ಕರ್ನಾಟಕ

karnataka

ETV Bharat / state

ಮೈಸೂರಿನ ಪುಸ್ತಕಪ್ರೇಮಿ ಸಯ್ಯದ್​ ಇಸಾಕ್‌ ಅವರಿಗೆ ಗ್ರಂಥಾಲಯ ನಿರ್ವಹಣೆಗೆ ಹಣಕಾಸು ಮುಗ್ಗಟ್ಟು

ಆರೋಗ್ಯ ಹಾಗೂ ಹಣಕಾಸು ಸಮಸ್ಯೆಯಿಂದ ಗ್ರಂಥಾಲಯ ನಿರ್ವಹಣೆಗೆ ಕಷ್ಟಪಡುತ್ತಿರುವ ಮೈಸೂರಿನ ಪುಸ್ತಕಪ್ರೇಮಿ ಸಯ್ಯದ್​ ಇಸಾಕ್ ಕನ್ನಡಪ್ರೇಮಿಗಳ ಸಹಾಯಹಸ್ತದ ನಿರೀಕ್ಷೆಯಲ್ಲಿದ್ದಾರೆ.

Sayyad Isak's library
ಸಯ್ಯದ್​ ಇಸಾಕ್ ಅವರ ಗ್ರಂಥಾಲಯ (ETV Bharat)

By ETV Bharat Karnataka Team

Published : 6 hours ago

ಮೈಸೂರು: ಕೂಲಿ ಕೆಲಸ ಮಾಡಿಕೊಂಡು, ತಮ್ಮ ಹಾಗೂ ದಾ‌ನಿಗಳ ನೆರವಿನಿಂದ ಗ್ರಂಥಾಲಯ ಸ್ಥಾಪಿಸಿ, ಜನರ ಮನ ಗೆದ್ದ ಸಯ್ಯದ್​ ಇಸಾಕ್ ಅವರಿಗೆ ಈಗ ಗ್ರಂಥಾಲಯ ನಡೆಸಲು ಹಣಕಾಸಿನ ಸಮಸ್ಯೆ ಎದುರಾಗಿದೆ.

ಸತತ 14 ವರ್ಷಗಳ ಕಾಲ ಗ್ರಂಥಾಲಯವನ್ನು ಮುನ್ನಡೆಸಿದ ಸಯ್ಯದ್​ ಇಸಾಕ್ ಈ ಬಾರಿಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನಡೆಸಲಾಗದ ಪರಿಸ್ಥಿತಿಗೆ ಬಂದಿದ್ದಾರೆ. ರಾಜೀವ್ ನಗರದ ಎರಡನೇ ಹಂತದ ಉದ್ಯಾನವನದ ಸಮೀಪ 2011ರ ನವೆಂಬರ್ 1ರಂದು ಸಾರ್ವಜನಿಕ ಗ್ರಂಥಾಲಯ ಸ್ಥಾಪಿಸಿ, ಸುತ್ತಮುತ್ತಲ ನಿವಾಸಿಗಳ ಹಾಗೂ ಮೈಸೂರಿನ ಮನೆಮಾತಾಗಿದ್ದ ಸಯ್ಯದ್ ಇಸಾಕ್ ಅವರಿಗೆ ಹಣಕಾಸಿನ ತೊಂದರೆಯ ಜೊತೆಗೆ ಅನಾರೋಗ್ಯದ ಸಮಸ್ಯೆಯೂ ಎದುರಾಗಿದೆ. ಹಾಗಾಗಿ ತಾವು ನಡೆಸುತ್ತಿರುವ ಗ್ರಂಥಾಲಯಕ್ಕೆ ಯಾರಾದರೂ ಸಹಾಯಹಸ್ತ ಚಾಚಿದರೆ, ಇನ್ನಷ್ಟು ದೂರ ಗ್ರಂಥಾಲಯದ ಸೇವೆಯನ್ನು ವಿಸ್ತರಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಮುಸ್ಲಿಂ ಬಾಹುಳ್ಯವುಳ್ಳ ರಾಜೀವ್‌ನಗರದಲ್ಲಿ ಕನ್ನಡ ಪುಸ್ತಕಪ್ರೇಮಿಯಾಗಿರುವ ಸಯ್ಯದ್ ಇಸಾಕ್ ಸ್ಥಾಪಿಸಿದ ಗ್ರಂಥಾಲಯಕ್ಕೆ ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಪುಸ್ತಕಗಳು ಹಾಗೂ ಪ್ರತಿಕೆಗಳನ್ನು ಓದಲು ಪ್ರತಿನಿತ್ಯ ನೂರಾರು ಮಂದಿ ಬರುತ್ತಾರೆ. ಇಲ್ಲಿನ ಗ್ರಂಥಾಲಯದಿಂದ ಅಕ್ಕಪಕ್ಕದ ನಿವಾಸಿಗಳಿಗೂ ಹಾಗೂ ವಿದ್ಯಾರ್ಥಿಗಳಿಗೂ ತುಂಬ ಅನುಕೂಲವಾಗಿದೆ.

