ರೂರ್ಕಿ (ಉತ್ತರಾಖಂಡ): ಪಿರಾನ್ ಕಲಿಯಾರ್ ಅವರ 754ನೇ ವಾರ್ಷಿಕ ಉರುಸ್ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಿ ಯಾತ್ರಾರ್ಥಿಗಳ ತಂಡ ಭಾರತಕ್ಕೆ ಆಗಮಿಸಿದೆ. ಲಾಹೋರಿ ಎಕ್ಸ್ಪ್ರೆಸ್ ರೈಲಿನಲ್ಲಿ ಉತ್ತರಾಖಂಡದ ರೂರ್ಕಿ ರೈಲು ನಿಲ್ದಾಣಕ್ಕೆ ಬಂದಿಳಿದ ಪಾಕ್ನ 150 ಯತ್ರಾರ್ಥಿಗಳಿಗೆ ಹೂವಿನ ಹಾರ ಹಾಕಿ ಸಂಭ್ರಮದಿಂದ ಸ್ವಾಗತಿಸಲಾಯಿತು. ಭಾರೀ ಭದ್ರತೆಯ ನಡುವೆ ಪಾಕಿಸ್ತಾನಿ ಯಾತ್ರಾರ್ಥಿಗಳನ್ನು ಬೇರೆ ಬೇರೆ ಬಸ್ಗಳಲ್ಲಿ ಕೂರಿಸಿ ಪಿರಾನ್ ಕಲಿಯಾರ್ಗೆ ಕಳುಹಿಸಲಾಯಿತು.
ರೂರ್ಕಿಗೆ ಬಂದ ಪಾಕಿಸ್ತಾನಿ ಯಾತ್ರಾರ್ಥಿಗಳು ಪಿರಾನ್ ಕಲಿಯಾರ್ನಲ್ಲಿರುವ ಸಬ್ರಿ ಅತಿಥಿ ಗೃಹದಲ್ಲಿ ತಂಗಿದ್ದಾರೆ. ಈ ಬಾರಿ 150 ಪಾಕಿಸ್ತಾನಿ ಯಾತ್ರಾರ್ಥಿಗಳು ಉರುಸ್ನಲ್ಲಿ ಪಾಲ್ಗೊಳ್ಳಲು ಬಂದಿದ್ದಾರೆ. ಪಾಕಿಸ್ತಾನಿ ಯಾತ್ರಾರ್ಥಿಗಳು ಉರುಸ್ನಲ್ಲಿ ಸುಮಾರು ಒಂದು ವಾರ ತಂಗಲಿದ್ದಾರೆ. ಒಂದು ವಾರದ ನಂತರ ಲಾಹೋರಿ ಎಕ್ಸ್ಪ್ರೆಸ್ ರೈಲಿನಲ್ಲಿಯೇ ಪಾಕಿಸ್ತಾನಕ್ಕೆ ತೆರಳಲಿದ್ದಾರೆ.
ಉರುಸ್ ಸಂಘಟನಾ ಸಮಿತಿಯ ಸಂಚಾಲಕ ಅಫ್ಜಲ್ ಮಂಗಳೂರು ಮಾತನಾಡಿ, ಈ ಬಾರಿ ಅಕ್ಟೋಬರ್ 10 ರಂದು ಪಿರಾನ್ ಕಲಿಯಾರ್ನಲ್ಲಿ ನಡೆದ ಕಾರ್ಯಕ್ರಮಕ್ಕೆ ಪಾಕ್ನ ಧರ್ಮ ಗುರು ಮತ್ತು ಯಾತ್ರಾರ್ಥಿಗಳನ್ನು ಆಹ್ವಾನಿಸಲಾಗಿದೆ. ಇಸ್ಲಾಮಾಬಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು166 ಪ್ರಯಾಣಿಕರಿಗೆ ಪಿರಾನ್ ಕಲಿಯಾರ್ ಉರುಸ್ಗೆ ಪಾಲ್ಗೊಳ್ಳಲು ವೀಸಾ ನೀಡಿದೆ. ಈ ಪೈಕಿ 150 ಯಾತ್ರಿಕರು ಭಾರತವನ್ನು ತಲುಪಿದ್ದಾರೆ. ಐದು ವರ್ಷಗಳ ನಂತರ ಈ ಬಾರಿಯ ಉರುಸ್ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: 75 ವರ್ಷಗಳ ನಂತರ ಪಾಕಿಸ್ತಾನಿ ಸಹೋದರನ ಭೇಟಿಯಾದ ಭಾರತೀಯ
ಪಿರಾನ್ ಕಲಿಯಾರ್ ದರ್ಗಾ ಭಾರತದ ಉತ್ತರಾಖಂಡ ರಾಜ್ಯದ ರೂರ್ಕಿಯಲ್ಲಿದೆ. ಉರುಸ್ಅನ್ನು ಪಿರಾನ್ ಕಲಿಯಾರ್ನಲ್ಲಿ ಆಯೋಜಿಸಲಾಗಿದೆ. ಹರಿದ್ವಾರ ಜಿಲ್ಲಾ ಕೇಂದ್ರದಿಂದ 25 ಕಿ.ಮೀ ದೂರದಲ್ಲಿರುವ ರೂರ್ಕಿ ಬಳಿಯ ಗಂಗಾನದಿಯ ಮೇಲ್ಭಾಗದ ಕಾಲುವೆಯ ದಂಡೆಯ ಮೇಲಿರುವ ಪಿರಾನ್ ಕಲಿಯಾರ್ ಗ್ರಾಮದಲ್ಲಿ ಈ ಜಾತ್ರೆ ನಡೆಯುತ್ತದೆ. ಈ ಸ್ಥಳದಲ್ಲಿ ಹಜರತ್ ಮಖ್ದೂಮ್ ಅಲ್ಲಾವುದ್ದೀನ್ ಅಹ್ಮದ್ ದರ್ಗಾ ಇದೆ. ಈ ಸ್ಥಳವು ಹಿಂದೂ ಮತ್ತು ಮುಸ್ಲಿಮರ ನಡುವಿನ ಐಕ್ಯತೆಗೆ ಸಾಕ್ಷಿಯಾಗಿದೆ.