ನವದೆಹಲಿ: ಅಸ್ಸೋಂ ಪೆಟ್ರೋಲಿಯಂ ಮಜ್ದೂರ್ ಒಕ್ಕೂಟವು ಮೇಘಾಲಯದಲ್ಲಿನ ಉದ್ವಿಗ್ನ ಪರಿಸ್ಥಿತಿಯ ಕಾರಣದಿಂದ ಆ ರಾಜ್ಯಕ್ಕೆ ಇಂಧನ ಪೂರೈಕೆಯನ್ನು ನಿಲ್ಲಿಸಿದ ನಂತರ ಮೇಘಾಲಯದ ಪೆಟ್ರೋಲ್ ಡಿಪೋಗಳು ಖಾಲಿಯಾಗುತ್ತಿವೆ. ಅಸ್ಸೋನಿಂದ ಟ್ಯಾಂಕರ್ ಮತ್ತು ಇತರ ವಾಹನಗಳಲ್ಲಿ ಇಂಧನವನ್ನು ಸಾಗಿಸುವ ಚಾಲಕರು ಮತ್ತು ಇತರ ಜನರು ಕಿರುಕುಳವನ್ನು ಎದುರಿಸುತ್ತಿದ್ದಾರೆ ಎಂದು ಯೂನಿಯನ್ ಮುಖಂಡರು ಆರೋಪಿಸಿದ್ದು, ಇದನ್ನು ತಡೆಗಟ್ಟಬೇಕೆಂದು ಒತ್ತಾಯಿಸಿದ್ದಾರೆ.
ಪೆಟ್ರೋಲಿಯಂ ವಲಯದಲ್ಲಿ ಕೆಲಸ ಮಾಡುವ ಜನರಿಗೆ ಸೂಕ್ತ ಭದ್ರತೆ ಖಾತ್ರಿಪಡಿಸುವಂತೆ ಯೂನಿಯನ್ ಮುಖಂಡರು ಮೇಘಾಲಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ವಿಪರ್ಯಾಸ ಎಂದರೆ, ಗಡಿಭಾಗದ ಮೊಕ್ರು ಗ್ರಾಮದಲ್ಲಿ ಬುಧವಾರ ಅಸ್ಸೋಂ ಪೊಲೀಸರ ಗುಂಡಿಗೆ ಬಲಿಯಾದವರ ನೆನಪಿಗಾಗಿ ನೂರಾರು ಜನರು ಕ್ಯಾಂಡಲ್ ಲೈಟ್ ಮೆರವಣಿಗೆಯಲ್ಲಿ ಭಾಗವಹಿಸಲು ಮುಂದಾದ ಸಂದರ್ಭದಲ್ಲಿ ಶಿಲ್ಲಾಂಗ್ ಸಿವಿಲ್ ಆಸ್ಪತ್ರೆಯೊಳಗೆ ಗುರುವಾರ ರಾತ್ರಿ ಮೂವರು ಮಹಿಳಾ ಪೇದೆಗಳ ಮೇಲೆ ಗಲಭೆಕೋರರು ಹಲ್ಲೆ ನಡೆಸಿದ್ದಾರೆ.
ದ್ವಿಚಕ್ರ ವಾಹನ ಸವಾರರ ಮೇಲೆ ಹಲ್ಲೆ: ಸಿವಿಲ್ ಆಸ್ಪತ್ರೆ ಆವರಣದಿಂದ ಹೊರಬಂದ ನಂತರ ಉದ್ರಿಕ್ತರು ದಾರಿಹೋಕರು ಮತ್ತು ದ್ವಿಚಕ್ರ ವಾಹನ ಸವಾರರ ಮೇಲೆ ಟ್ರಾಫಿಕ್ ಕೋನ್ಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ದಾಳಿಯ ಪ್ರತ್ಯಕ್ಷದರ್ಶಿಗಳು ಈಟಿವಿ ಭಾರತ್ಗೆ ತಿಳಿಸಿದ್ದಾರೆ. ಅದೇ ಕೋನ್ಗಳಿಂದ ಕೆಲವು ವಾಹನಗಳ ಗಾಜುಗಳನ್ನು ಅವರು ಒಡೆದು ಹಾಕಿದ್ದಾರೆ.
