ನವದೆಹಲಿ: ಉತ್ತರಾಖಂಡ್ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯಕ್ಕೆ ಭೇಟಿ ನೀಡಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಬೆಳಗ್ಗೆ 11.20ಕ್ಕೆ ಡೆಹ್ರಾಡೂನ್ನಲ್ಲಿ 'ಘಾಸಿಯಾರಿ ಕಲ್ಯಾಣ್ ಯೋಜನೆ'ಯನ್ನು ಪ್ರಾರಂಭಿಸಲಿದ್ದಾರೆ ಎಂದು ಸಚಿವ ಧನಸಿಂಗ್ ರಾವತ್ ತಿಳಿಸಿದರು.
ಈ ಬಗ್ಗೆ ಉತ್ತರಾಖಂಡದ ಸಚಿವ ಧನಸಿಂಗ್ ರಾವತ್ ಮಾತನಾಡಿ, ಅಕ್ಟೋಬರ್ 30 ರಂದು ಅಮಿತ್ ಶಾ ಅವರು ಡೆಹ್ರಾಡೂನ್ನ ಬನ್ನು ಶಾಲೆಯಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಮುಖ್ಯಮಂತ್ರಿ ಘಾಸಿಯಾರಿ ಕಲ್ಯಾಣ ಯೋಜನೆ'ಗೆ ಚಾಲನೆ ನೀಡಲಿದ್ದಾರೆ. ಗೃಹ ಸಚಿವರ ಕಾರ್ಯಕ್ರಮಗಳ ಸಿದ್ಧತೆ ಕುರಿತು ಜಿಲ್ಲಾಡಳಿತ, ಪೊಲೀಸ್ ಹಾಗೂ ಸಹಕಾರಿ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರಾವತ್ ತಿಳಿಸಿದರು.
‘ಮುಖ್ಯಮಂತ್ರಿ ಘಾಸಿಯಾರಿ ಕಲ್ಯಾಣ ಯೋಜನೆ’ಯ ಉದ್ದೇಶವು ಪರ್ವತ ಪ್ರದೇಶಗಳಲ್ಲಿ ವಾಸಿಸುವ ರಾಜ್ಯದ ಮೂರು ಲಕ್ಷಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರ ಹೊರೆಯನ್ನು ತೊಡೆದು ಹಾಕುವುದು. ಈ ಯೋಜನೆಯಡಿ ಪ್ಯಾಕೇಜ್ಡ್ ಸೈಲೇಜ್ (ಸುರಕ್ಷಿತ ಹಸಿರು ಮೇವು) ಮತ್ತು ಸಂಪೂರ್ಣ ಮಿಶ್ರ ಪಶು ಆಹಾರ ಮನೆ - ಮನೆಗೆ ಒದಗಿಸುವ ಕುರಿತಾಗಿದೆ ಎಂದು ರಾವತ್ ಹೇಳಿದರು.
ಮೊದಲ ಹಂತದಲ್ಲಿ, ಮುಖ್ಯಮಂತ್ರಿ ಘಾಸಿಯಾರಿ ಕಲ್ಯಾಣ ಯೋಜನೆಯನ್ನು ನಾಲ್ಕು ಗುಡ್ಡಗಾಡು ಜಿಲ್ಲೆಗಳಾದ ಪೌರಿ, ರುದ್ರಪ್ರಯಾಗ, ಅಲ್ಮೋರಾ ಮತ್ತು ಚಂಪಾವತ್ನಲ್ಲಿ ಜಾರಿಗೊಳಿಸಲಾಗುವುದು. ನಂತರ ಇತರ ಜಿಲ್ಲೆಗಳಲ್ಲಿಯೂ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ರಾಜ್ಯ ಸಚಿವರು ಹೇಳಿದರು.
ಈ ಕಾರ್ಯಕ್ರಮದ ನಂತರ ಅಮಿತ್ ಶಾ ಸಂಜೆ 4 ಗಂಟೆಗೆ ಹರಿದ್ವಾರದಲ್ಲಿ ನಡೆಯಲಿರುವ ಶಾಂತಿಕುಂಜ್ ಗೋಲ್ಡನ್ ಜುಬಿಲಿ ವರ್ಷದ ಉಪನ್ಯಾಸ ಸರಣಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
70 ಸದಸ್ಯರ ಉತ್ತರಾಖಂಡ ವಿಧಾನಸಭೆಗೆ 2022 ರ ಆರಂಭದಲ್ಲಿ ಚುನಾವಣೆ ನಡೆಯಲಿವೆ. 2017 ರ ಚುನಾವಣೆಯಲ್ಲಿ ಬಿಜೆಪಿ 57 ವಿಧಾನಸಭಾ ಸ್ಥಾನಗಳನ್ನು ಪಡೆದುಕೊಂಡಿತು, ಕಾಂಗ್ರೆಸ್ 11 ಸ್ಥಾನಗಳನ್ನು ಗೆದ್ದಿತು ಮತ್ತು ಉಳಿದ ಸ್ಥಾನಗಳನ್ನು ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದಾರೆ.