ಶಿವಮೊಗ್ಗ:ಪಾಕಿಸ್ತಾನ ಪರ ಘೋಷಣೆ ಕೂಗಿದವರ ವಿರುದ್ಧ ತನಿಖೆ ನಡೆಸುವ ಅವಶ್ಯಕತೆ ಇಲ್ಲ. ಘೋಷಣೆ ಕೂಗಿದವರನ್ನು ಮೊದಲು ಒದ್ದು ಒಳಗೆ ಹಾಕಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ. ಶಿಕಾರಿಪುರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ, ಘೋಷಣೆ ಕೂಗಿದವನನ್ನು ಅಲ್ಲೇ ಒದ್ದು, ಒಳಗೆ ಹಾಕ್ತಾ ಇದ್ರು. ಘೋಷಣೆ ಕೂಗಿದ ಜಾಗದಲ್ಲೇ ಅಷ್ಟೊಂದು ಕ್ಯಾಮರಾಗಳಿವೆ. ಯಾರು ಕೂಗಿದ್ದಾರೆ ಎಂದು ಟಿವಿ ಮಾಧ್ಯಮಗಳು ದೃಶ್ಯಾವಳಿಗಳ ಸಹಿತ ಸುದ್ದಿ ಬಿತ್ತರಿಸಿವೆ. ಇದರಲ್ಲಿ ತನಿಖೆ ಮಾಡುವುದು ಏನಿದೆ ಎಂದು ಪ್ರಶ್ನಿಸಿದರು.
ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹತ್ತು ಬಾರಿ ಯೋಚನೆ ಮಾಡ್ತೀರಾ? ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ ವಿಜಯೇಂದ್ರ, ಇದಕ್ಕೆ ಬಿಜೆಪಿ ಹೋರಾಟಕ್ಕೆ ಇಳಿಯಬೇಕಾ? ದೇಶದ್ರೋಹಿಗಳನ್ನು ಹಿಡಿಯಿರಿ ಅಂದ್ರೆ, ದೇಶದ್ರೋಹಿಗಳ ವಿರುದ್ಧ ದನಿ ಎತ್ತಿದವರ ವಿರುದ್ಧ ಕ್ರಮ ತೆಗೆದುಕೊಳ್ತಿರಾ ಎಂದು ಪ್ರಶ್ನಿಸಿದರು.
ದೇಶದ್ರೋಹಿಗಳ ರಕ್ಷಣೆ ಕಾಂಗ್ರೆಸ್ನ 6ನೇ ಗ್ಯಾರಂಟಿ:5 ಗ್ಯಾರಂಟಿಗಳ ಜೊತೆ ದೇಶದ್ರೋಹಿಗಳನ್ನು ರಕ್ಷಣೆ ಮಾಡುವ 6ನೇ ಗ್ಯಾರಂಟಿ ಸೇರಿಸಿಕೊಂಡಿದ್ದಾರೆ. ತಪ್ಪಿತಸ್ಥರನ್ನು ನಿರಪರಾಧಿ ಎಂದು ಹೇಳುತ್ತಿರುವುದು ಖಂಡನೀಯ. ಈ ಕುರಿತು ಬಿಜೆಪಿ ನಿನ್ನೆಯೇ ಹೋರಾಟ ನಡೆಸಿದೆ. ನಾಸಿರ್ ಹುಸೇನ್ ನಡವಳಿಕೆಯನ್ನು ಇಡೀ ರಾಜ್ಯದ ಜನರು ಗಮನಿಸಿದ್ದಾರೆ. ಅವರು ಆಯ್ಕೆಯಾದ ಮರುಕ್ಷಣವೇ ಈ ರೀತಿ ನಡೆದಿದೆ ಎಂದರೆ, ಮುಂದೆ ಇನ್ನೇನು ಗಂಡಾಂತರ ಕಾದಿದೆಯೋ ಗೊತ್ತಿಲ್ಲ. ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಈ ರೀತಿಯ ಘಟನೆಗಳು ನಡೆಯುತ್ತಿವೆ. ಡಿಸಿಎಂ ಅವರಿಗೆ ಕ್ಲೀನ್ ಚಿಟ್ ನೀಡುವುದು, ಗೃಹಮಂತ್ರಿಗಳು ಏನು ಆಗೇ ಇಲ್ಲ ಎಂಬಂತೆ ವರ್ತಿಸುತ್ತಿರುವುದು ಖಂಡನೀಯ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಇದು ರಾಜ್ಯದ ಜನರು ತಲೆತಗ್ಗಿಸುವ ಕೆಲಸ ಎಂದರು.
ಪ್ರಕಾಶ್ ರೈ ಹೇಳಿಕೆಗೆ ಕಿಡಿ:ಯಾರೋ ಒಬ್ಬ ಅಯೋಗ್ಯ ಮಾತಾಡ್ತಾರೆ ಅಂತಾ ಅವರಿಗೆ ಉತ್ತರ ಕೊಡುವ ಅಗತ್ಯವಿಲ್ಲ. ಮೋದಿಯವರನ್ನು ದೇಶದ ಎಲ್ಲಾ ವರ್ಗದ ಜನರು ಒಪ್ಪಿದ್ದಾರೆ. ದೇಶದ ಪ್ರಧಾನಿಯಾಗಿ ಮೋದಿಯವರೇ ಆಯ್ಕೆಯಾಗಬೇಕೆಂದು ಜನರು ಬಯಸಿದ್ದಾರೆ. ಖರ್ಗೆಯವರು ಕೂಡ ಅದೇ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. 400ಕ್ಕೂ ಹೆಚ್ಚು ಸೀಟು ಗೆದ್ದು ಮೋದಿ ಪ್ರಧಾನಿಯಾಗ್ತಾರೆ. ದೇಶದ ಅಭಿವೃದ್ಧಿ ದೃಷ್ಟಿಯಿಂದ ಮೋದಿಯವರೇ ಪ್ರಧಾನಿ ಆಗುತ್ತಾರೆ. ಉಡಾಫೆಯಾಗಿ ಮಾತನಾಡುವವರಿಗೆ ದೇಶದ ಜನರೇ ಉತ್ತರಿಸುತ್ತಾರೆ ಎಂದು ಹೇಳಿದರು.
ರಾಜ್ಯಸಭಾ ಚುನಾವಣೆಯಲ್ಲಿ ನಾವು, ಜೆಡಿಎಸ್ ಸೇರಿ 5ನೇ ಅಭ್ಯರ್ಥಿ ಹಾಕಿದ್ದು ನಿಜ. ಅದಕ್ಕೆ ಕಾರಣಗಳು ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದು ಇದೇ ವೇಳೆ ತಿಳಿಸಿದರು.