ಕರ್ನಾಟಕ

karnataka

ಮಂಗಳೂರು: ಪ್ರಾರ್ಥನಾ ಮಂದಿರದ ಬಳಿ ಕಲ್ಲು ತೂರಾಟ: 6 ಮಂದಿ ಆರೋಪಿಗಳ ಬಂಧನ - Stone Pelting

By ETV Bharat Karnataka Team

Published : Sep 16, 2024, 9:25 AM IST

Updated : Sep 16, 2024, 3:42 PM IST

ಕಾಟಿಪಳ್ಳದಲ್ಲಿ ಭಾನುವಾರ ರಾತ್ರಿ 11 ಗಂಟೆಯ ಸುಮಾರಿಗೆ ಪ್ರಾರ್ಥನಾ ಮಂದಿರದ ಸಮೀಪ ಕಲ್ಲು ತೂರಾಟ ನಡೆದಿದೆ. ಘಟನೆ ಸಂಬಂಧ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸುರತ್ಕಲ್ ಕಾಟಿಪಳ್ಳದಲ್ಲಿ ಭದ್ರತೆ
ಕಾಟಿಪಳ್ಳದಲ್ಲಿ ಪೊಲೀಸ್ ಭದ್ರತೆ (ETV Bharat)

ಮಂಗಳೂರು:ನಗರದಹೊರವಲಯದ ಸುರತ್ಕಲ್‌ ಕಾಟಿಪಳ್ಳ 3ನೇ ಬ್ಲಾಕ್​​ನಲ್ಲಿರುವ ಅನ್ಯ ಕೋಮಿನ ಪ್ರಾರ್ಥನಾ ಮಂದಿರದ ಸಮೀಪ ಕಲ್ಲು ತೂರಾಟ ನಡೆಸಿದ್ದ ಪ್ರಕರಣ ಸಂಬಂಧ ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸುರತ್ಕಲ್​ನ ಕಾನಕಟ್ಲದ ಭರತ್ ಶೆಟ್ಟಿ (26), ಚೆನ್ನಪ್ಪ ಚಲವಾದಿ (19), ಸುರತ್ಕಲ್ ಚೇಳಾರುವಿನ ನಿತಿನ್ ಹಡಪ (22) ಮುಂಚೂರು ಕೊಡಿಪಾಡಿಯ ಸುಜಿತ್ ಶೆಟ್ಟಿ (23), ಹೊಸಬೆಟ್ಟು ಗ್ರಾಮದ ಅಣ್ಣಪ್ಪ (24) ಹಾಗೂ ಕಾಟಿಪಳ್ಳ ಮೂರನೇ ಬ್ಲಾಕ್​ನ ಪ್ರೀತಮ್ ಶೆಟ್ಟಿ (34) ಬಂಧಿತ ಆರೋಪಿಗಳು.

ಸೆಪ್ಟೆಂಬರ್​​​ 15ರ ಸಂಜೆ ವೇಳೆಗೆ ಹಬ್ಬದ ಪ್ರಯುಕ್ತ ಪ್ರಾರ್ಥನಾ ಮಂದಿರಕ್ಕೆ ದೀಪಾಲಂಕಾರ ಮಾಡಿ, ಒಳಗಡೆ ಕಾರ್ಯಕರ್ತರೆಲ್ಲ ಕೆಲಸ ಮಾಡಿಕೊಂಡಿದ್ದ ಸಮಯದಲ್ಲಿ ರಾತ್ರಿ 9-50 ಗಂಟೆ ಸುಮಾರಿಗೆ ಕಲ್ಲು ತೂರಾಟ ನಡೆಸಲಾಗಿದೆ. ಎರಡು ಬೈಕ್‌ಗಳಲ್ಲಿ ಜನತಾ ಕಾಲೋನಿಯ ಸ್ಮಶಾನದ ಕಡೆಯಿಂದ ಬಂದು ಮಂದಿರದ ಹಿಂಭಾಗದ ರಸ್ತೆಯ ಕಡೆಯಿಂದ ಕಲ್ಲು ಬಿಸಾಡಿದ್ದಾರೆ. ದ್ವೇಷ ಉಂಟು ಮಾಡುವ ಉದ್ದೇಶದಿಂದ ಈ ರೀತಿ ಕಲ್ಲು ಬಿಸಾಡಲಾಗಿದೆ ಎಂಬುದಾಗಿ ಕೆ.ಹೆಚ್. ಅಬ್ದುಲ್ ರಹಿಮಾನ್ ಎಂಬವರು ಪೊಲೀಸರಿಗೆ ದೂರು ನೀಡಿದ್ದರು.

ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈಗಾಗಲೇ, 1ನೇ ಆರೋಪಿ ಭರತ್ ಶೆಟ್ಟಿ ಮೇಲೆ ಒಟ್ಟು 12 ಪ್ರಕರಣ, 2ನೇ ಆರೋಪಿ ಚೆನ್ನಪ್ಪ ಶಿವಾನಂದ ಮೇಲೆ 5 ಪ್ರಕರಣ, 3ನೇ ಆರೋಪಿ ನಿತಿನ್ ಹಡಪ ಮೇಲೆ 1 ಪ್ರಕರಣ, 5ನೇ ಆರೋಪಿಯಾದ ಅಣ್ಪಪ್ಪ ಮೇಲೆ 2 ಪ್ರಕರಣ ಹಾಗೂ 6ನೇ ಆರೋಪಿ ಪ್ರೀತಮ್ ಶೆಟ್ಟಿ ಮೇಲೆ 2 ಪ್ರಕರಣಗಳು ದಾಖಲಾಗಿವೆ. ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿದ 1 ಸ್ವಿಫ್ಟ್ ಕಾರು, 2 ಬೈಕ್​ ಹಾಗೂ 4 ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದ ಮಂಗಳೂರು ನಗರ ಪೊಲೀಸ್ ಕಮೀಷನರ್ ಅ‌ನುಪಮ್ ಅಗರ್‌ವಾಲ್ ''ಇಂದು ಈದ್ ಮಿಲಾದ್ ಹಬ್ಬವೂ ಇರುವ ಕಾರಣ ಸುರತ್ಕಲ್ ಪ್ರದೇಶ ಸೇರಿದಂತೆ ಮಂಗಳೂರು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಲ್ಲು ತೂರಾಟ ಮಾಡಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿದೆ'' ಎಂದು ತಿಳಿಸಿದ್ದರು.

ಮತ್ತೊಂದೆಡೆ, ಹಿಂದೂ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಬಿ.ಸಿ. ರೋಡ್ ಚಲೋ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಹಿಂದೂ ಮುಖಂಡ ಶರಣ್ ಪಂಪ್​ವೆಲ್ ಕೂಡ ಆಗಮಿಸಿದ್ದು, ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಸ್ಥಳೀಯ ಪೊಲೀಸರು ಬಿಗಿ ಪೊಲೀಸ್​​ ಬಂದೋಬಸ್ತ್ ಕೈಗೊಂಡಿದ್ದರು.

ಇದನ್ನೂ ಓದಿ:ನಾಗಮಂಗಲದಲ್ಲಿ ಗಣಪತಿ ಮೆರವಣಿಗೆ ವೇಳೆ ಕಲ್ಲು ತೂರಾಟ; ಅಂಗಡಿ, ವಾಹನಗಳಿಗೆ ಬೆಂಕಿ, ಇಬ್ಬರು ಪೊಲೀಸರಿಗೆ ಗಾಯ - Stone Pelting In Nagamangala

Last Updated : Sep 16, 2024, 3:42 PM IST

ABOUT THE AUTHOR

...view details