ಉಡುಪಿ : ಶಿರ್ವ ಮೂಲದ ಯುವಕನೋರ್ವ ತನ್ನ ತಂದೆಯನ್ನು ಅವರ 25 ವರ್ಷಗಳ ಹಳೆಯ ಬೈಕ್ನಲ್ಲಿ ಪ್ರಯಾಗ್ರಾಜ್ಗೆ ಕರೆದುಕೊಂಡು ಹೋಗಿ ಪುಣ್ಯದರ್ಶನ ಮಾಡಿಸಿಕೊಂಡು ಬಂದಿದ್ದಾರೆ. ಕಾಪು ತಾಲೂಕಿನ ಕಟಪಾಡಿಯ ಶಿರ್ವ ಮೂಲದ ಪ್ರಜ್ವಲ್ ಶೆಣೈ (25) ಅವರು ತಮ್ಮ ತಂದೆ ರಾಜೇಂದ್ರ ಶೆಣೈ (52) ಅವರಿಗೆ ಪ್ರಯಾಗ್ರಾಜ್ ಕುಂಭಮೇಳದಲ್ಲಿ ತೀರ್ಥಸ್ನಾನ ಮಾಡಿಸಿಕೊಂಡು ಬಂದವರು.
ಫೆ.6 ರಂದು ಮುಂಜಾನೆ 4 ಗಂಟೆಗೆ ಶಿರ್ವದಿಂದ ಹೊರಟ ತಂದೆ ಮಗ ಯಲ್ಲಾಪುರ, ಹುಬ್ಬಳ್ಳಿ ಮಾರ್ಗವಾಗಿ ವಿಜಯಪುರ, ಸೋಲಾಪುರ, ಲಾತೂರು, ನಾಂದೇಡ್, ನಾಗಪುರ, ಜಬಲ್ಪುರ, ಮಾರ್ಗವಾಗಿ ಬೈಕಲ್ಲಿ 3 ಸಾವಿರ ಕಿ.ಮೀ. ಪ್ರಯಾಣ ಮಾಡಿ ಪ್ರಯಾಗ್ರಾಜ್ ತಲುಪಿದ್ದರು. ಫೆ.10 ರಂದು ತೀರ್ಥಸ್ನಾನ ಮಾಡಿ, ಫೆ.13ರಂದು ಶಿರ್ವಕ್ಕೆ ವಾಪಸಾಗಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಪ್ರಯಾಣದ ನಡುವೆ ರಾತ್ರಿ ಮಾರ್ಗಮಧ್ಯೆ ಪೆಟ್ರೋಲ್ ಬಂಕ್ಗಳಲ್ಲಿ ಟೆಂಟ್ ಹಾಕಿ ರಾತ್ರಿ ಕಳೆದು ಬೆಳಗಿನ ಜಾವ ಮತ್ತೆ ಬೈಕ್ ಪ್ರಯಾಣ ಶುರು ಮಾಡುತ್ತಿದ್ದರು.
ಪ್ರಜ್ವಲ್ ಶೆಣೈ ಅನುಭವದ ಮಾತು : "ನಾವು ಪ್ರಯಾಗ್ರಾಜ್ ತಲುಪುವ ಮೊದಲೇ ಸುಮಾರು 250-300 ಕಿ.ಮೀ. ದೂರದಲ್ಲಿಯೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆದರೂ ಬೈಕ್ ಸಂಚಾರಕ್ಕೆ ಮುಂದೆ ಸಾಗಲು ಅವಕಾಶವಿತ್ತು. ಸ್ನಾನಘಟ್ಟದಲ್ಲಿಯೂ ಯಾವುದೇ ನೂಕುನುಗ್ಗಲು ಇರಲಿಲ್ಲ. ಬ್ಯಾರಿಕೇಡ್ ಅಳವಡಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು. ದಾರಿಯಲ್ಲಿ ಕೂಡ ನಮ್ಮ ಬೈಕನ್ನು ನೋಡಿ ಜನರು ಕೂಡ ನಮ್ಮನ್ನು ನಿಲ್ಲಿಸಿ ಮಾತನಾಡಿಸಿ ಕಳುಹಿಸುತ್ತಿದ್ದರು. ಮಧ್ಯಪ್ರದೇಶದ ಸಿಯೋನಿಯಲ್ಲಿ ಹೋಗುವಾಗ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಂದಾಪುರದವರೊಬ್ಬರು ನಮ್ಮನ್ನು ನೋಡಿ ಬೈಕ್ ನಿಲ್ಲಿಸಿ, ತಮ್ಮಲ್ಲಿದ್ದ ಬೆಲೆಬಾಳುವ ತಂಪು ಕನ್ನಡಕ, ಸಿಹಿತಿಂಡಿ, ತಂಪು ಪಾನೀಯ ಮತ್ತು ಹಣ್ಣು, ಹಂಪಲುಗಳನ್ನು ನೀಡಿದ್ದರು. ಮತ್ತೆ ಅಲ್ಲಿನ ಪೊಲೀಸ್ ಕೂಡ ತುಂಬಾ ಸಹಕಾರ ಕೊಟ್ಟರು" ಎಂದು ತಮ್ಮ ಅನುಭವ ಹಂಚಿಕೊಂಡರು.