ರಾಯಚೂರು: "ಸಿದ್ದರಾಮಯ್ಯ ಅವರು ರಾಜಕೀಯ ಬಿಡಲ್ಲ. 78 ವರ್ಷ ವಯಸ್ಸಾಗುತ್ತಿದೆ ಎನ್ನುವ ಕಾರಣಕ್ಕೆ ರಾಜಕೀಯ ಕೊನೇ ಹಂತ ತಲುಪಿದ್ದೇನೆ ಎಂದು ಹೇಳಿದ್ದಾರೆ ಅಷ್ಟೇ" ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್. ಬೋಸರಾಜು ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಪವರ್ ಶೇರಿಂಗ್ ವಿಚಾರ ಆವತ್ತು ಇಲ್ಲ, ಇವತ್ತೂ ಬಂದಿಲ್ಲ. ಮುಂದಿನ ಚುನಾವಣೆ ಅವರ ನೇತೃತ್ವದಲ್ಲೇ ನಡೆಯುತ್ತದೆ. ಯಾರು ರಾಜಕಾರಣದಲ್ಲಿ ಜನರ ಪ್ರೀತಿ ವಿಶ್ವಾಸ ಹೊಂದಿರುತ್ತಾರೋ, ಪಕ್ಷ, ಜನರ ಅಭಿಪ್ರಾಯದ ಮೇಲೆ ಹಾಗೂ ಸರ್ವೇ ಮೇಲೆ ನಡೆಯುತ್ತದೆ. ಸಿಎಂ ಬದಲಾಗಲ್ಲ, ಎಲ್ಲರೂ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಅಂತಹ ಯಾವುದೇ ಪ್ರಸಂಗ ಬಂದಿಲ್ಲ. ಯಾವುದೇ ಸಮಸ್ಯೆಯಿಲ್ಲ, ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ" ಎಂದರು.
ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆದಿದೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಅವರು, "ಅವರ ಅಧ್ಯಕ್ಷರ ಸ್ಥಾನವನ್ನು ಮೊದಲು ಸರಿ ಮಾಡಿಕೊಳ್ಳಲಿ. ನಾಲಾಯಕ್ ವಿಜಯೇಂದ್ರ ಅಂತ ರಮೇಶ್ ಜಾರಕಿಹೊಳಿ, ಯತ್ನಾಳ್ ಹೇಳುತ್ತಿದ್ದಾರೆ. ಮೊದಲು ತಮ್ಮ ಸಮಸ್ಯೆಗಳನ್ನು ಸರಿಮಾಡಿಕೊಳ್ಳಲಿ. ಸಿಎಂ ಬಗ್ಗೆ, ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಲು ನಾಚಿಕೆ ಆಗಬೇಕು. ಅಧ್ಯಕ್ಷನಾಗಲು ವಿಜಯೇಂದ್ರ ನಾಲಾಯಕ್ ಅಂತ ಅವರ ಪಕ್ಷದವರೇ ಹೇಳುತ್ತಿದ್ದಾರೆ. ಸಿಎಂ ಸ್ಥಾನಕ್ಕೆ ನಮ್ಮ ಪಕ್ಷದಲ್ಲಿ ಯಾವುದೇ ಪೈಪೋಟಿ ನಡೆಯುತ್ತಿಲ್ಲ" ಎಂದು ಹೇಳಿದರು.