ಯೋಜನೆ ಮತ್ತು ಕಾರ್ಯಕ್ರಮಗಳು ಸರಿಯಾಗಿ ರೂಪುಗೊಂಡಿಲ್ಲದಿರುವುದು ಮತ್ತೊಂದು ಕಡೆಗೆ. ಇವೆರಡೂ ಸೇರಿ ಭಾರತೀಯ ರೈಲ್ವೆಯನ್ನು ನಷ್ಟಕ್ಕೆ ದೂಡುತ್ತಿವೆ.
2 ವರ್ಷಗಳ ಹಿಂದಿನವರೆಗೂ ರೈಲು ನಿಲ್ದಾಣಗಳ ನಡುವೆ ರೈಲು ಹಳಿಗಳನ್ನು ಕಾಯುತ್ತಿದ್ದಂತಹ ರೈಲ್ವೆ ಗ್ಯಾಂಗ್ ಮೆನ್ ಅಥವಾ ಟ್ರಾಕ್ ಮೆನ್ ಗಳು ಈಗ ಇಲಾಖೆಯ ಉನ್ನತ ಅಧಿಕಾರಿಗಳ ಮನೆಗಳನ್ನು ಕಾಯುವ ಮೂಲಕ ಇಲ್ಲವೇ ಅಲ್ಲಿ ಚಾಕರಿ ಮಾಡುವ ಮೂಲಕ ಅವರಿಂದ ಭೇಷ್ ಎನಿಸಿಕೊಳ್ಳಲು ಹೆಣಗುತ್ತಿರುವುದು ದುರದೃಷ್ಟದ ಸಂಗತಿ.
ದೇಶದ ಅತಿಮುಖ್ಯ ಜಾಲವಾದ ರೈಲ್ವೆ ಜಾಲದಲ್ಲಿ ಪಾರದರ್ಶಕತೆ ಮತ್ತು ಪ್ರಗತಿಯನ್ನು ಸಾಧಿಸಲು ಆದ್ಯತೆ ನೀಡುವುದಾಗಿ ಮೋದಿ ಸರ್ಕಾರ ಈ ಹಿಂದೆ ಮಾತು ಕೊಟ್ಟಿತ್ತಲ್ಲದೆ ಈ ನಿಟ್ಟಿನಲ್ಲಿ ಕೊಂಚ ಮಟ್ಟಿಗಿನ ಪ್ರಗತಿಯೂ ಆಗಿದೆ!! ಈ ನಿಟ್ಟಿನಲ್ಲಿ ಆಗಿರುವ ಮೊದಲ ಕೆಲಸವೆಂದರೆ ರೈಲ್ವೆ ಮಂಡಳಿಯನ್ನು 25% ಕಡಿತಗೊಳಿಸಿದ್ದು. ದಕ್ಷಿಣ ಕೇಂದ್ರ ರೈಲ್ವೆಯು ವೆಚ್ಚ ಕಡಿತದ ಕ್ರಮವಾಗಿ ‘ಹಾಗ್” (ಎಚ್ ಒ ಜಿ- ಹೆಡ್ ಆನ್ ಜನರೇಶನ್) ತಂತ್ರಜ್ಞಾನವನ್ನು 11 ರೈಲುಗಳಲ್ಲಿ ಅಳವಡಿಸಿದೆ. ಇದರ ಮೂಲಕ 35 ಕೋಟಿ ರೂಪಾಯಿಯಿಂದ 6 ಕೋಟಿ ರೂಪಾಯಿವರೆಗೂ ವೆಚ್ಚವನ್ನು ಕಡಿಮೆ ಮಾಡಿದೆ. ಅದೇ ರೀತಿಯಲ್ಲಿ ರೈಲುಗಳಲ್ಲಿ ಟ್ಯೂಬ್ ಲೈಟುಗಳನ್ನು ಬಳಸುವ ಬದಲು ಎಲ್ ಇಡಿ ಲೈಟುಗಳನ್ನು ಬಳಸಲಾಗುತ್ತಿದೆ. ಈ ಕ್ರಮಗಳೆಲ್ಲ ಸ್ವಾಗತಾರ್ಹವೇ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಅದೇ ಹೊತ್ತಿಗೆ ಸಿಎಜಿ ವರದಿಯಲ್ಲಿನ ಸಲಹೆಯಂತೆ ಆಂತರಿಕ ವರಮಾನ ಹೆಚ್ಚಳವಾಗುವ ನಿಟ್ಟಿನಲ್ಲಿ ಉತ್ತೇಜನ ನೀಡಬೇಕು. ಲೆಕ್ಕಕ್ಕೆ ಸಿಗದ ಮತ್ತು ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುವುದು ಸಹ ಬಹಳ ಮುಖ್ಯವಾಗಿದೆಯಲ್ಲದೆ ನಿರ್ವಹಣಾ ಸಾಮರ್ಥ್ಯ, ಸೇವಾ ಗುಣಮಟ್ಟ, ಪ್ರಯಾಣದ ಸುರಕ್ಷತೆ, ವೇಗ ಮತ್ತು ಆಧುನಿಕ ಸೌಲಭ್ಯಗಳನ್ನು ಉತ್ತಮಪಡಿಸುವ ನಿಟ್ಟಿನಲ್ಲಿಯೂ ಕೆಲಸಗಳಾಗಬೇಕಿದೆ.
ಯಾವುದೇ ಪ್ರಸ್ತಾಪಿತ ಹೂಡಿಕೆಯ ಮೇಲೆ ಕನಿಷ್ಠ 14% ನಿವ್ವಳ ಆದಾಯ ಗಳಿಸುವುದು (ಖರ್ಚು ಕಳೆದು) ಭಾರತೀಯ ರೈಲ್ವೆಯ ಹಣಕಾಸು ನಿಯಮವಾಗಿದ್ದರೂ ಅದರಲ್ಲಿನ ಶೇಕಡಾ 70ರಷ್ಟು ಯೋಜನೆಗಳು ಈ ನಿಯಮ ಸಾಧಿಸಲು ಸೂಕ್ತವಾಗಿಲ್ಲ ಎಂದು ಸಿಎಜಿ ಹಿಂದೆ ತಿಳಿಸಿತ್ತು. ನಾಳಿನ ಅಗತ್ಯಗಳಿಗನುಗುಣವಾಗಿ ರೈಲ್ವೆಯನ್ನು ಮಾರ್ಪಡಿಸುವ ದೃಢ ನಿರ್ಧಾರ ಹಾಗೂ ಆದಾಯ ಮತ್ತು ವೆಚ್ಚದ ನಡುವೆ ಅರ್ಥಪೂರ್ಣ ಸಮತೋಲನ ಸಾಧಿಸಲು ಅಪ್ರಬುದ್ಧ ವಿಧಾನ ಅನುಸರಿಸಿದ್ದು ರೈಲ್ವೆ ಇಲಾಖೆಯು ದಶಕಗಳ ಕಾಲ ಜನಪ್ರಿಯ ನೀತಿಗಳಿಗೆ ಅಂಟಿಕೊಂಡು ಕೂರುವಂತೆ ಮಾಡಿದೆ. ವೇಗವನ್ನು ತಗ್ಗಿಸುವ ಕಿರಿದಾದ ಸೇತುವೆಗಳು ಅದಕ್ಷವಾಗಿರುವ ಸಿಗ್ನಲ್ ವ್ಯವಸ್ಥೆ ಈಗಲೂ ಮುಂದುವರಿಯಲು ಕಾರಣಗಳಾಗಿದ್ದು ರೈಲ್ವೆಯ ಆರ್ಥಿಕ ಸಾಮರ್ಥ್ಯಕ್ಕೆ ಪೆಟ್ಟು ನೀಡುವ ರೀತಿಯಲ್ಲಿವೆ.
