ನವದೆಹಲಿ : ದೆಹಲಿ-ಲಖನೌ ಶತಾಬ್ದಿ ಎಕ್ಸ್ಪ್ರೆಸ್ ರೈಲಿನಲ್ಲಿ ನಡೆದ ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಯುವಕನ್ನು ಬಂಧಿಸಲಾಗಿದೆ.
ಬಂಧಿತನನ್ನು ಜ್ಞಾನೇಂದ್ರ ಪಾಂಡೆ ಎಂದು ಗುರುತಿಸಲಾಗಿದ್ದು, ಈತ ಸುಡುವ ವಸ್ತುಗಳನ್ನು ಹೊಂದಿದ್ದ ಎಂದು ಹೇಳಲಾಗ್ತಿದೆ. ಘಟನೆ ಬಳಿಕ ಮೂರು ತಂಡಗಳನ್ನು ರಚಿಸಿದ ಉತ್ತರ ರೈಲ್ವೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸದ್ಯ, ಪ್ರಕರಣದ ತನಿಖೆಗಾಗಿ ದೆಹಲಿ ಆರ್ಪಿಎಫ್ 3 ತಂಡಗಳನ್ನು ರಚಿಸಿದೆ ಎಂದು ಉತ್ತರ ರೈಲ್ವೆಯ ಮುಖ್ಯ ಜನಸಂಪರ್ಕ ಅಧಿಕಾರಿ ದೀಪಕ್ ಕುಮಾರ್ ಹೇಳಿದ್ದಾರೆ. ಮೂರು ತಂಡಗಳ ಪೈಕಿ ಒಂದು ತಂಡವನ್ನು ನವದೆಹಲಿಯ ರೈಲ್ವೆ ನಿಲ್ದಾಣದಲ್ಲಿರುವ ಪಾರ್ಸೆಲ್ ಕಚೇರಿಯಲ್ಲಿ ತನಿಖೆಗಾಗಿ ಕಳುಹಿಸಲಾಗಿದೆ. ಇನ್ನೊಂದು ತಂಡವನ್ನು ಘಟನೆ ನಡೆದ ಗಾಜಿಯಾಬಾದ್ ರೈಲ್ವೆ ನಿಲ್ದಾಣದಲ್ಲಿ ನಿಯೋಜಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿ ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಿ ವಿಚಾರಣೆ ನಡೆಸುವ ಜವಾಬ್ದಾರಿಯನ್ನು ಮೂರನೇ ತಂಡಕ್ಕೆ ವಹಿಸಲಾಗಿದೆ. ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಿದ ಸಮಯದಲ್ಲಿ ಬ್ಲೂಟೂತ್ ಬ್ಯಾಟರಿಗಳು ಸೇರಿದಂತೆ ಹಲವು ಸುಡುವ ವಸ್ತುಗಳು ಆತನ ಬಳಿ ಪತ್ತೆಯಾಗಿವೆ ಎಂದು ದೀಪಕ್ ಕುಮಾರ್ ತಿಳಿಸಿದ್ದಾರೆ.
ಓದಿ : ದೆಹಲಿ - ಲಕ್ನೋ ಶತಾಬ್ದಿ ರೈಲಿನಲ್ಲಿ ಭಾರೀ ಬೆಂಕಿ
ತನಿಖೆಯ ವೇಳೆ, ಲೋಡಿಂಗ್ ಕಂಪನಿಯೊಂದರ ವ್ಯವಸ್ಥಾಪಕರು ಈ ವಸ್ತುಗಳನ್ನು ಅಧಿಕಾರಿಗಳ ಕಣ್ತಪ್ಪಿಸಿ ರೈಲಿನಲ್ಲಿ ಲೋಡ್ ಮಾಡಿರುವುದು ಪತ್ತೆಯಾಗಿದೆ. ಹೀಗಾಗಿ, ವಿವಿಧ ಸೆಕ್ಷನ್ಗಳಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರ್ಪಿಎಫ್ ಮೂಲಕ ಸ್ಥಳದಿಂದ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. ಎಫ್ಎಸ್ಎಲ್ ತಂಡದಿಂದ ವರದಿ ಪಡೆದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.