2021ರಲ್ಲಿ ಬೆಂಕಿಗಾಹುತಿ: 2021ರ ಏಪ್ರಿಲ್ 9ರಂದು ಕಿಡಿಗೇಡಿಗಳು ಇಟ್ಟ ಬೆಂಕಿಗೆ ಗ್ರಂಥಾಲಯ ಸಂಪೂರ್ಣ ಸುಟ್ಟು ಕರಲಾಗಿತ್ತು. ದಾನಿಗಳ ನೆರವಿನಿಂದ ಬಂದ 3.45 ಲಕ್ಷ ರೂ., ಇತರೆ ಮೂಲಗಳಿಂದ ಬಂದ 1 ಲಕ್ಷ ರೂ. ನಿಂದ ಮತ್ತೆ ಗ್ರಂಥಾಲಯವನ್ನು ಮರುಸ್ಥಾಪನೆ ಮಾಡಲಾಗಿತ್ತು.

14 ವರ್ಷದಿಂದ ಅಡಚಣೆಗಳ ನಡುವೆ ಯಾವುದೇ ಪರೋಪಕಾರ ಇಲ್ಲದೇ, ಕೂಲಿ ಕೆಲಸ ಮಾಡಿಕೊಂಡು ದಾನಿಗಳ ನೆರವಿನಿಂದ ಗ್ರಂಥಾಲಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಎರಡು ತಿಂಗಳಿನಿಂದ ಸಯ್ಯದ್ ಇಸಾಕ್ ಅನಾರೋಗ್ಯಕ್ಕಿಡಾಗಿದ್ದಾರೆ. ಅಲ್ಲದೇ, ಮೂರು ತಿಂಗಳಿನಿಂದ ಗ್ರಂಥಾಲಯದ ವಿದ್ಯುತ್ ಬಿಲ್ ಕಟ್ಟಲಾಗದೇ, ಹಣಕಾಸಿನ ತೊಂದರೆ ಎದುರಿಸುತ್ತಿದ್ದಾರೆ. ಗ್ರಂಥಾಲಯಕ್ಕೆ ಮೊದಲು ಪ್ರತಿನಿತ್ಯ 19 ಪತ್ರಿಕೆಗಳನ್ನು ತರಿಸುತ್ತಿದ್ದರು. ಆದರೀಗ 4 ಪತ್ರಿಕೆಗಳಿಗೆ ಇಳಿದಿದೆ.

ಗ್ರಂಥಾಲಯ ಚೆನ್ನಾಗಿ ನಡೆಯಲು ಸರಕಾರದ ವತಿಯಿಂದ ನೆರವು ನೀಡುವುದಾಗಿ ಜನಪ್ರತಿನಿಧಿಗಳು ಆಶ್ವಾಸನೆ ನೀಡಿದ್ದರು. ಆದರೆ, ಅವರ ಆಶ್ವಾಸನೆಗಳು ಹಾಗೆಯೇ ಉಳಿದುಕೊಂಡು ಬಿಟ್ಟಿವೆ. ಸಯ್ಯದ್ ಇಸಾಕ್ ಅವರು ಕೂಲಿ ಕೆಲಸಕ್ಕೆ ಹೋದರೆ, ಗ್ರಂಥಾಲಯವನ್ನು ಅವರ ಪತ್ನಿ ನೋಡಿಕೊಳ್ಳುತ್ತಿದ್ದರು. ಅವರ ಪತ್ನಿಗೂ ಅನಾರೋಗ್ಯದ ಸಮಸ್ಯೆ ಉಂಟಾಗಿ ಮೂರು ತಿಂಗಳನಿಂದ ಲೈಬ್ರರಿ ಕಡೆ ಬರುತ್ತಿಲ್ಲ. ಇತ್ತ ಇಸಾಕ್ ಅವರು ಕೆಲಸಕ್ಕೆ ಹೋಗದ ಸ್ಥಿತಿಗೆ ಬಂದಿದ್ದಾರೆ.

ಸಾರ್ವಜನಿಕರ ಅನುಕೂಲಕ್ಕಾಗಿ ಸ್ಥಾಪಿಸಿದ ಗ್ರಂಥಾಲಯವನ್ನು ಮುನ್ನೆಡಸಲು, ದಾನಿಗಳು ನೆರವು ನೀಡಿದರೆ ಕೈಯಲ್ಲಿ ಶಕ್ತಿ ಇರುವವರೆಗೂ ನಡೆಸಬಹುದು ಎನ್ನುತ್ತಾರೆ ಸಯ್ಯದ್ ಇಸಾಕ್.

ಸಹಾಯಹಸ್ತದ ನಿರೀಕ್ಷೆಯಲ್ಲಿರುವ ಇಸಾಕ್​ ಅವರ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ:ಗೃಹಲಕ್ಷ್ಮಿ ಹಣದಿಂದ ಗ್ರಂಥಾಲಯ ನಿರ್ಮಿಸಿದ ಮಹಿಳೆಗೆ ಪುಸ್ತಕ ನೀಡಿ ಶ್ಲಾಘಿಸಿದ ಲಕ್ಷ್ಮೀ ಹೆಬ್ಬಾಳ್ಕರ್

ABOUT THE AUTHOR

...view details