ಕರ್ನಾಟಕ

karnataka

ETV Bharat / state

ಪ್ರವಾಸಿಗರ ಕೈಬೀಸಿ ಕರೆಯುತ್ತಿದೆ ಕಿತ್ತೂರು ರಾಣಿ ಚನ್ನಮ್ಮ ಮೃಗಾಲಯ: ಇಲ್ಲಿದೆ ಟೈಗರ್ ಸಫಾರಿ

ಉತ್ತರ ಕರ್ನಾಟಕದ ಮೊದಲ ಟೈಗರ್ ಸಫಾರಿ ಎಂಬ ಖ್ಯಾತಿ ಪಡೆದಿರುವ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

By ETV Bharat Karnataka Team

Published : 4 hours ago

ಕಿತ್ತೂರು ರಾಣಿ ಚನ್ನಮ್ಮ ಮೃಗಾಲಯ
ಕಿತ್ತೂರು ರಾಣಿ ಚನ್ನಮ್ಮ ಮೃಗಾಲಯ (ETV Bharat)

ಬೆಳಗಾವಿ: ಉತ್ತರ ಕರ್ನಾಟಕದ ಜನ ವನ್ಯಜೀವಿಗಳನ್ನು ಕಣ್ತುಂಬಿಕೊಳ್ಳಲು ದೂರದ ಬನ್ನೇರುಘಟ್ಟ, ಮೈಸೂರು, ಶಿವಮೊಗ್ಗ, ಹಂಪಿಗೆ ಹೋಗಬೇಕಿತ್ತು. ಆದರೆ, ಬೆಳಗಾವಿಯ ಭೂತರಾಮನಹಟ್ಟಿಯಲ್ಲಿ ಇರುವ ಕಿರು ಮೃಗಾಲಯ ಪ್ರಾಣಿ-ಪಕ್ಷಿಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಇಲ್ಲಿ ನೀವು ಟೈಗರ್ ಸಫಾರಿ ಎಂಜಾಯ್ ಮಾಡಬಹುದು.

ಬೆಳಗಾವಿಯಿಂದ 15 ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಭೂತರಾಮನಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯ ಪ್ರವಾಸಿಗರ ನೆಚ್ಚಿನ ತಾಣ. ಇದು ಉತ್ತರ ಕರ್ನಾಟಕದ ಮೊದಲ ಟೈಗರ್ ಸಫಾರಿ ಎಂಬ ಖ್ಯಾತಿಗೂ ಪಾತ್ರವಾಗಿದ್ದು, ಕಳೆದ ವರ್ಷದಿಂದ ಟೈಗರ್ ಸಫಾರಿ ಪ್ರಾರಂಭವಾಗಿದೆ. ಜನರಿಂದಲೂ ಒಳ್ಳೆಯ ಸ್ಪಂದನೆ ಸಿಕ್ಕಿದೆ‌.

ಯಾವ್ಯಾವ ಪ್ರಾಣಿಗಳಿವೆ?:ನಿರುಪಮಾ ಮತ್ತು ಕೃಷ್ಣಾ ಎಂಬ 2 ಸಿಂಹಗಳು, ಕನಿಷ್ಕಾ, ಶೌರ್ಯ, ಕೃಷ್ಣಾ ಹೆಸರಿನ 3 ಹುಲಿಗಳು, ಅರ್ಪಿತಾ, ಅರ್ಜುನ, ಅನನ್ಯ ಹೆಸರಿನ 3 ಚಿರತೆಗಳು, ಲಕ್ಷ್ಮಣ, ತೀರ್ಥ ಎಂಬ 2 ಕರಡಿಗಳು ಇಲ್ಲಿವೆ. ಅಲ್ಲದೇ 13 ನರಿ, 16 ಜಿಂಕೆ, 26 ಕೃಷ್ಣಮೃಗ, 4 ಕತ್ತೆಕಿರುಬ, 6 ನವಿಲು, ಮೊಸಳೆ, ಕಡವೆ, ಯಮು, ಗುಲಾಬಿ ಕೊರಳಿನ ಗಿಳಿ, ಕೆಂದಲೆ ಗಿಳಿ ಸೇರಿದಂತೆ 25 ಪ್ರಭೇದಗಳ ಒಟ್ಟು 198 ಪ್ರಾಣಿ–ಪಕ್ಷಿಗಳನ್ನು ಇಲ್ಲಿ ನೋಡಬಹುದು.

