ಮೈಸೂರು:ಮುಡಾದಲ್ಲಿ 50:50 ಅನುಪಾತದಲ್ಲಿ ನೀಡಲಾಗಿರುವ ಸೈಟ್ಗಳನ್ನು ರದ್ದು ಮಾಡಬೇಕು ಎಂದು ಸಿಎಂಗೆ ಮನವಿ ಪತ್ರ ನೀಡಿದ್ದೇನೆ. 1,400ಕ್ಕೂ ಹೆಚ್ಚು 50:50 ಅನುಪಾತದ ಸೈಟ್ಗಳಿವೆ ಎಂಬ ವದಂತಿಗಳು ಓಡಾಡುತ್ತಿವೆ. ಆ ಎಲ್ಲ ಸೈಟ್ಗಳನ್ನು ಮುಡಾ ಆಸ್ತಿ ಎಂದು ಇ.ಸಿ.ಯಲ್ಲಿ ಬರುವ ಹಾಗೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿರುವುದಾಗಿ ಮೈಸೂರಿನ ಕೆ.ಆರ್.ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ ಹೇಳಿದ್ದಾರೆ.
ಸಬ್ ರಿಜಿಸ್ಟರ್ ಕಚೇರಿಯಲ್ಲಿ ಈ ಅನುಪಾತದ ಯಾವುದೇ ಸೈಟ್ ಅನ್ನು ಎರಡನೇ ಸಲ ನೊಂದಣಿ ಮಾಡಿಕೊಳ್ಳಬಾರದು ಎಂದು ಸುತ್ತೋಲೆ ಹೊರಡಿಸಿ ಎಂದು ಮನವಿ ಮಾಡಿದ್ದೇನೆ. ಮುಡಾ ಪ್ರಕರಣಕ್ಕೆ ಸಂಬಂಧಿಸಿದ ಟೆಕ್ನಿಕಲ್ ಕಮಿಟಿ ವರದಿಯನ್ನು ಆದಷ್ಟು ಬೇಗ ಜಾರಿಗೆ ತಂದು ಸಂಬಂಧಪಟ್ಟವರನ್ನು ತನಿಖೆಗೆ ಒಳಪಡಿಸಬೇಕು. ಇಬ್ಬರು ಮುಡಾ ಕಮಿಷನರ್ಗಳನ್ನು ಇನ್ನೂ ಕೂಡ ಉಳಿಸಿಕೊಂಡಿದ್ದಾರೆ, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಈಗಾಗಲೇ ಮುಡಾ ಅಧ್ಯಕ್ಷರ ತಲೆ ದಂಡ ಆಗಿದೆ. ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ರಾಜೀನಾಮೆ ನೀಡಿದ್ದೇನೆ ಎಂದು ಅವರೇ ಹೇಳಿದ್ದಾರೆ. ಅವರಿಗೆ ಬರುವ ಸೂಚನೆ ಮುಡಾದಲ್ಲಿನ ಇಬ್ಬರು ಕಮಿಷನರ್ಗೆ ಏಕೆ ಬರುವುದಿಲ್ಲ ಎಂದು ಪ್ರಶ್ನಿಸಿದರು.
ಸಿಎಂ ಮತ್ತು ನಗರಾಭಿವೃದ್ಧಿ ಸಚಿವರನ್ನು ಆ ಇಬ್ಬರು ಕಮಿಷನರ್ಗಳು ನೀವು ನಮ್ಮ ಹೆಸರು ಹೇಳಿದರೆ ನಾವು ನಿಮ್ಮ ಭಷ್ಟಾಚಾರಗಳನ್ನು ಹೊರತರುತ್ತೇವೆ ಎಂದು ಹೆದರಿಸುತ್ತಿದ್ದಾರೆ ಎನ್ನುವ ವದಂತಿಗಳು ಕೂಡ ಹೇಳಿ ಬರುತ್ತಿವೆ. ಅದಕ್ಕಾಗಿ ಕಮಿಷನರ್ಗಳನ್ನು ಮುಟ್ಟಿಲ್ಲ ಎಂದು ಕಾಣಿಸುತ್ತಿದೆ. ಈ ಎಲ್ಲ ಕಾರಣಗಳಿಂದ ತಕ್ಷಣವೇ ತನಿಖೆ ನಡೆಸಬೇಕು ಎಂದು ಮನವಿ ನೀಡಿದ್ದೇನೆ ಎಂದರು.