ಮಹಾರಾಷ್ಟ್ರ: ಕೊರೊನಾ ಬಿಕ್ಕಟ್ಟಿನ ಸಮಯವನ್ನು ಅವಕಾಶವಾಗಿ ಬಳಸಿಕೊಂಡಿರುವ ಯುವ ಉದ್ಯಮಿಯೋರ್ವ, ಆಯುರ್ವೇದ ಔಷಧದಲ್ಲಿ ವ್ಯಾಪಕವಾಗಿ ಬಳಸುವ ಅಮೃತಬಳ್ಳಿಯನ್ನು ಕಂಪನಿಗಳಿಗೆ ಪೂರೈಸುವ ಮೂಲಕ ಕೋಟಿಗಟ್ಟಲೇ ಹಣ ಗಳಿಸುತ್ತಿದ್ದಾನೆ. ಇದೆಲ್ಲಾ ಮಾಡುತ್ತಿರುವುದು ಓರ್ವ ಬುಡಕಟ್ಟು ಯುವಕನಾಗಿದ್ದು, ತನ್ನ ಹಲವು ಗಿರಿಜನರಿಗೆ ಈ ಮೂಲಕ ಉದ್ಯೋಗ ಕಲ್ಪಿಸಿದ್ದಾನೆ.
ಕೊರೊನಾದಿಂದ ಅನೇಕ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದರೆ, ಮಹಾರಾಷ್ಟ್ರದ ಥಾಣೆ ಮೂಲದ ಸುನಿಲ್ ಪವಾರ್ ಎಂಬ ಯುವ ಬುಡಕಟ್ಟು ಉದ್ಯಮಿ, ಅಮೃತಬಳ್ಳಿ ಪೂರೈಕೆ ಮಾಡುವುದಾಗಿ ಪ್ರಮುಖ ಕಂಪನಿಗಳೊಂದಿಗೆ 1.5 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದ್ದಾನೆ. ಈ ಮೂಲಕ ನೂರಾರು ಮಂದಿಗೆ ಉದ್ಯೋಗವಕಾಶ ಕಲ್ಪಿಸಿದ್ದಾನೆ.
ಸುನೀಲ್ ಶಹಪುರ್ ತಾಲೂಕಿನ ಖಾರಿದ್ ಮೂಲದವನು. ಸ್ಥಳೀಯ ಕಾಡುಗಳಲ್ಲಿ ಕಂಡು ಬರುವ ಔಷಧೀಯ ಸಸ್ಯಗಳ ಬಗ್ಗೆ ಉತ್ತಮ ತಿಳುವಳಿಕೆ ಹೊಂದಿದ್ದಾನೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅಮೃತಬಳ್ಳಿ (ಗಿಲ್ಲೊಯ್) ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.
ಸುನಿಲ್ ಇದನ್ನು ಎರಡು ವರ್ಷಗಳ ಹಿಂದೆ ಸಂಗ್ರಹಿಸಿ ಕಂಪನಿಗಳಿಗೆ ನೀಡುವ ವ್ಯವಹಾರವನ್ನು ಪ್ರಾರಂಭಿಸಿದ್ದ. ಇದರ ಭಾಗವಾಗಿ ಪ್ರಧಾನಿ ಕಟ್ಕರಿ ಬುಡಕಟ್ಟು ಜನಾಂಗಕ್ಕೆ ಉದ್ಯೋಗ ಒದಗಿಸಲು ವನ್ ಧನ್ ಯೋಜನೆಯ ಸಹಾಯದಿಂದ ವನ್ ಧನ್ ಕೇಂದ್ರವನ್ನು ಸ್ಥಾಪಿಸಿದ್ದ. ಆ ಸಮಯದಲ್ಲಿ ವರ್ಷಕ್ಕೆ 3 ರಿಂದ 5 ಲಕ್ಷ ರೂ. ಸಂಪಾದನೆ ಮಾಡುತ್ತಿದ್ದ.
ಇತ್ತೀಚೆಗೆ ಕೊರೊನಾ ಮಹಾಮಾರಿಯಿಂದ ಅಮೃತಬಳ್ಳಿಗೆ ಬೇಡಿಕೆ ಹೆಚ್ಚಾಯಿತು. ಇದರಿಂದ ಡಾಬರ್, ಬೈದ್ಯನಾಥ್ ಮತ್ತು ಹಿಮಾಲಯದಂತಹ ಕಂಪನಿಗಳಿಗೆ 350 ಟನ್ ಅಮೃತಬಳ್ಳಿ ಪೂರೈಸುವ 1.57 ಕೋಟಿ ರೂ. ಕಾಂಟ್ರಾಕ್ಟ್ ಅನ್ನು ತನ್ನದಾಗಿಸಿಕೊಂಡಿದ್ದಾನೆ. ಪ್ರಸ್ತುತ ಸುನಿಲ್ ಶಹಪುರದಲ್ಲಿಯೇ 6 ವನ್ ಧನ್ ಕೇಂದ್ರಗಳನ್ನು ಹೊಂದಿದ್ದಾನೆ.
ಅಮೃತಬಳ್ಳಿಯನ್ನು ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಜ್ವರ, ಮಧುಮೇಹ, ಹೆಪಟೈಟಿಸ್, ಅಸ್ತಮಾ ಮತ್ತು ಹೃದಯ ಸಂಬಂಧಿತ ಕಾಯಿಲೆಗಳನ್ನು ಗುಣಪಡಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಶೇಷವಾಗಿ ಉಪಯುಕ್ತವಾಗಿದೆ.