ಕರ್ನಾಟಕ

karnataka

ಅಂಗನವಾಡಿ ಪರಿಕಲ್ಪನೆಯನ್ನೇ ನಮ್ಮ ಸರ್ಕಾರ ಬದಲಾಯಿಸಿದೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ - Distribution of appointment letter

By ETV Bharat Karnataka Team

Published : Jul 31, 2024, 7:10 PM IST

Updated : Jul 31, 2024, 10:16 PM IST

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನೇಮಕಗೊಂಡ 43 ಅಂಗನವಾಡಿ ಸಹಾಯಕಿಯರು ಹಾಗೂ 6 ಮಂದಿ ಕಾರ್ಯಕರ್ತೆಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೇಮಕಾತಿ ಪತ್ರ ವಿತರಿಸಿದರು.

Distribution of appointment letter to Anganwadi workers
ಅಂಗನವಾಡಿ ಕಾರ್ಯಕರ್ತೆಯರಿಗೆ ನೇಮಕಾತಿ ಪತ್ರ ವಿತರಣೆ (ETV Bharat)

ಬೆಳಗಾವಿ: "ರಾಜ್ಯದ 250 ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ 18 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಕ್ಕೆ ತಯಾರಿ ಮಾಡಿಕೊಂಡಿದ್ದೇವೆ. ಈ ಪೈಕಿ ಬೆಳಗಾವಿ ಜಿಲ್ಲೆಯಲ್ಲಿ 1 ಸಾವಿರ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸುತ್ತೇವೆ. ಇದರಲ್ಲಿ ಗ್ರಾಮೀಣ ಭಾಗಕ್ಕೂ ಆದ್ಯತೆ ಕೊಡುತ್ತೇವೆ" ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (ETV Bharat)

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನೇಮಕಗೊಂಡ 43 ಅಂಗನವಾಡಿ ಸಹಾಯಕಿಯರು ಹಾಗೂ 6 ಮಂದಿ ಕಾರ್ಯಕರ್ತೆಯರಿಗೆ ಬುಧವಾರ ನೇಮಕಾತಿ ಪತ್ರ ವಿತರಿಸಿ ಮಾತನಾಡಿದರು. "ರಾಜ್ಯ, ದೇಶ ಬೆಳೆದಂತೆ ನಾವು ಅಂಗನವಾಡಿ ಕೇಂದ್ರಗಳನ್ನು ಬದಲಾವಣೆ ಮಾಡುತ್ತಿದ್ದೇವೆ. ಅಂಗನವಾಡಿ ಕೇಂದ್ರಗಳ ಮೂಲಕ ಒಳ್ಳೆಯ ಪ್ರಜೆಗಳನ್ನು ಮಾಡುತ್ತೇವೆ ಎಂಬ ಭಾಷೆ ಕೊಡಬೇಕಿದೆ. ಈಗ ಖಾಸಗಿ ಶಾಲೆಗಳಲ್ಲಿ ನರ್ಸರಿ ಶಾಲೆಗೆ 50 ಸಾವಿರ ಹಣ ಕೇಳುತ್ತಾರೆ. ಅಂಗನವಾಡಿಯಲ್ಲಿ ಒಂದು ರೂಪಾಯಿ ಕೇಳಲ್ಲ, 2017ರಲ್ಲಿ ಕ್ಷೀರ ಭಾಗ್ಯ ತಂದವರು, ಮಕ್ಕಳಿಗೆ ಮೊಟ್ಟೆ ಭಾಗ್ಯ ಕೊಟ್ಟವರು ಮುಖ್ಯಮಂತ್ರಿ ಸಿದ್ದರಾಮಯ್ಯ. ಮೊಟ್ಟೆ, ಚಿಕ್ಕಿಗೆ ಕೇಂದ್ರ ಸರ್ಕಾರ ಹಣ ಕೊಡಲ್ಲ. ರಾಜ್ಯ ಸರ್ಕಾರವೇ ಹಣ ಭರಿಸುತ್ತದೆ.‌ ಇನ್ಮೇಲೆ ಅಂಗನವಾಡಿಗಳನ್ನು ನೋಡುವ ದೃಷ್ಟಿ ಬದಲಾಗಲಿದೆ. ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರ 10 ಕೋಟಿ ರೂಪಾಯಿ ಅನುದಾನವನ್ನು ಸ್ಕಿಲ್ ಡೆವಲಪ್ಮೆಂಟ್​ಗೆ ಮೀಸಲಿಡಲಾಗಿದೆ" ಎಂದರು‌.

