ಕರ್ನಾಟಕ

karnataka

ETV Bharat / state

ಯಶಸ್ವಿಯಾಗಿ ಜಂಬೂಸವಾರಿ ಹೊತ್ತ AK47 ಖ್ಯಾತಿಯ ಅಭಿಮನ್ಯು; ಮಾವುತನ ವಿಶೇಷ ಸಂದರ್ಶನ

AK47 ಖ್ಯಾತಿಯ ಅಭಿಮನ್ಯು ಆನೆಯ ಬಗ್ಗೆ ಹಾಗೂ ಜಂಬೂಸವಾರಿ ಪೂರೈಸಿದ ಅನುಭವದ ಬಗ್ಗೆ ಮಾವುತ ವಸಂತ್ ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.

By ETV Bharat Karnataka Team

Published : 4 hours ago

mahout-vasant
ಅಭಿಮನ್ಯು ಮಾವುತ ವಸಂತ್ (ETV Bharat)

ಮೈಸೂರು : ಸತತ 25 ವರ್ಷಗಳಿಂದ ದಸರಾ‌ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಅಭಿಮನ್ಯು ಆನೆ, ಕಳೆದ 5 ವರ್ಷಗಳಿಂದ ಯಶಸ್ವಿಯಾಗಿ ಚಿನ್ನದ ಅಂಬಾರಿಯನ್ನು ಹೊತ್ತು ಯಶಸ್ವಿಯಾಗಿ ಜಂಬೂಸವಾರಿ ಮೆರವಣಿಗೆಯನ್ನು ಮಾಡುತ್ತ ಬಂದಿದ್ದಾನೆ. AK47 ಖ್ಯಾತಿಯ ಅಭಿಮನ್ಯು ಆನೆಯ ಬಗ್ಗೆ ಹಾಗೂ ಜಂಬೂಸವಾರಿ ಪೂರೈಸಿದ ಅನುಭವ ಹಾಗೂ ಆನೆಯ ಸಾಧನೆಗಳ ಬಗ್ಗೆ ಅದರ ಮಾವುತ ವಸಂತ್ ಈಟಿವಿ‌ ಭಾರತದ ಜೊತೆ ಮಾತನಾಡಿದ್ದಾರೆ.

ಅರಮನೆಯ ಆನೆ ಶೆಡ್​ನಲ್ಲಿ ಯಶಸ್ವಿ ಜಂಬೂಸವಾರಿ ಮುಗಿಸಿ ರಿಲ್ಯಾಕ್ಸ್​ ಮೂಡ್​ನಲ್ಲಿರುವ ಅಭಿಮನ್ಯು ಆನೆಯನ್ನು ನೋಡಲು ಜನಸಾಗರವೇ ಬರುತ್ತಿದೆ. ಈ ಮಧ್ಯೆ ಅಭಿಮನ್ಯುವಿನ ಮಾವುತ ಆನೆ ಪಕ್ಕದಲ್ಲಿ ನಿಂತು ಅಭಿಮನ್ಯುವಿನ ಬಗ್ಗೆ ಮನದಾಳದ ಮಾತನ್ನು ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ. ಇದರ ಸಂದರ್ಶನದ ವಿವರ ಹೀಗಿದೆ.

ಅಭಿಮನ್ಯು ಮಾವುತ ವಸಂತ್ ಸಂದರ್ಶನ (ETV Bharat)