ಪ್ರಯಾಣಿಕರು ಆಹಾರ ಪದಾರ್ಥಗಳನ್ನು, ದಿನ ಮುಗಿದ ವಸ್ತುಗಳನ್ನು ಮತ್ತು ಅನಧಿಕೃತ ನೀರಿನ ಬಾಟಲಿಗಳನ್ನು ಬಳಸದಂತೆ ನಿಯಂತ್ರಿಸಲು ಸಿಎಜಿ ವರದಿ ತಿಳಿಸಿದ ಎರಡು ವರ್ಷಗಳ ನಂತರವೂ ಅಂತಹ ಅನಧಿಕೃತ ಮಾರಾಟದ ಜಾಲವು ಹತೋಟಿಗೆ ಸಿಗದಂತಾಗಿದೆ. ಅಮೆರಿಕ, ಚೀನಾ ಮತ್ತು ರಷ್ಯಾ ಹೊರತುಪಡಿಸಿದರೆ ಇಡೀ ಪ್ರಪಂಚದಲ್ಲಿ ಅತಿದೊಡ್ಡ ರೈಲ್ವೆ ವ್ಯವಸ್ಥೆ ಭಾರತದ್ದೇ ಆಗಿದೆ. ಆದರೆ ಆಧುನಿಕರಣಗೊಳಿಸುವ ವಿಷಯದಲ್ಲಿ ಅದು ಹಿಂದೆ ಬಿದ್ದಿದೆ. ಇತರೆ ದೇಶಗಳು ಕಾಲರೇಖೆಯ ಮೇಲೆ ತಮ್ಮ ಗುರುತುಗಳನ್ನು ಛಾಪಿಸಿದಂತೆ ಮತ್ತು ಆಧುನಿಕ ಮೂಲಸೌಕರ್ಯಗಳ ವಿಷಯದಲ್ಲಿ ವೇಗ ವರ್ಧಿಸಿಕೊಂಡಂತೆಲ್ಲಾ ಭಾರತೀಯ ರೈಲ್ವೆ ಇನ್ನೂ ಹಿಂದಕ್ಕೆ ಬೀಳುತ್ತಿದೆ. ಇಲ್ಲಿ ಇನ್ನೂ ಓಬೀರಾಯನ ಕಾಲದ ನಿಯಂತ್ರಣ ವ್ಯವಸ್ಥೆಗಳೇ ಚಾಲ್ತಿಯಲ್ಲಿವೆ. ನೀತಿ ಆಯೋಗದ ಸದಸ್ಯ ಬಿಬೇಕ್ ದೇಬ್ರಾಯ್ ಅವರು ಭಾರತೀಯ ರೈಲ್ವೆಯಲ್ಲಿ ರಾಜಕೀಯ ಹಸ್ತಕ್ಷೇಪವನ್ನು ತಪ್ಪಿಸಲು ಮತ್ತು ವ್ಯವಸ್ಥೆಯನ್ನು ವೃತ್ತಿಪರ ಸ್ಪರ್ಧಾಸ್ಪೂರ್ತಿಯಿಂದ ನವೀಕರಿಸಲು ಮಾಡುವ ಆರಂಭಿಕ ಸುಧಾರಣೆಗಳಿಗೆ ಪ್ರಯಾಣಿಕರ ಉತ್ತೇಜನ ಪಡೆಯಬೇಕು ಎಂಬ ಸಲಹೆ ನೀಡಿದ್ದಾರೆ. ರೈಲ್ವೆಯ ಹಣಕಾಸು ಕ್ಷಮತೆಯನ್ನು ಹಾಗೂ ಅದರ ಇಮೇಜನ್ನು ಹೆಚ್ಚಿಸುವ ಮಹಾನ್ ಕಾರ್ಯಯೋಜನೆಯು ‘ಶ್ರೇಷ್ಟ ಭಾರತ’ದ ಉದಯಕ್ಕೆ ಖಂಡಿತಾ ಕೊಡುಗೆ ನೀಡುತ್ತದೆ.