"ಬಡವರ, ಹಳ್ಳಿಯ ರೈತರ ಮಕ್ಕಳಿಗೆ ಪೌಷ್ಠಿಕ ಆಹಾರದ ಜೊತೆಯಲ್ಲಿ ಅವರಿಗೆ ಒಳ್ಳೆಯ ಶಿಕ್ಷಣ ಸಿಗಬೇಕು. ಒಳ್ಳೆಯ ಆರೈಕೆ ಸಿಗಬೇಕು ಎನ್ನುವ ಆಶಯದಿಂದ 49 ವರ್ಷಗಳ ಹಿಂದೆ, ಇಂದಿರಾ ಗಾಂಧೀಜಿಯವರು 1974ರಲ್ಲಿ ಕರ್ನಾಟಕದಲ್ಲೇ, ಅದೂ, ನಮ್ಮ ಮೈಸೂರು ಜಿಲ್ಲೆ ಟಿ. ನರಸೀಪುರದಲ್ಲಿ ಅಂಗನವಾಡಿಗಳನ್ನು ಸ್ಥಾಪಿಸಿದರು. ಕರ್ನಾಟಕದಲ್ಲಿ ಅಂಗನವಾಡಿ ಸ್ಥಾಪನೆಗೊಂಡು ಮುಂದಿನ ವರ್ಷಕ್ಕೆ ಐವತ್ತು ವರ್ಷಗಳು ತುಂಬಲಿವೆ. ನಮ್ಮ ಅಂಗನವಾಡಿಗಳು ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ಸಂತಸದ ವಿಷಯ" ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

"ಬಹಳ ವರ್ಷಗಳಿಂದ ಚಾಲ್ತಿಯಲ್ಲಿದ್ದ ನಮ್ಮ ಅಂಗನವಾಡಿ ಹೆಸರನ್ನೂ ಕೂಡ ಬದಲಾಯಿಸಿ, ಈಗ ಇವುಗಳಿಗೆ "ಸರ್ಕಾರೀ ಮಾಂಟೆಸ್ಸರಿ" ಎಂದು ಹೆಸರು ಇಡಲಾಗಿದೆ. ಉತ್ತರ ಕರ್ನಾಟಕ ಜನರಿಗೆ ಗೊತ್ತಾಗಲಿಯೆಂದು ಎಲ್​ಕೆಜಿ, ಯುಕೆಜಿ ಎಂದು ಕರೆಯಲಾಗುತ್ತದೆ. ದಕ್ಷಿಣ ಕರ್ನಾಟಕದ ಮೈಸೂರು - ಕರ್ನಾಟಕ ಭಾಗದ ಕಡೆಗಳಲ್ಲಿ ಸರ್ಕಾರಿ ಮಾಂಟೆಸ್ಸರಿಗಳೆಂದು ಕರೆಯಲಾಗುತ್ತದೆ. ಎಲ್‌ಕೆಜಿ, ಯುಕೆಜಿ ತರಗತಿ ಆರಂಭಗೊಂಡ ಕೇಂದ್ರಗಳಲ್ಲಿ ಕನ್ನಡ, ಇಂಗ್ಲಿಷ್ ಎರಡೂ ಮಾಧ್ಯಮಗಳಲ್ಲಿ ಶಿಕ್ಷಣ ನೀಡುತ್ತೇವೆ. ಶಾಲಾ ಬ್ಯಾಗ್‌, ಸಮವಸ್ತ್ರ, ಪೆನ್ಸಿಲ್‌ ಬಾಕ್ಸ್ ಕೊಡಲಾಗುವುದು. ಜತೆಗೆ, ಮುಂದಿನ ಶಿಕ್ಷಣಕ್ಕೆ ಅನುಕೂಲವಾಗುವಂತೆ ವರ್ಗಾವಣೆ ಪತ್ರ ಸಹ ನೀಡಲಾಗುವುದು" ಎಂದು ಸಚಿವರು ತಿಳಿಸಿದರು‌.

ಅಂಗನವಾಡಿ ಕಾರ್ಯಕರ್ತೆಯರಿಗೆ ನೇಮಕಾತಿ ಪತ್ರ ವಿತರಿಸಿದ ಸಚಿವರಿಗೆ ಸನ್ಮಾನ (ETV Bharat)

"ಅಂಗನವಾಡಿಗಳಲ್ಲಿ ಸರ್ಕಾರದ, ಇಲಾಖೆಯ ಅಶಯದಂತೆ ಕಾರ್ಯಕರ್ತೆಯರು ಕೆಲಸ ಮಾಡಬೇಕು. ತಮ್ಮ ಮಕ್ಕಳಂತೆ ಪೋಷಿಸಿ, ಅವರನ್ನು ಒಳ್ಳೆಯ ಶಿಕ್ಷಣವಂತರಾಗಿ ಬೆಳೆಯಲು ಸಹಕಾರ ನೀಡಬೇಕು. ಈಗ ಅಂಗನವಾಡಿಗಳಲ್ಲಿ ಕೆಲಸ ಮಾಡುವವರಿಗೆ ಪಿಯುಸಿ ಮಾನದಂಡ ಮಾಡಲಾಗಿದೆ. ಆದರೆ, ಈಗಾಗಲೇ ಅಂಗನವಾಡಿಗಳಲ್ಲಿ ಎಂಎ, ಬಿಎ, ಬಿ. ಇಡಿ, ಬಿಇ ಕಲಿತವರು ಕೂಡ ಶಿಕ್ಷಕಿಯರಾಗಿ ಕೆಲಸ ಮಾಡುತ್ತಿದ್ದಾರೆ. ಇದು ಹೆಮ್ಮೆಯ ಸಂಗತಿ" ಎಂದರು.

ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಾಗರಾಜ, ಸಿಡಿಪಿಒ ಸುಮಿತ್ರಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಉಪಸ್ಥಿತರಿದ್ದರು.

ಇದನ್ನೂ ಓದಿ:ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ - Anganwadi Worker post

Last Updated : Jul 31, 2024, 10:16 PM IST

ABOUT THE AUTHOR

...view details