'ನನಗೆ ಬಹಳ ಖುಷಿಯಾಗುತ್ತಿದೆ. ಇಡೀ ಭಾರತವೇ ಜಂಬೂಸವಾರಿಯನ್ನ ನೋಡಿದೆ. ವಿದೇಶದಿಂದಲೂ ಕೂಡ ದಸರಾ ನೋಡಲು ಪ್ರವಾಸಿಗರು ಬಂದಿದ್ದರು. ಇದು ನನಗೆ ಬಹಳ ಖುಷಿ ಕೊಟ್ಟಿದೆ. ವಿಶೇಷವಾಗಿ ಜಂಬೂ ಸವಾರಿ ಸಾಗುವ ಸಮಯದಲ್ಲಿ ಜನರು ಟಾಟಾ ಮಾಡುತ್ತಿದ್ದರು. ಮಕ್ಕಳು ತಾಯಿ ಚಾಮುಂಡಿದೇವಿ ನೋಡಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆನೆಗಳು ಸಾಲಾಗಿ ಹೋಗುವುದನ್ನು ನೋಡಿ ಮಕ್ಕಳು ಬಹಳ ಖುಷಿಯಿಂದ ಅವರ ತಾಯಿಯನ್ನು ಕರೆದುಕೊಂಡು ಬಂದು ಆನೆ ತೋರಿಸು ಎನ್ನುತ್ತಿದ್ದರು. ಇದೆಲ್ಲ ನನಗೆ ಬಹಳ ಸಂತೋಷ ತಂದಿದೆ' ಎಂದು ಮಾವುತ ವಸಂತ್ ಹೇಳಿದ್ದಾರೆ.

ಅಭಿಮನ್ಯು ಆನೆಯೊಂದಿಗೆ ಮಾವುತ ವಸಂತ್ (ETV Bharat)

'ನಮ್ಮ ರಾಜ್ಯದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ. ಕೆ ಶಿವಕುಮಾರ್ ಪುಷ್ಪಾರ್ಚನೆ ಮಾಡಿದರು. ಅವರ ಆಶೀರ್ವಾದ ಹಾಗೂ ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ನಮ್ಮ ಅಭಿಮನ್ಯುವಿನ ಮೇಲೆ ಯಾವಾಗಲೂ ಇರುತ್ತದೆ. ಅಭಿಮನ್ಯು ಕಳೆದ 25 ವರ್ಷಗಳಿಂದ ದಸರಾದಲ್ಲಿ ಭಾಗವಹಿಸುತ್ತಿದ್ದಾನೆ ಹಾಗೂ ಐದು ವರ್ಷ ಅಂಬಾರಿ ಹೊತ್ತಿದ್ದಾನೆ, ಶಕ್ತಿಯುತನಾಗಿದ್ದಾನೆ' ಎಂದಿದ್ದಾರೆ.

'ವಿಶೇಷವಾಗಿ 32 ವರ್ಷದಿಂದಲೂ ಅಂಬಾರಿಯನ್ನು ಆನೆಗೆ ಸೂರ್ಯ ಮುಳುಗುವ ಕಡೆ ಕಟ್ಟಲಾಗುತ್ತಿತ್ತು. ಆದರೆ, ಅಭಿಮನ್ಯು ಬಂದಮೇಲೆ ಸೂರ್ಯ ಹುಟ್ಟುವ ಕಡೆ ಅಂಬಾರಿ ಕಟ್ಟುವ ಕೆಲಸ ಆಗುತ್ತಿದೆ. ಇದೊಂದು ಕೆಲಸ ಅಭಿಮನ್ಯು ಬಂದ ಮೇಲೆ ಆಗಿದೆ. ಈ ಬಾರಿ ಜಂಬೂಸವಾರಿ ಸ್ವಲ್ಪ ತಡವಾಗಿ ನಡೆದಿದ್ದ ಕಾರಣ ದೀಪಾಲಂಕಾರದಲ್ಲಿ ಲೈಟ್​ಗಳು ಆನ್ ಆಗಿದ್ದವು. ಅದು ಹಗಲಿಗಿಂತ ಲೈಟಿನ ಬೆಳಕಿನಲ್ಲಿ ತಾಯಿ ಚಾಮುಂಡಿ ಪಳಪಳನೆ ಹೊಳೆಯುತ್ತಿದ್ದಳು. ಅದನ್ನು ನೋಡಲು ಬಹಳ ಖುಷಿಯಾಗುತ್ತಿತ್ತು. ಈ ಬಾರಿ ಸಾಕಷ್ಟು ಜನ ಸೇರಿದ್ದರು. ಅಷ್ಟು ಜನರನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ. ಎಲ್ಲರೂ ಕೂಡ ತಾಯಿ ಚಾಮುಂಡೇಶ್ವರಿ ಹಾಗೂ ಅಭಿಮನ್ಯು' ಎಂದು ಕೂಗುತ್ತಿದ್ದರು ಎಂದು ಹೇಳಿದರು.

