ಕರ್ನಾಟಕ

karnataka

ದೊಡ್ಡಬಳ್ಳಾಪುರ: ರೆಸ್ಟೋರೆಂಟ್ ಪರವಾನಗಿ ನವೀಕರಿಸಲು ಲಂಚ ಪಡೆಯುತ್ತಿದ್ದ ಪಿಡಿಓ ಲೋಕಾಯುಕ್ತ ಬಲೆಗೆ - LOKAYUKTA POLICE ARRESTS PDO

By ETV Bharat Karnataka Team

Published : May 8, 2024, 11:51 AM IST

ರೆಸ್ಟೋರೆಂಟ್ ಪರವಾನಗಿ ನವೀಕರಿಸಲು ಪಿಡಿಓ 5 ಲಕ್ಷ ಲಂಚದ ಬೇಡಿಕೆ ಇಟ್ಟು, 3.50 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸ್​ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಪಿಡಿಓ ಲೋಕಾಯುಕ್ತ ಬಲೆಗೆ
ಪಿಡಿಓ ಲೋಕಾಯುಕ್ತ ಬಲೆಗೆ (ETV Bharat)

ದೂರುದಾರ ನರಸಿಂಹಮೂರ್ತಿ ಆರೋಪ (ETV Bharat)

ದೊಡ್ಡಬಳ್ಳಾಪುರ:ರೆಸ್ಟೋರೆಂಟ್ ಪರವಾನಗಿ ನವೀಕರಿಸಲು ಅರಳುಮಲ್ಲಿಗೆ ಗ್ರಾಮ ಪಂಚಾಯತ್ ಪಿಡಿಒ 5 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟು 3.50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಅರಳುಮಲ್ಲಿಗೆ ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ ರೆಸ್ಟೋರೆಂಟ್​ ಜನರಲ್​ ಲೈಸೆನ್ಸ್​​ ಹೊಂದಿರುವ ನರಸಿಂಹಮೂರ್ತಿ ಎಂಬುವವರು ಪರವಾನಗಿ ನವೀಕರಣಕ್ಕೆ ಪಿಡಿಒ ಬಳಿ ಹೋಗಿದ್ದರು. ಪರವಾನಗಿ ನವೀಕರಿಸಿಕೊಡಲು ₹ 5 ಲಕ್ಷ ಲಂಚದ ಹಣಕ್ಕೆ ಪಿಡಿಒ ಬೇಡಿಕೆ ಇಟ್ಟಿದ್ದರು. ಇಬ್ಬರ ನಡುವೆ ಹಣದ ವಿಚಾರಕ್ಕೆ ಮಾತುಕತೆ ನಡೆದು 3.5 ಲಕ್ಷ ಕೊಡುವುದಾಗಿ ಅರ್ಜಿದಾರರಾದ ನರಸಿಂಹಮೂರ್ತಿ ಒಪ್ಪಿಕೊಂಡಿದ್ದರು. ಆದರೆ, ನರಸಿಂಹಮೂರ್ತಿ ಲಂಚದ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಕಳೆದ ಮಂಗಳವಾರ ಪಿಡಿಒ ನಿರಂಜನ್ ಅವರು ದೊಡ್ಡಬಳ್ಳಾಪುರ ತಾಲೂಕು ಪಂಚಾಯತ್ ಆವರಣದಲ್ಲಿರುವ ಉದ್ಯೋಗ ಖಾತ್ರಿ ಯೋಜನೆ ಸಹಾಯಕ‌ ನಿರ್ದೇಶಕರ ಕೊಠಡಿಯಲ್ಲಿ 3.50 ಲಕ್ಷ ರೂಪಾಯಿ ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.

ನಂತರ ಮಾಧ್ಯಮದೊಂದಿಗೆ ಮಾತನಾಡಿದ ದೂರುದಾರರಾದ ನರಸಿಂಹಮೂರ್ತಿ, ನನಗೆ ಹೃದಯ ಶಸ್ತ್ರ ಚಿಕಿತ್ಸೆಯಾಗಿದೆ. ಬಾರ್​ ವ್ಯವಹಾರ ಬಿಟ್ಟರೆ ಬೇರೆ ಉದ್ಯೋಗ ಗೊತ್ತಿಲ್ಲ. ಇದ್ದ ಜಮೀನು ಮಾರಾಟ ಮಾಡಿ ಬಾರ್ ಪರವಾನಗಿ ಪಡೆದಿದ್ದೇನೆ. ಅರಳುಮಲ್ಲಿಗೆ ಪಂಚಾಯತ್ ಪಿಡಿಒ ನನ್ನ ಕೆಲಸ ಮಾಡಿಕೊಡಲು ಕಳೆದ ಎರಡು ವರ್ಷಗಳಿಂದ ಸತಾಯಿಸುತ್ತಿದ್ದಾರೆ. ಕ್ಷೇತ್ರದ ಶಾಸಕರು, ತಾಲೂಕು ಪಂಚಾಯತ್ ಅಧಿಕಾರಿ ಇಒ ಸೇರಿದಂತೆ ಯಾರೇ ಹೇಳಿದರು ಕೆಲಸ ಮಾಡುವುದಿಲ್ಲ ಎಂದು ಆರೋಪಿಸಿದರು.

ಪಿಡಿಒ ನನ್ನ ಬಾರ್ ಪರವಾನಗಿಗೆ ಸಂಬಂದಿಸಿದಂತೆ ಈವರೆಗೆ ವಾಣಿಜ್ಯ ಪೇಪರ್​ ನೀಡಲು ಮೂರು ಲಕ್ಷ, ರೆಸ್ಟೋರೆಂಟ್ ಪರವಾನಗಿಗೆ 2.50 ಲಕ್ಷ ತಗೊಂಡಿದ್ದಾರೆ. ಈಗ ನವೀಕರಣ ಮಾಡಿಕೊಡಲು ಐದು ಲಕ್ಷ ರೂಪಾಯಿ ಕೇಳಿದ್ದರು ಎಂದು ಆರೋಪಿಸಿದ ಅವರು, ಚೌಕಾಸಿ ಮಾಡಿದ್ದಕ್ಕೆ 3.50 ಲಕ್ಷ ಕೊಡಬೇಕು ಎಂದು ಕೇಳಿದ್ದರು. ಈಗ ಲೋಕಾಯುಕ್ತರ ಮೂಲಕ ಹಣ ತಂದುಕೊಟ್ಟಿದ್ದೇನೆ, ಅಧಿಕಾರಿಗಳು ದಾಳಿ ನಡೆಸಿ ಹಣದ ಸಮೇತ ಪಿಡಿಒ ಅವರನ್ನು ಹಿಡಿದುಕೊಂಡಿದ್ದಾರೆ ಎಂದು ತಿಳಿಸಿದರು.

ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಎಸ್ಪಿ ಪವನ್ ನೆಜ್ಜೂರು, ಡಿಎಸ್ಪಿಗಳಾದ ಟಿ.ಸಿ. ವೆಂಕಟೇಶ್, ಗಿರೀಶ್ ರೋಡಕರ್, ಚಂದ್ರಕಾಂತ್, ವೆಂಕಟೇಶ್, ನಂದಕುಮಾರ್, ರಮೇಶ್ ಭಾಗವಹಿಸಿದ್ದರು.

ಇದನ್ನೂ ಓದಿ:ಪ್ರಿಯಕರ ಬೇಕು, ಪೋಷಕರು ಬೇಡ: ಸರ್ಕಾರಿ ವಸತಿ ನಿಲಯ ಸೇರಿದ ಬಾಲಕಿ - Habeas Corpus

ABOUT THE AUTHOR

...view details