ಕಣ್ಣೂರು: ಅದು 1930 ಮಾರ್ಚ್ 12ನೇ ತಾರೀಖು. ಮಹಾತ್ಮ ಗಾಂಧಿ ಅವರು ದಂಡಿ ಕಡಲ ತೀರದಲ್ಲಿ ನಿಂತು ‘ಒಂದು ಹಿಡಿ ಉಪ್ಪಿನಿಂದ ಬ್ರಿಟಿಷ್ ಸಾಮ್ರಾಜ್ಯದ ಬುನಾದಿಯನ್ನೇ ಅಲ್ಲಾಡಿಸಬಲ್ಲೆ' ಎಂದ ಒಂದು ಮಾತು ಅಕ್ಷರಶಃ ನಿಜವಾಯಿತು.
1882 ರ ಉಪ್ಪಿನ ಕಾಯ್ದೆಯನ್ನು ಜಾರಿ ಮಾಡಿದ ಬ್ರಿಟಿಷರು ಭಾರತದಲ್ಲಿ ಉಪ್ಪನ್ನು ಅವರ ಅಧೀನಕ್ಕೆ ಒಳಪಡಿಸಿಕೊಂಡರು. ಇದನ್ನು ಧಿಕ್ಕರಿಸಿ ಉಪ್ಪನ್ನು ಸಾರ್ವತ್ರಿಕಗೊಳಿಸಬೇಕು ಎಂದು ಆರಂಭಿಸಿದ ಹೋರಾಟವೇ ದಂಡಿ ಸತ್ಯಾಗ್ರಹ. ಗಾಂಧೀಜಿ ಅವರು ಕರೆ ನೀಡಿದ ಈ ಹೋರಾಟಕ್ಕೆ ಭಾರತೀಯರು ಜೈ ಎಂದಿದ್ದರು. ಅದೇ ರೀತಿಯಾಗಿ ಕೇರಳದಲ್ಲೂ ಕೂಡ ಉಪ್ಪಿನ ಸತ್ಯಾಗ್ರಹದಲ್ಲಿ ಜನರು ಪಾಲ್ಗೊಂಡು, ಹೋರಾಟದ ಕಿಚ್ಚಿಗೆ ಆಜ್ಯ ಸುರಿದಿದ್ದರು.
ಪಯ್ಯನೂರು, ಬೇಪೋರ್ನಲ್ಲಿ ಹೋರಾಟದ ಕಿಚ್ಚು
ಕೇರಳದ ಕಣ್ಣೂರಿನ ಪಯ್ಯನೂರು ಮತ್ತು ಕೋಚಿಕೋಡ್ನ ಬೇಪೋರ್ನಲ್ಲಿ ಉಪ್ಪಿನ ಸತ್ಯಾಗ್ರಹವನ್ನು ಮೊದಲ ಬಾರಿಗೆ ಆರಂಭಿಸಲಾಯಿತು. ಪಯ್ಯನೂರಿನ ಉಳಿಯತ್ತು ಕಡವು ಎಂಬಲ್ಲಿ ಕೇರಳದ ಗಾಂಧಿ ಎಂದೇ ಖ್ಯಾತರಾದ ಕೆ.ಕೇಳಪ್ಪನ್, ಶಂಕರ ಮೆನನ್ ಮತ್ತು ಸಿ.ಎಚ್. ಗೋವಿಂದನ್ ನಂಬಿಯಾರ್ ನೇತೃತ್ವದಲ್ಲಿ ಉಪ್ಪಿನ ಉತ್ಪಾದನೆ ಮಾಡಲಾಯಿತು.
ಕೋಯೀಕ್ಕೋಡ್ನ ಬೇಪೋರ್ನಲ್ಲಿ ಕೆ.ಟಿ. ಕುಂಜಿರಾಮನ್ ನಂಬಿಯಾರ್, ಮುಹಮ್ಮದ್ ಅಬ್ದುರಹೆಮಾನ್ ಮುಂದಾಳತ್ವದಲ್ಲಿ ಉಪ್ಪು ತಯಾರಿಸಿ ಬ್ರಿಟಿಷರ ಕಾಯ್ದೆಯನ್ನು ಮುರಿಯಲಾಯಿತು. ದಂಡಿ ಉಪ್ಪಿನ ಹೋರಾಟದಲ್ಲಿ ಗಾಂಧೀಜಿಯವರೊಂದಿಗೆ ಕೇರಳದ ಸಿ.ಕೃಷ್ಣನ್ ನಾಯರ್, ಟೈಟಸ್, ರಾಘವ್ ಪೊತುವಾಲ್, ಶಂಕರಜಿ ಮತ್ತು ತಪನ್ ನಾಯರ್ ಭಾಗವಹಿಸಿದ್ದರು ಎಂಬುದು ವಿಶೇಷ.
