ದಾವಣಗೆರೆ:''ಅಧಿಕಾರಿಗಳು ಜಗಳೂರಿನಲ್ಲಿ ಒಬ್ಬ ಶಾಸಕನಿದ್ದಾನೆ ಎಂಬುದನ್ನೇ ಮರೆತಿದ್ದಾರೆ. ಜಿಲ್ಲಾಧಿಕಾರಿಯಿಂದ ಹಿಡಿದು ಸಿಇಒ ಸೇರಿದಂತೆ ಎಲ್ಲ ಅಧಿಕಾರಿಗಳು ಶಾಸಕರನ್ನು ಭೇಟಿ ಮಾಡಬೇಕು. ಅವರ ಕ್ಷೇತ್ರದ ಕಷ್ಟ, ಸುಖವನ್ನು ಕೇಳಬೇಕು ಎಂಬುದನ್ನು ಮರೆತಿದ್ದಾರೆ. ನಮ್ಮದು ಹಿಂದುಳಿದ ಕ್ಷೇತ್ರವಾಗಿದ್ದರಿಂದ ನಮ್ಮ ಮಾತು ಯಾರು ಕೇಳುವುದಿಲ್ಲ. ಕೆಡಿಪಿ ಸಭೆಗೆ ನಾನು ಭಾಗಿಯಾದರೆ ಅದು ವ್ಯರ್ಥ'' ಎಂದು ಜಗಳೂರು ಶಾಸಕ ಬಿ.ದೇವೆಂದ್ರಪ್ಪ ತೀವ್ರ ಬೇಸರ ವ್ಯಕ್ತಪಡಿಸಿ ಕೆಡಿಪಿ ಸಭೆಯಿಂದ ಹೊರನಡೆಯಲು ಮುಂದಾದ ಘಟನೆ ನಡೆಯಿತು. ಈ ವೇಳೆ ಶಾಸಕ ಕೆ.ಎಸ್. ಬಸವಂತಪ್ಪ, ಹೊನ್ನಾಳಿ ಶಾಸಕ ಶಾಂತನಗೌಡ್ರು ತಡೆದು ಕೂರಿಸಿದರು.
ಇಂದು (ಮಂಗಳವಾರ) ಜಿಲ್ಲಾ ಪಂಚಾಯ್ತಿಯಲ್ಲಿ ಕೆಡಿಪಿ ಸಭೆ ನಡೆಯಿತು. ಈ ಸಭೆ ಆರಂಭದಲ್ಲೇ ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು. ಜಗಳೂರಿನ ಕಾಂಗ್ರೆಸ್ ಶಾಸಕ ಬಿ. ದೇವೇಂದ್ರಪ್ಪ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಅಸಮಾಧಾನಗೊಂಡು, ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ ಎಂದು ಬೇಸರಗೊಂಡು ಹೊರ ನಡೆಯಲು ಮುಂದಾದರು. ಶಾಸಕ ಬಿ.ದೇವೇಂದ್ರಪ್ಪ ಅವರು, ''ಅಧಿಕಾರಿಗಳು ನಮ್ಮಮಾತು ಕೇಳುತ್ತಿಲ್ಲ'' ಎಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲೇ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಬಳಿ ಅಳಲು ತೋಡಿಕೊಂಡರು.
ಶಾಸಕ ಬಿ.ದೇವೆಂದ್ರಪ್ಪ ಆರೋಪವೇನು?:ಸಭೆಯಲ್ಲಿ ಮಾತನಾಡಿದ ಶಾಸಕ ಬಿ.ದೇವೆಂದ್ರಪ್ಪ, ''ಜಿಲ್ಲೆಯ ಉನ್ನತಾಧಿಕಾರಿಗಳಲ್ಲಿ ಒಬ್ಬ ಶಾಸಕ ಕೂಡಾ ಇದ್ದಾನೆ ಎನ್ನುವುದು ಮರೆತು ಬಿಟ್ಟಿದ್ದು, ಸೌಜನ್ಯಕ್ಕಾದರೂ ಭೇಟಿ ಮಾಡುತ್ತಿಲ್ಲ. ನಮ್ಮ ಕ್ಷೇತ್ರದ ಕುರಿತು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನಾನು ಶಾಸಕನಾಗಿ ಒಂದು ವರ್ಷ ಆಗಿದೆ. ನಮ್ಮ ಕ್ಷೇತ್ರದ ಕೆಲಸಗಳು ನಡೆಯುತ್ತಿಲ್ಲ. ಹಿಂದುಳಿದ ಕ್ಷೇತ್ರದ ಬಗ್ಗೆ ಉದಾಸೀನ ಮಾಡುತ್ತಿದ್ದಾರೆ'' ಎಂದು ಬೇಸರ ವ್ಯಕ್ತಪಡಿಸಿದರು.