ಕಿತ್ತೂರು ರಾಣಿ ಚನ್ನಮ್ಮ ಮೃಗಾಲಯ (ETV Bharat)

125 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಮೃಗಾಲಯವು, ಈ ಹಿಂದೆ ಚುಕ್ಕೆ ಜಿಂಕೆಗಳ ವಾಸಸ್ಥಾನವಾಗಿತ್ತು. ಹಾಗಾಗಿ, ಅದಕ್ಕೆ ಸ್ಥಳೀಯರು 'ಚಿಗರಿ ಮಾಳ' ಎಂದು ಕರೆಯುತ್ತಿದ್ದರು. ಆ ಬಳಿಕ ಇಲ್ಲಿ 1989ರಲ್ಲಿ ನಿಸರ್ಗಧಾಮ ನಿರ್ಮಿಸಲಾಯಿತು. 2018ರಲ್ಲಿ ಕೇಂದ್ರೀಯ ಮೃಗಾಲಯ ಪ್ರಾಧಿಕಾರದಿಂದ ಅನುಮತಿ ಪಡೆದುಕೊಂಡು ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯ ಆರಂಭಿಸಲಾಯಿತು.

ಪ್ರವೇಶ ಶುಲ್ಕ:ಮೃಗಾಲಯ ಪ್ರವೇಶಕ್ಕೆ ವಯಸ್ಕರರಿಗೆ 50 ರೂ, ಮಕ್ಕಳಿಗೆ 30 ರೂ ಟಿಕೆಟ್​ ನಿಗದಿಪಡಿಸಲಾಗಿದೆ. ಮಂಗಳವಾರ ಮೃಗಾಲಯಕ್ಕೆ ರಜೆ ಇರುತ್ತದೆ.‌ ಅದನ್ನು ಹೊರತುಪಡಿಸಿ ವಾರದ ಆರು ದಿನ ಬೆಳಿಗ್ಗೆ 9ರಿಂದ ಸಂಜೆ 5.30ರವರೆಗೆ ಜನರಿಗೆ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ದಾರಿಯುದ್ದಕ್ಕೂ ಪೇವರ್ಸ್ ಅಳವಡಿಸಲಾಗಿದ್ದು, ಹಚ್ಚ ಹಸಿರಿನಿಂದ ಇಡೀ ಮೃಗಾಲಯ ಕಂಗೊಳಿಸುತ್ತಿದೆ. ಇನ್ನು ಎರಡು ಇಲೆಕ್ಟ್ರಿಕ್ ವಾಹನಗಳು ಇಲ್ಲಿದ್ದು, ತಲಾ ಒಬ್ಬರಿಗೆ 75 ರೂ ದರವಿದೆ.

ಟೈಗರ್ ಸಫಾರಿ ಆಕರ್ಷಣೆ:ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದ ಪ್ರಮುಖ ಆಕರ್ಷಣೆ ಎಂದರೆ ಅದು ಟೈಗರ್ ಸಫಾರಿ. 20 ಹೆಕ್ಟೇರ್ ಪ್ರದೇಶದಲ್ಲಿ ಸಫಾರಿ ಮಾಡಬಹುದಾಗಿದೆ. ಎರಡು ವಾಹನಗಳಿದ್ದು, ವೀಕ್ಷಕರು ಯಾವುದೇ ಭೀತಿ ಇಲ್ಲದೇ ಎರಡು ಹುಲಿಗಳನ್ನು ಕಣ್ತುಂಬಿಕೊಳ್ಳಬಹುದು. ಟೈಗರ್ ಸಫಾರಿಗೆ ಪ್ರತ್ಯೇಕ ಶುಲ್ಕ ನಿಗದಿಪಡಿಸಲಾಗಿದ್ದು, ವಯಸ್ಕರರಿಗೆ 40 ರೂ., ಮಕ್ಕಳಿಗೆ 20 ರೂ. ಟೀಕೆಟ್ ಪಡೆಯಬೇಕು. ಮೃಗಾಲಯಕ್ಕೆ ಬರುವ ಹೆಚ್ಚಿನ ಜನರು ಟೈಗರ್ ಸಫಾರಿಗೆ ಅಂತಾನೆ ಬರುವುದು ವಿಶೇಷ.

ಕಿರು ಮೃಗಾಲಯದ ವಲಯ ಅರಣ್ಯ ಅಧಿಕಾರಿ ಪವನ ಕುರನಿಂಗ 'ಈಟಿವಿ ಭಾರತ' ಜೊತೆ ಮಾತನಾಡಿ, ವೀಕ್ಷಕರಿಂದ 2023–24 ರಲ್ಲಿ ನಮಗೆ 1.80 ಕೋಟಿ ರೂ., 2024–25ರಲ್ಲಿ ಈವರೆಗೆ 85 ಲಕ್ಷ ರೂ. ಆದಾಯ ಬಂದಿದೆ. ಇನ್ನು ಕಳೆದ ವರ್ಷ 2.80 ಲಕ್ಷ ಜನರು ಮೃಗಾಲಯಕ್ಕೆ ಭೇಟಿ ನೀಡಿದ್ದರು. ಈ ವರ್ಷ ಇಲ್ಲಿಯವರೆಗೆ 89 ಸಾವಿರ ಜನ ಬಂದಿದ್ದಾರೆ. ಮೃಗಾಲಯದ ಆದಾಯದಿಂದ ಪ್ರಾಣಿ–ಪಕ್ಷಿಗಳ ಆಹಾರ, ಆರೈಕೆ, ಹೊರಗುತ್ತಿಗೆ ಸಿಬ್ಬಂದಿಗೆ ವೇತನ ಪಾವತಿ, ಮೃಗಾಲಯದ ನಿರ್ವಹಣೆ, ಸಂದರ್ಶಕರಿಗೆ ಸೌಕರ್ಯ ಕ‌ಲ್ಪಿಸಲು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

"ಕಿರು ಮೃಗಾಲಯವನ್ನು ಮಧ್ಯಮ ಮೃಗಾಲಯವನ್ನಾಗಿ ಮೇಲ್ದರ್ಜೆಗೇರಿಸಲು ಚಿಂತನೆ ನಡೆಸಿದ್ದೇವೆ. ಪ್ರಾಣಿ ಪಕ್ಷಿಗಳ ಸಂಖ್ಯೆ ಹೆಚ್ಚಿಸಬೇಕಿದೆ. ಅದರ ಜೊತೆಗೆ ಮತ್ತೊಂದು ಟೈಗರ್ ಸಫಾರಿ ಪ್ರದೇಶ ಆರಂಭಿಸುವ ಯೋಜನೆ ಹಾಕಿದ್ದೇವೆ. ಹೆಚ್ಚುವರಿಯಾಗಿ ಮತ್ತೊಂದು ಸಫಾರಿ ವಾಹನದ ಅವಶ್ಯಕತೆಯಿದೆ. ಹೆಚ್ಚು ಮಕ್ಕಳು ಆಗಮಿಸುವುದರಿಂದ ಅವರಿಗೆ ಮಕ್ಕಳ ಆಟಿಕೆ ಮೈದಾನ ನಿರ್ಮಿಸಬೇಕಿದೆ. ಈ ಎಲ್ಲ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಮೃಗಾಲಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ಅತೀ ಹೆಚ್ಚು ಪ್ರವಾಸಿಗರನ್ನು ಸೆಳೆಯಲು ಪ್ರಯತ್ನಿಸುತ್ತೇವೆ" ಎಂದು ವಲಯ ಅರಣ್ಯ ಅಧಿಕಾರಿ ಪವನ ಕುರನಿಂಗ ತಿಳಿಸಿದರು.

ಪ್ರಾಣಿ, ಪಕ್ಷಿಗಳ ದತ್ತು ಪಡೆಯಿರಿ:ವನ್ಯಪ್ರಾಣಿಗಳ ಸಂರಕ್ಷಣೆ ಕುರಿತು ಜನರಲ್ಲೂ ಜಾಗೃತಿ ಮೂಡಿಸುವ ದೃಷ್ಟಿಯಿಂದ ಪ್ರಾಣಿ ದತ್ತು ಸ್ವೀಕಾರ ಯೋಜನೆ ಜಾರಿಗೊಳಿಸಲಾಗಿದೆ. ಸಾರ್ವಜನಿಕರು ಅಥವಾ ಸಂಘ–ಸಂಸ್ಥೆಗಳು ಯಾವುದೇ ಪ್ರಾಣಿ, ಪಕ್ಷಿಯನ್ನು 1 ವರ್ಷದ ಅವಧಿಗೆ ದತ್ತು ಪಡೆಯಲು ಅವಕಾಶವಿದೆ.

