ನವದೆಹಲಿ: ದೇಶಾದ್ಯಂತ ಇದೀಗ ಕೋವಿಡ್ ಎರಡನೇ ಅಲೆ ತಗ್ಗುತ್ತಿದೆ. ಆದರೆ ಈ ನಡುವೆ ಏಮ್ಸ್ ಮುಖ್ಯಸ್ಥ ಡಾ. ರಂದೀಪ್ ಗುಲೇರಿಯಾ ನೀಡಿರುವ ಹೇಳಿಕೆಯೊಂದು ಮತ್ತಷ್ಟು ತಲ್ಲಣ ಮೂಡಿಸಿದೆ. ಡೆಡ್ಲಿ ವೈರಸ್ ಕೊರೊನಾದ ಮೂರನೇ ಅಲೆ ದೇಶ ಎದುರಿಸುವುದು ಅನಿವಾರ್ಯವಾಗಿದ್ದು, ಮುಂದಿನ 6-8 ವಾರಗಳಲ್ಲಿ ಇದು ಲಗ್ಗೆ ಹಾಕಬಹುದು ಎಂಬ ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿ ಜತೆ ಮಾತನಾಡಿರುವ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ, ದೇಶದಲ್ಲಿ ಕೊರೊನಾ ವೈರಸ್ನ ಎರಡನೇ ಅಲೆ ಕಡಿಮೆಯಾಗುತ್ತಿದ್ದಂತೆ ಅನೇಕ ರಾಜ್ಯಗಳು ಅನ್ಲಾಕ್ ಪ್ರಕ್ರಿಯೆ ಆರಂಭಿಸಿವೆ.
ಈ ವೇಳೆ ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ಮತ್ತಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎಂದಿದ್ದಾರೆ. ದೇಶದ ಎಲ್ಲರಿಗೂ ಲಸಿಕೆ ನೀಡುವುದು ಸದ್ಯ ನಮ್ಮ ಮುಂದಿರುವ ಸವಾಲಾಗಿದೆ. ಲಸಿಕೆ ನೀಡುವುದರ ನಡುವಿನ ಅಂತರ ಏರಿಕೆ ಮಾಡಿರುವುದು ಸದ್ಯದ ಪರಿಸ್ಥಿತಿಯಲ್ಲಿ ಅವಶ್ಯಕವಾಗಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ದೇಶದಲ್ಲಿ ಮೊದಲನೇ ಅಲೆ ಮುಗಿಯುತ್ತಿದ್ದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಎರಡನೇ ಅಲೆ ಉಂಟಾಗಿ, ಭಾರತ ಸಂಪೂರ್ಣವಾಗಿ ಸಮಸ್ಯೆ ಅನುಭವಿಸಿದೆ. ಇದೇ ಕಾರಣಕ್ಕಾಗಿ ಮತ್ತೊಮ್ಮೆ ಲಾಕ್ಡೌನ್ ನಿರ್ಧಾರ ಕೈಗೊಳ್ಳಲಾಗಿತ್ತು. ಸದ್ಯ ಸೋಂಕಿತ ಪ್ರಮಾಣ ಕಡಿಮೆಯಾಗ್ತಿದ್ದು, ಅನ್ಲಾಕ್ ಪ್ರಕ್ರಿಯೆ ಆರಂಭಗೊಂಡಿದೆ.
ಪ್ರಮುಖವಾಗಿ ಈ ವೇಳೆ ಈ ಹಿಂದೆ ಮಾಡಿರುವ ಯಾವುದೇ ತಪ್ಪು ಪುನರಾವರ್ತನೆ ಮಾಡಬಾರದು ಎಂದು ಗುಲೇರಿಯಾ ತಿಳಿಸಿದ್ದು, ಇದೇ ವಿಚಾರವಾಗಿ ಈಗಾಗಲೇ ಕೇಂದ್ರ ಸರ್ಕಾರ ರಾಜ್ಯಗಳಿಗೆ ಪತ್ರ ಸಹ ಬರೆದಿದೆ ಎಂದರು.
ಇದನ್ನೂ ಓದಿರಿ: ಡೋಂಟ್ ವರಿ... WHO-AIIMS ಸಿರೊಪ್ರೆವೆಲೆನ್ಸ್ ಸಮೀಕ್ಷೆಯ ಫಲಿತಾಂಶ ಸಕಾರಾತ್ಮಕ: ಗುಲೇರಿಯಾ
ಕಳೆದ ಕೆಲ ದಿನಗಳಿಂದ ದೇಶದಲ್ಲಿ ಕೊರೊನಾ ಸೋಂಕಿನ ವಿವಿಧ ರೂಂಪಾತರಿ ಕಾಣಿಸಿಕೊಳ್ಳುತ್ತಿದ್ದು, ಡೆಲ್ಟಾ ಪ್ಲಸ್ ಹೆಚ್ಚಿನ ಆತಂಕ ಮೂಡಿಸಿದೆ. ಇದರ ವಿರುದ್ಧ ಹೋರಾಡಲು ನಾವು ತಯಾರಿ ಮಾಡಿಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.
ದೇಶದಲ್ಲಿ ಅನ್ಲಾಕ್ ಆಗಿದೆ ಎಂದು ಜನರು ಭಯಭೀತರಾಗಿ ಓಡಾಡುವ ಬದಲಿಗೆ ಎಲ್ಲ ರೀತಿಯ ಮಾರ್ಗಸೂಚಿ ಪಾಲನೆ ಮಾಡಬೇಕಾಗಿದೆ ಎಂದು ಮನವಿ ಮಾಡಿದ್ದಾರೆ. ಬರುವ ದಿನಗಳಲ್ಲಿ ನಾವು ಕೊರೊನಾ ಮಾರ್ಗಸೂಚಿ ಯಾವ ರೀತಿಯಾಗಿ ಪಾಲನೆ ಮಾಡುತ್ತೇವೆ ಎಂಬುದರ ಮೇಲೆ ಎಲ್ಲವೂ ನಿರ್ಧಾರಗೊಳ್ಳಲಿದೆ ಎಂದು ಹೇಳಿದ್ದಾರೆ.