ಕರ್ನಾಟಕ

karnataka

ಕಾರಾಗೃಹದಲ್ಲಿ ವಿಶೇಷ ಆತಿಥ್ಯ ಪ್ರಕರಣ, ಕೋರ್ಟ್​ ಅನುಮತಿ ಪಡೆದು ತನಿಖೆ: ಬೆಂಗಳೂರು ನಗರ ಪೊಲೀಸ್ ಆಯುಕ್ತ - Darshan in Jail

By ETV Bharat Karnataka Team

Published : Aug 27, 2024, 3:23 PM IST

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಸೇರಿ ಆರೋಪಿಗಳಿಗೆ ವಿಶೇಷ ಸೌಲಭ್ಯ ಒದಗಿಸಿದ ಪ್ರಕರಣ ಸಂಬಂಧ ಓರ್ವ ಎಸಿಪಿ ಮತ್ತು ಇಬ್ಬರು ಇನ್ಸ್​ಪೆಕ್ಟರ್​ಗಳ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗುವುದು ಎಂದು ಪೊಲೀಸರು ಆಯುಕ್ತರು ಮಾಹಿತಿ ನೀಡಿದ್ದಾರೆ. ​

ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ (ETV Bharat)

ಬೆಂಗಳೂರು ನಗರ ಪೊಲೀಸ್ ಆಯುಕ್ತ (ETV Bharat)

ಬೆಂಗಳೂರು:ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಸೇರಿ ರೌಡಿಗಳಿಗೆ ವಿಶೇಷ ಆತಿಥ್ಯ ಕಲ್ಪಿಸಿದ ಸಂಬಂಧ ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಪ್ರಕರಣ ತನಿಖೆ ಕುರಿತಂತೆ ಇಂದು ಮಧ್ಯಾಹ್ನ ನಂತರ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ಭೇಟಿ ನೀಡಿ ತನಿಖೆ ಕುರಿತು ಮಾಹಿತಿ ಪಡೆಯಲಿದ್ದಾರೆ.

ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯ ಹಿನ್ನೆಲೆ ಅಧೀಕ್ಷಕ ಹಾಗೂ ಸೂಪರಿಡೆಂಟೆಂಟ್ ಸೇರಿದಂತೆ 9 ಮಂದಿ ಜೈಲು ಸಿಬ್ಬಂದಿಯನ್ನ ಅಮಾನತುಗೊಳಿಸಲಾಗಿದೆ. ದರ್ಶನ್ ಕುಳಿತುಕೊಂಡಿರುವ ಫೋಟೊ ತೆಗೆದ ವಿಚಾರಣಾಧೀನ ಕೈದಿ ಹಾಗೂ ಸೆಲ್​​ನಲ್ಲಿ ದರ್ಶನ್ ಜೊತೆ ಕುಳಿತಿರುವ ಮತ್ತೊಬ್ಬ ಕೈದಿ ಮೊಬೈಲ್ ಬಳಸಿರುವುದು ಬೆಳಕಿಗೆ ಬಂದಿದೆ. ಕೆಲ ಸಂದರ್ಭಗಳನ್ನು ಹೊರತುಪಡಿಸಿ ಅಧೀಕ್ಷಕರಿಗೂ ಮೊಬೈಲ್ ಬಳಕೆ ನಿಷಿದ್ಧ. ಆದಾಗ್ಯೂ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ (ಕೆಐಎಸ್​​ಎಫ್) ಸಿಬ್ಬಂದಿಯ ಕಣ್ತಪ್ಪಿಸಿ ಮೊಬೈಲ್ ಬಳಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ದರ್ಶನ್ ಸೇರಿದಂತೆ ಇನ್ನಿತರ ಆರೋಪಿಗಳು ಮೊಬೈಲ್ ಬಳಸುತ್ತಿರುವುದು ಭದ್ರತಾ ಸಿಬ್ಬಂದಿಗೆ ಗಮನಕ್ಕೆ ಬಂದಿತ್ತಾ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜೈಲಿನಲ್ಲಿ ಭದ್ರತಾ ಜವಾಬ್ದಾರಿ ಸಂಪೂರ್ಣವಾಗಿ ಕೆಐಎಸ್​ಎಫ್ ಇಲಾಖೆ ಮೇಲಿರಲಿದೆ. ಕೇಂದ್ರ ಕಾರಾಗೃಹ ಭದ್ರತೆಗಗಾಗಿ ಓರ್ವ ಅಸಿಸ್ಟೆಂಟ್ ಕಮಾಂಡೆಂಟ್ ಇಬ್ಬರು ಇನ್ಸ್​ಪೆಕ್ಟರ್​​ಗಳು ಸೇರಿ 100ಕ್ಕೂ ಹೆಚ್ಚು ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಐಎಸ್​​ಎಫ್ ಇಬ್ಬರು ಇನ್ಸ್​ಪೆಕ್ಟರ್​ಗಳು ಕಳೆದ ಆರೇಳು ವರ್ಷದಿಂದ ಇದೇ ಜೈಲಿನ ಭದ್ರತಾ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ. ಜೈಲಿನ ಹೊರಭಾಗದಲ್ಲಿರುವ ಚೆಕ್ ಪಾಯಿಂಟ್, ಜೈಲಿನ ಮುಖ್ಯ ಪ್ರವೇಶದ್ವಾರ ಸೇರಿದಂ‌ತೆ ಜೈಲಿನ ಸುತ್ತಮತ್ತಲಿನ ವಾಚ್ ಟವರ್​​ನಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಾರೆ. ಜೈಲಿಗೆ ಎಂಟ್ರಿಯಾಗುವ ದಿನಸಿ ಪದಾರ್ಥಗಳಿಂದ ಹಿಡಿದು ಎಲ್ಲಾ ವಸ್ತುಗಳನ್ನ ಈ ಅಧಿಕಾರಿಗಳು ತಪಾಸಣೆ ಮಾಡುತ್ತಾರೆ. ಅಲ್ಲದೆ ಅಲ್ಲಿನ ಮುಖ್ಯ ಅಧೀಕ್ಷರು ಸೇರಿದಂತೆ ಎಲ್ಲಾ ಅಧಿಕಾರಿ ಸಿಬ್ಬಂದಿಯನ್ನ ಈ ಅಧಿಕಾರಿಗಳು ಎಂಟ್ರಿ ಮತ್ತು ಎಗ್ಸಿಟ್​​ನಲ್ಲಿ ತಪಾಸಣೆ ಮಾಡುತ್ತಾರೆ. ಸದ್ಯ ಜೈಲು ಅಧಿಕಾರಿಗಳ ವಿಚಾರಣೆ ಮಾಡುವುದಕ್ಕೆ ಮುನ್ನ ಈ ಅಧಿಕಾರಿಗಳ ವಿಚಾರಣೆ ಮಾಡಲು ಮುಂದಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಜೈಲಿಗೆ ನಟ ದರ್ಶನ್​ ಸ್ಥಳಾಂತರಿಸುವ ಬಗ್ಗೆ ಪೊಲೀಸ್ ಇಲಾಖೆ ತೀರ್ಮಾನಿಸಲಿದೆ: ಸಿಎಂ - Darshan Jail Issue