AK47 ಆನೆ ಎಂದು ಹೆಸರುವಾಸಿ: 'ಸಿಟಿಯಲ್ಲಿದ್ದಾಗ ಅಭಿಮನ್ಯು ಯಾರಿಗೂ ಕೂಡ ಏನನ್ನೂ ಮಾಡುವುದಿಲ್ಲ. ಕಾಡಿಗೆ ಹೋದ ಮೇಲೆ ಪುಂಡಾನೆ, ಹುಲಿಗಳನ್ನು ಹಿಡಿಯುವ ಕೆಲಸ ಮಾಡುತ್ತಾನೆ. ಇದುವರೆಗೂ 200ಕ್ಕೂ ಹೆಚ್ಚು ಆನೆಗಳನ್ನು ಹಿಡಿದಿದ್ದಾನೆ. ಮಹಾರಾಷ್ಟ್ರ, ತಮಿಳುನಾಡು, ಕೇರಳ, ಮಧ್ಯಪ್ರದೇಶ ರಾಜ್ಯದಲ್ಲೂ ಕೂಡ ಆನೆಗಳು ಮತ್ತು ಹುಲಿಗಳನ್ನು ಕ್ಯಾಪ್ಚರ್ ಮಾಡುವಂತಹ ಕೆಲಸ ಮಾಡಿದ್ದಾನೆ. ಅದರಲ್ಲೂ ಕರ್ನಾಟಕದಲ್ಲಿ ಎಲ್ಲೇ ಆನೆ ಮತ್ತು ಹುಲಿಗಳ ಹಾವಳಿ ಇದ್ದರೂ ಅಭಿಮನ್ಯು ಅಲ್ಲಿಗೆ ಹೋಗುತ್ತಾನೆ. ಆನೆಗಳನ್ನು ಹಿಡಿಯುವಾಗ ಬಹಳಷ್ಟು ಕಾದಾಟ ಆಗಿದೆ. ಹಾಸನದಲ್ಲಿ ಈ ಬಾರಿ ಹಾವಳಿ ಮಾಡುತ್ತಿದ್ದ ಕರಡಿ ಆನೆಯನ್ನು ಕೂಡ ನಮ್ಮ ಅಭಿಮನ್ಯು ಸೆರೆ ಹಿಡಿದಿದ್ದಾನೆ. ಇದಕ್ಕಾಗಿ AK47 ಆನೆ ಎಂದು ಹೆಸರುವಾಸಿಯಾಗಿದೆ' ಎಂದಿದ್ದಾರೆ.

ದಸರಾದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಧನ್ಯವಾದಗಳನ್ನ ಹೇಳುತ್ತೇನೆ. ಅಭಿಮನ್ಯು ಆನೆಯ ಅಭಿಮಾನಿಗಳು ಸಾಕಷ್ಟು ಜನ ಇದ್ದಾರೆ. ಅವರೆಲ್ಲರಿಗೂ ಧನ್ಯವಾದಗಳನ್ನ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ :ಅದ್ಧೂರಿ, ಅಚ್ಚುಕಟ್ಟಾದ ಮೈಸೂರು ದಸರಾ: ಜಿಲ್ಲಾಡಳಿತದ ಶ್ರಮ, ಶಿಸ್ತಿಗೆ ಸಿಎಂ ಅಭಿನಂದನೆ

ABOUT THE AUTHOR

...view details