ಉಳಿಯತ್ ಕಡವಿಗೆ ಹೋರಾಟದ ಮೆರವಣಿಗೆ
ಏಪ್ರಿಲ್ 13, 1930 ರಂದು ಉಪ್ಪಿನ ಕಾಯ್ದೆಯ ವಿರುದ್ಧ ನಡೆದ ಮೆರವಣಿಗೆ ಕೇರಳದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮೇರು ಘಟ್ಟವೇ ಸರಿ. ಏಪ್ರಿಲ್ 12 ರಂದು ನಡೆದ ಸತ್ಯಾಗ್ರಹ ಮೆರವಣಿಗೆ ಪಯ್ಯನೂರಿಗೆ ತಲುಪಿ, ಮರುದಿನ ಉಳಿಯತ್ ಕಡವು ಪ್ರದೇಶಕ್ಕೆ ಬಂದಿತು. ಈ ಮೆರವಣಿಗೆಯಲ್ಲಿ ಕೃಷ್ಣ ಪಿಳ್ಳೈ ಅವರು ಹಾಡಿದ ಬ್ರಿಟಿಷ್ ವಿರೋಧಿ ಗೀತೆಯಾದ 'ವಾಜ್ಕ ಭರತಸಮುದಯಂ' ಬ್ರಿಟಿಷರ ವಿರುದ್ಧದ ಹೋರಾಟದ ಕಿಚ್ಚನ್ನು ಮತ್ತಷ್ಟು ಉದ್ದೀಪಿಸಿತು. ಉಳಿಯತ್ ಕಡವು ಕಡಲ ಕಿನಾರೆಯಲ್ಲಿ ಮೊಳಗಿದ ಘೋಷವಾಕ್ಯಗಳು, ರಾಷ್ಟ್ರಗೀತೆ ಬ್ರಿಟಿಷರ ಅವನತಿಯ ಅಂತ್ಯ ಘೋಷಣೆಯಂತಿದ್ದವು.
ಇದರಿಂದ ಆಕ್ರೋಶಗೊಂಡ ಬ್ರಿಟಿಷರು ಪಯ್ಯನೂರಿನ ಸತ್ಯಾಗ್ರಹ ಶಿಬಿರದ ಮೇಲೆ ದಾಳಿ ನಡೆಸಿ ಹೋರಾಟಗಾರರನ್ನು ಮನಸೋಇಚ್ಛೆ ಥಳಿಸಿದರು. ಕೆ.ಕೇಳಪ್ಪನ್ ಸೇರಿದಂತೆ ಹಲವಾರು ಮುಖಂಡರನ್ನು ಬಂಧಿಸಿ ಜೈಲಿಗಟ್ಟಿದ್ದರು. ಇದರಿಂದ ಮತ್ತಷ್ಟು ಉತ್ತೇಜಿತರಾದ ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಕಾಡ್ಗಿಚ್ಚಿನಂತೆ ಪಾಲ್ಗೊಂಡರು. ಕಣ್ಣೂರು, ತಲಶ್ಶೇರಿ ಮತ್ತು ಜಿಲ್ಲೆಯ ಇತರ ಭಾಗಗಳಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದವು. ಹಲವಾರು ಜನರು ಜೈಲುಪಾಲಾದರು.
ಪೊಲೀಸ್ ಠಾಣೆ ಈಗ ವಸ್ತು ಸಂಗ್ರಹಾಲಯ
ಪಯ್ಯನೂರಿನಲ್ಲಿನ ಬ್ರಿಟಿಷರ ಕಾಲದ ಪೊಲೀಸ್ ಠಾಣೆಯನ್ನು ಗಾಂಧಿ ವಸ್ತುಸಂಗ್ರಹಾಲಯವನ್ನಾಗಿ ಮಾಡಲಾಗಿದೆ. ಇಲ್ಲಿ ಉಪ್ಪಿನ ಸತ್ಯಾಗ್ರಹದ ಐತಿಹಾಸಿಕ ಚರಿತ್ರೆಗಳನ್ನು ಸಂರಕ್ಷಿಸಲಾಗಿದೆ. ಗಾಂಧಿ ಮ್ಯೂಸಿಯಂನಲ್ಲಿ ಆಂದೋಲನದಲ್ಲಿ ಭಾಗಿಯಾದವರ ಹೆಸರು ಮತ್ತು ಅವರ ವಿವರಗಳು ಮತ್ತು ಪೊಲೀಸರು ಹಾಕಿದ್ದ ಎಫ್ಐಆರ್ ಪ್ರತಿಗಳ ದಾಖಲೆಗಳಿವೆ.
ಅಲ್ಲದೇ, ಕಳೆದ ವರ್ಷ ಉಪ್ಪಿನ ಸತ್ಯಾಗ್ರಹದ 90 ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಆದರೆ, ಕೇರಳದಲ್ಲಿ ಉಪ್ಪಿನ ಸತ್ಯಾಗ್ರಹದ ಕಿಚ್ಚು ಹೊತ್ತಿಸಿದ್ದ ಐತಿಹಾಸಿಕ ಉಳಿಯತ್ ಕಡವು ಸ್ಥಳ ಮಾತ್ರ ಅನಾಥವಾಗಿದೆ. ಈ ಐತಿಹಾಸಿಕ ಸ್ಥಳವನ್ನು ರಕ್ಷಿಸಬೇಕು ಎಂಬುದು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸ್ಥಳೀಯರು ಆಗ್ರಹವಾಗಿದೆ.