ಕರ್ನಾಟಕ

karnataka

ಅಧಿಕಾರಿಗಳು ಸೌಜನ್ಯಕ್ಕೂ ತಮ್ಮನ್ನು ಭೇಟಿ ಮಾಡುತ್ತಿಲ್ಲ: ಜಗಳೂರು ಶಾಸಕ ಬಿ.ದೇವೆಂದ್ರಪ್ಪ ಆಕ್ರೋಶ - Jagaluru MLA B Devendrappa outraged

By ETV Bharat Karnataka Team

Published : Jul 30, 2024, 10:53 PM IST

''ಅಧಿಕಾರಿಗಳು ಸೌಜನ್ಯಕ್ಕೂ ತಮ್ಮನ್ನು ಭೇಟಿ ಮಾಡುತ್ತಿಲ್ಲ, ನಮ್ಮ ಕ್ಷೇತ್ರದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ'' ಎಂದು ದಾವಣಗೆರೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲೇ ಜಗಳೂರು ಶಾಸಕ ಬಿ. ದೇವೆಂದ್ರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

MLA B Devendrappa  Davanagere  B Devendrappa outraged
ಶಾಸಕ ಬಿ.ದೇವೆಂದ್ರಪ್ಪ ಎಚ್ಚರಿಕೆ (ETV Bharat)

ಅಧಿಕಾರಿಗಳು ಸೌಜನ್ಯಕ್ಕೂ ತಮ್ಮನ್ನು ಭೇಟಿ ಮಾಡುತ್ತಿಲ್ಲ, ನಮ್ಮ ಕ್ಷೇತ್ರದ ಬಗ್ಗೆ ನಿರ್ಲಕ್ಷ್ಯ: ಜಗಳೂರು ಶಾಸಕ ಬಿ.ದೇವೆಂದ್ರಪ್ಪ ತೀವ್ರ ಆಕ್ರೋಶ (ETV Bharat)

ದಾವಣಗೆರೆ:''ಅಧಿಕಾರಿಗಳು ಜಗಳೂರಿನಲ್ಲಿ ಒಬ್ಬ ಶಾಸಕನಿದ್ದಾನೆ ಎಂಬುದನ್ನೇ ಮರೆತಿದ್ದಾರೆ. ಜಿಲ್ಲಾಧಿಕಾರಿಯಿಂದ ಹಿಡಿದು ಸಿಇಒ ಸೇರಿದಂತೆ ಎಲ್ಲ ಅಧಿಕಾರಿಗಳು ಶಾಸಕರನ್ನು ಭೇಟಿ ಮಾಡಬೇಕು. ಅವರ ಕ್ಷೇತ್ರದ ಕಷ್ಟ, ಸುಖವನ್ನು ಕೇಳಬೇಕು ಎಂಬುದನ್ನು ಮರೆತಿದ್ದಾರೆ. ನಮ್ಮದು ಹಿಂದುಳಿದ ಕ್ಷೇತ್ರವಾಗಿದ್ದರಿಂದ ನಮ್ಮ ಮಾತು ಯಾರು ಕೇಳುವುದಿಲ್ಲ. ಕೆಡಿಪಿ ಸಭೆಗೆ ನಾನು ಭಾಗಿಯಾದರೆ ಅದು ವ್ಯರ್ಥ'' ಎಂದು ಜಗಳೂರು ಶಾಸಕ ಬಿ.‌ದೇವೆಂದ್ರಪ್ಪ ತೀವ್ರ ಬೇಸರ ವ್ಯಕ್ತಪಡಿಸಿ ಕೆಡಿಪಿ ಸಭೆಯಿಂದ ಹೊರನಡೆಯಲು ಮುಂದಾದ ಘಟನೆ ನಡೆಯಿತು. ಈ ವೇಳೆ ಶಾಸಕ ಕೆ.ಎಸ್. ಬಸವಂತಪ್ಪ, ಹೊನ್ನಾಳಿ ಶಾಸಕ ಶಾಂತನಗೌಡ್ರು ತಡೆದು ಕೂರಿಸಿದರು.

ಇಂದು (ಮಂಗಳವಾರ) ಜಿಲ್ಲಾ ಪಂಚಾಯ್ತಿಯಲ್ಲಿ ಕೆಡಿಪಿ ಸಭೆ ನಡೆಯಿತು. ಈ ಸಭೆ ಆರಂಭದಲ್ಲೇ ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು.‌ ಜಗಳೂರಿನ ಕಾಂಗ್ರೆಸ್ ಶಾಸಕ ಬಿ. ದೇವೇಂದ್ರಪ್ಪ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.‌ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಅಸಮಾಧಾನಗೊಂಡು, ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ ಎಂದು ಬೇಸರಗೊಂಡು ಹೊರ ನಡೆಯಲು ಮುಂದಾದರು. ಶಾಸಕ ಬಿ.ದೇವೇಂದ್ರಪ್ಪ ಅವರು, ''ಅಧಿಕಾರಿಗಳು ನಮ್ಮ‌ಮಾತು ಕೇಳುತ್ತಿಲ್ಲ'' ಎಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲೇ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಬಳಿ ಅಳಲು ತೋಡಿಕೊಂಡರು.