ನಾಲ್ಕು ಶ್ರೇಣಿಗಳಡಿ ಪ್ರಾಣಿ–ಪಕ್ಷಿ ದತ್ತು ಪಡೆಯಲು ಅವಕಾಶ ಇದೆ. ವಜ್ರದ ಶ್ರೇಣಿಯಡಿ 2 ಲಕ್ಷ ರೂ. ಪಾವತಿಸಿ, ಒಂದು ವರ್ಷದ ಅವಧಿಗೆ ಹುಲಿ ಮತ್ತು ಸಿಂಹವನ್ನು ದತ್ತು ಪಡೆಯಬಹುದು. ಇನ್ನು ಚಿನ್ನ, ಬೆಳ್ಳಿ ಮತ್ತು ಕಂಚಿನ ಶ್ರೇಣಿಗಳಡಿ 1 ಸಾವಿರದಿಂದ 50 ಸಾವಿರ ರೂ.ವರೆಗೆ ಪಾವತಿಸಿ, ವಿವಿಧ ಪ್ರಾಣಿ–ಪಕ್ಷಿ ದತ್ತು ಪಡೆಯಬಹುದು. ಆಸಕ್ತರು ಖುದ್ದಾಗಿ ಮೃಗಾಲಯಕ್ಕೆ ಭೇಟಿ ಕೊಡಬಹುದು. ವೆಬ್‌ಸೈಟ್‌ https://www.zoosofkarnataka.comಅಥವಾ ಮೊ.ಸಂ. 7411434788 ಸಂಪರ್ಕಿಸಬಹುದು. ಸಾರ್ವಜನಿಕರು ಮತ್ತು ಸಂಘ–ಸಂಸ್ಥೆಯವರು ತಮ್ಮ ಜನ್ಮದಿನ, ವಾರ್ಷಿಕೋತ್ಸವ, ವಿಶೇಷ ಸಂದರ್ಭದ ಸವಿನೆನಪಿಗಾಗಿ ದತ್ತು ಪಡೆಯಬಹುದು. ನಿಯಮಾನುಸಾರ ಅವರಿಗೆ ಪ್ರಮಾಣಪತ್ರ ನೀಡುತ್ತೇವೆ. ಅಲ್ಲದೇ ಮೃಗಾಲಯದಲ್ಲಿ ವಿಶೇಷ ಸೌಕರ್ಯ ನೀಡುತ್ತೇವೆ ಎಂದು ಅಧಿಕಾರಿಗಳು ಕೋರಿದ್ದಾರೆ.

ಪ್ರವಾಸಿಗರಿಗೆ ಹೈವೇ ಕಾಮಗಾರಿ ಕಿರಿಕಿರಿ:ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು, ಮಂದಗತಿ ಕೆಲಸದಿಂದ ಕಿರು ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಕಿರಿಕಿರಿ ಉಂಟಾಗಿದೆ. ಬೇಗನೆ ಕಾಮಗಾರಿ ಪೂರ್ಣಗೊಳಿಸಿ, ಹೆದ್ದಾರಿಯಲ್ಲಿ ಮೃಗಾಲಯಕ್ಕೆ ಬರಲು ಕೆಳಸೇತುವೆ ನಿರ್ಮಿಸಿದರೆ ನಮಗೆ ಅನುಕೂಲ ಆಗುತ್ತದೆ ಎಂಬುದು ಸಾರ್ವಜನಿಕರ ಆಗ್ರಹ.

ವೇದಾ ಸಡೇಕರ್ ಮಾತನಾಡಿ, "ನಾಲ್ಕು ವರ್ಷದ ಹಿಂದೆ ಮೃಗಾಲಯಕ್ಕೆ ಬಂದಿದ್ದೆವು. ಈಗ ತುಂಬಾ ಚೆನ್ನಾಗಿ ಅಭಿವೃದ್ಧಿಪಡಿಸಿದ್ದಾರೆ. ಮೊದಲು ಟೈಗರ್ ಸಫಾರಿ ಇರಲಿಲ್ಲ. ಹಾಗಾಗಿ, ಮಿಸ್ ಮಾಡಿಕೊಳ್ಳಬಾರದು ಅಂತಾ ಮೊದಲು ಟೈಗರ್ ಸಫಾರಿ ಮಾಡಿದೆವು. ಪ್ರಾಣಿ, ಪಕ್ಷಿಗಳನ್ನು ನೋಡಿ ತುಂಬಾ ಖುಷಿಯಾಗುತ್ತಿದೆ. ಕುಟುಂಬಸಮೇತರಾಗಿ ಎಲ್ಲರೂ ಇಲ್ಲಿಗೆ ಬಂದು ಎಂಜಾಯ್ ಮಾಡಬಹುದು" ಎಂದರು.

ಟಿವಿಯಲ್ಲಿ ಪ್ರಾಣಿ, ಪಕ್ಷಿಗಳನ್ನು ನೋಡಿದ್ದೆವು. ಆದರೆ, ಇಂದು ಮೃಗಾಲಯದಲ್ಲಿ ಅತೀ ಸಮೀಪದಿಂದ ಅವುಗಳನ್ನು ನೋಡಿ ತುಂಬಾ ಸಂತೋಷವಾಯಿತು‌. ಮೃಗಾಲಯಕ್ಕೆ ಹೋಗಬೇಕು ಎಂದರೆ ದೂರದ ಮೈಸೂರಿಗೆ ಹೋಗಬೇಕಿತ್ತು" ಎಂದು ವಿದ್ಯಾರ್ಥಿನಿ ಶಿವಾಣಿ ಹವಾಲ್ದಾರ್ ಹೇಳಿದರು.

ಇದನ್ನೂ ಓದಿ:ಕಿತ್ತೂರು ಕೋಟೆ, ಇತಿಹಾಸ ಉಳಿಸಲು ₹58 ಕೋಟಿ ಬಿಡುಗಡೆ: ಸಚಿವ ಕೃಷ್ಣಬೈರೇಗೌಡ

ABOUT THE AUTHOR

...view details