ಪೂರ್ವ ಖಾಸಿ ಹಿಲ್ಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಕ್ಟೋಬರ್ 31 ರಂದು ಸೆಕ್ಷನ್ 144 CrPC ಅಡಿ ಇಡೀ ನಗರ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನ ಒಟ್ಟುಗೂಡುವುದನ್ನು ನಿರ್ಬಂಧಿಸಿ ನಿಷೇಧಾಜ್ಞೆ ವಿಧಿಸಿದ್ದರು. ಯಾವುದೇ ಗುಂಪು ಅಥವಾ ಸಮಾಜಘಾತುಕ ಶಕ್ತಿಗಳು ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳಲು ರ್ಯಾಲಿಗಳು / ಮೆರವಣಿಗೆಗಳನ್ನು ದುರುಪಯೋಗಪಡಿಸಿಕೊಳ್ಳುವುದರಿಂದ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವುದನ್ನು ತಡೆಯಲು ಈ ಆದೇಶ ವಿಧಿಸಲಾಗಿದೆ.
ಪೊಲೀಸರ ಮೇಲೂ ಪೆಟ್ರೋಲ್ ಬಾಂಬ್ ಎಸೆತ: ಸಿವಿಲ್ ಆಸ್ಪತ್ರೆ ಆವರಣದಲ್ಲಿದ್ದ ಜಾಹೀರಾತು ಹೋರ್ಡಿಂಗ್ಗಳಿಗೆ ಬೆಂಕಿ ಹಚ್ಚಲು ಉದ್ರಿಕ್ತರು ಯತ್ನಿಸಿದ್ದು, ಆಸ್ಪತ್ರೆ ಬಳಿಯಿರುವ ಟ್ರಾಫಿಕ್ ಬೂತ್ ಅನ್ನು ಕೆಡವಿ ಧ್ವಂಸಗೊಳಿಸಲಾಗಿದೆ. ಗುಂಪನ್ನು ಚದುರಿಸಲು ಅಶ್ರುವಾಯು ಸಿಡಿಸಿದ ಪೊಲೀಸ್ ಸಿಬ್ಬಂದಿ ಮೇಲೆ ಗಲಭೆಕೋರರು ಕಲ್ಲು ಮತ್ತು ಪೆಟ್ರೋಲ್ ಬಾಂಬ್ಗಳನ್ನು ಎಸೆದಿದ್ದಾರೆ. ಪೊಲೀಸರು ಬಾರಿಕ್ ಜಂಕ್ಷನ್ ಮತ್ತು ಲಾಬನ್ ಜಂಕ್ಷನ್ ನಡುವೆ ವಾಹನಗಳ ಸಂಚಾರವನ್ನು ನಿಲ್ಲಿಸಿದ್ದು, ಟ್ರಾಫಿಕ್ ಅನ್ನು ಪೈನ್ ಮೌಂಟ್ ಹಿಲ್ಗೆ ರಸ್ತೆಯ ಕಡೆಗೆ ತಿರುಗಿಸಲಾಗಿದೆ.
ಘರ್ಷಣೆಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದಾರೆ. ಸೆಂಟಿನರಿ ಜಂಕ್ಷನ್ ಬಳಿ ಹಲ್ಲೆಗೊಳಗಾದ ಗಾಯಗೊಂಡ ನಾಗರಿಕರಲ್ಲಿ ಒಬ್ಬನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಿಷ್ಣುಪುರದಲ್ಲಿ ಮತ್ತೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲಾಗಿದೆ. ಗಲಭೆಗಳ ಹೊರತಾಗಿಯೂ, ಪೊಲೀಸರು ನಗರದಲ್ಲಿ ಕರ್ಫ್ಯೂ ವಿಧಿಸಿಲ್ಲ.
ಆದರೆ, ಗಲಭೆಕೋರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಸ್ಸೋಂ ಕ್ರಿಸ್ಟಿ ಕೇಂದ್ರ ಮತ್ತು ಧನಖೇಟಿಯಲ್ಲಿರುವ ಅಸ್ಸೋಂ ಹೌಸ್ನ ಹೊರಗೆ ದೊಡ್ಡ ಪ್ರಮಾಣದ ಸಿಆರ್ಪಿಎಫ್ ಸಿಬ್ಬಂದಿ ನಿಯೋಜಿಸಲಾಗಿತ್ತು.
ಇದನ್ನೂ ಓದಿ: ಕೇರಳದಲ್ಲಿ ಪಿಎಫ್ಐ ಹಿಂಸಾಚಾರ.. ನಷ್ಟ ಭರ್ತಿಗಾಗಿ 5 ಕೋಟಿ ವಸೂಲಿಗೆ ಹೈಕೋರ್ಟ್ ಆದೇಶ