ಶಾಸಕ ಬಿ.ದೇವೆಂದ್ರಪ್ಪ ಆರೋಪವೇನು?:ಸಭೆಯಲ್ಲಿ ಮಾತನಾಡಿದ ಶಾಸಕ ಬಿ.‌ದೇವೆಂದ್ರಪ್ಪ, ''ಜಿಲ್ಲೆಯ ಉನ್ನತಾಧಿಕಾರಿಗಳಲ್ಲಿ ಒಬ್ಬ ಶಾಸಕ ಕೂಡಾ ಇದ್ದಾನೆ ಎನ್ನುವುದು ಮರೆತು ಬಿಟ್ಟಿದ್ದು, ಸೌಜನ್ಯಕ್ಕಾದರೂ ಭೇಟಿ ಮಾಡುತ್ತಿಲ್ಲ. ನಮ್ಮ ಕ್ಷೇತ್ರದ ಕುರಿತು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನಾನು ಶಾಸಕನಾಗಿ ಒಂದು ವರ್ಷ ಆಗಿದೆ. ನಮ್ಮ ಕ್ಷೇತ್ರದ ಕೆಲಸಗಳು ನಡೆಯುತ್ತಿಲ್ಲ. ಹಿಂದುಳಿದ ಕ್ಷೇತ್ರದ ಬಗ್ಗೆ ಉದಾಸೀನ ಮಾಡುತ್ತಿದ್ದಾರೆ'' ಎಂದು ಬೇಸರ ವ್ಯಕ್ತಪಡಿಸಿದರು.

ಬಿ.‌ದೇವೆಂದ್ರಪ್ಪ ಮಾತಿಗೆ ಧ್ವನಿ ಗೂಡಿಸಿದ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅವರು, ಅಧಿಕಾರಿಗಳ ನಡೆ ತೀವ್ರವಾಗಿ ಖಂಡಿಸಿದರು. ಮಧ್ಯೆ ಪ್ರವೇಶಿದ ಹೊನ್ನಾಳಿ ಶಾಸಕ ಶಾಂತನಗೌಡ ಅವರು, ಎಲ್ಲವನ್ನು ಸರಿಪಡಿಸುವುದಾಗಿ ಹೇಳಿ ಶಾಸಕ ಬಿ.‌ದೇವೆಂದ್ರಪ್ಪ ಅವರನ್ನು ತಡೆದು ಕೂರಿಸಿದರು. ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಸರಿಪಡಿಸುವೆ ಎಂದು ಭರವಸೆ ನೀಡಿದ ನಂತರ ಬಿ. ದೇವೇಂದ್ರಪ್ಪ ಸಭೆಯಲ್ಲಿ ಭಾಗಿಯಾದರು.

ನೀವು ಏನಾದ್ರು ಆಟ ಆಡಿದರೆ ಜನ ನುಗ್ಗಿಸಿ ಬಿಡ್ತಿನಿ - ಬಿ.ದೇವೆಂದ್ರಪ್ಪ ಎಚ್ಚರಿಕೆ:''ನೀವು ಏನಾದರೂ ಆಟ ಆಡಿದ್ರೇ ಜನ್ರನ್ನು ನುಗ್ಗಿಸಿ ಬಿಡ್ತಿನಿ, ಬಟ್ಟೆ ಬಿಚ್ಚಾಕಿ ನಿಮ್ಮ ಕಚೇರಿ ಬಳಿ ಕೂರುತ್ತೇನೆ ಹುಷಾರ್'' ಎಂದು ಜಗಳೂರು ಕಾಂಗ್ರೆಸ್ ಶಾಸಕ ಬಿ. ದೇವೆಂದ್ರಪ್ಪ ನೂತನ ಎಸಿ ಸಂತೋಷ್ ಅವರಿಗೆ ಅವಾಜ್ ಹಾಕಿದರು. ಸಭೆ ಮುಗಿದ ಬಳಿಕ ಜಗಳೂರು ಶಾಸಕರನ್ನು ಭೇಟಿಯಾಗಿ ದೂರವಾಣಿ ಸಂಖ್ಯೆ ಪಡೆದುಕೊಳ್ಳಲು ಆಗಮಿಸಿದ ನೂತನ ದಾವಣಗೆರೆ ಎಸಿ ಸಂತೋಷ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ:ಕನ್ನಡಿಗರ ರಕ್ಷಣೆಗೆ ಪ್ರಯತ್ನ; ಕಾರ್ಯಾಚರಣೆಗೆ ಇಬ್ಬರು IAS ಅಧಿಕಾರಿಗಳನ್ನು ನಿಯೋಜಿಸಿದ ಸಿಎಂ - Wayanad Land Slide

ABOUT THE AUTHOR

...view details