ಕೋರ್ಟ್ ಅನುಮತಿ ಪಡೆದು ತನಿಖೆ:ಆರೋಪಿಗಳಿಗೆ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಿರುವುದರ ಕುರಿತು ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಓರ್ವ ಎಸಿಪಿ ಹಾಗೂ ಇಬ್ಬರು ಇನ್ಸ್‌ಪೆಕ್ಟರ್ಸ್ ನೇತೃತ್ವದಲ್ಲಿ ತನಿಖೆ ಆರಂಭವಾಗಲಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಕಾರಾಗೃಹದ ವಿಷಯಗಳ ಕುರಿತು ತನಿಖೆಗೆ ನ್ಯಾಯಾಲಯದ ಅನುಮತಿ ಅಗತ್ಯವಿರುವುದರಿಂದ, ಅನುಮತಿ ಪಡೆದುಕೊಂಡು ತನಿಖೆ ಆರಂಭಿಸಲಾಗುತ್ತದೆ. ನಂತರದಲ್ಲಿ ತನಿಖೆಯ ಭಾಗವಾಗಿ ಆರೋಪಿಗಳನ್ನ ಕಸ್ಟಡಿಗೆ ಪಡೆಯುವುದು ಅಗತ್ಯವಿದ್ದರೆ ಪಡೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಕಾರಾಗೃಹದಲ್ಲಿರುವ ಕೆಲ ಅಪರಾಧಿಗಳು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದರ ಕುರಿತು ಮಾಹಿತಿ ಲಭ್ಯವಾದುದರಿಂದ ಕಳೆದ ಶನಿವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಯಾವುದೇ ರೀತಿ ಪೂರಕ ದಾಖಲೆಗಳು ಲಭ್ಯವಾಗಿರಲಿಲ್ಲ, ಆದರೆ ದಾಳಿಗೂ ಪೂರ್ವದಲ್ಲೇ ಕೆಲವು ವಸ್ತುಗಳನ್ನ ಬೇರೆಡೆ ಸಾಗಿಸಿರುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿರುವುದರಿಂದ ತನಿಖೆ ನಡೆಸಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಆಯುಕ್ತರು ಮಾಹಿತಿ ನೀಡಿದರು.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೋಕಾ ಕಾಯ್ದೆಯಡಿ ಬಂಧಿಸಲ್ಪಟ್ಟಿರುವ ಆರೋಪಿಗಳೂ ಸೇರಿದಂತೆ ಅನೇಕ ಆರೋಪಿಗಳಿದ್ದು, ಅವರು ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಾಧ್ಯತೆಯಿರುವುದರಿಂದ ಬೇರೆಡೆಗೆ ಸ್ಥಳಾಂತರಿಸುವಂತೆ ಕಾರಾಗೃಹ ಇಲಾಖೆಗೆ ಮನವಿ ಮಾಡಿಕೊಂಡಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: ಎರಡ್ಮೂರು ದಿ‌ನಗಳಲ್ಲಿ ನಟ ದರ್ಶನ್​​ರನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡಲಾಗುವುದು: ಸಚಿವ ಜಿ. ಪರಮೇಶ್ವರ್ - Minister G Parameshwar

ABOUT THE AUTHOR

...view details