ಬೆಳಗಾವಿ: ಉತ್ತರ ಕರ್ನಾಟಕದ ಜನ ವನ್ಯಜೀವಿಗಳನ್ನು ಕಣ್ತುಂಬಿಕೊಳ್ಳಲು ದೂರದ ಬನ್ನೇರುಘಟ್ಟ, ಮೈಸೂರು, ಶಿವಮೊಗ್ಗ, ಹಂಪಿಗೆ ಹೋಗಬೇಕಿತ್ತು. ಆದರೆ, ಬೆಳಗಾವಿಯ ಭೂತರಾಮನಹಟ್ಟಿಯಲ್ಲಿ ಇರುವ ಕಿರು ಮೃಗಾಲಯ ಪ್ರಾಣಿ-ಪಕ್ಷಿಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಇಲ್ಲಿ ನೀವು ಟೈಗರ್ ಸಫಾರಿ ಎಂಜಾಯ್ ಮಾಡಬಹುದು.
ಬೆಳಗಾವಿಯಿಂದ 15 ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಭೂತರಾಮನಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯ ಪ್ರವಾಸಿಗರ ನೆಚ್ಚಿನ ತಾಣ. ಇದು ಉತ್ತರ ಕರ್ನಾಟಕದ ಮೊದಲ ಟೈಗರ್ ಸಫಾರಿ ಎಂಬ ಖ್ಯಾತಿಗೂ ಪಾತ್ರವಾಗಿದ್ದು, ಕಳೆದ ವರ್ಷದಿಂದ ಟೈಗರ್ ಸಫಾರಿ ಪ್ರಾರಂಭವಾಗಿದೆ. ಜನರಿಂದಲೂ ಒಳ್ಳೆಯ ಸ್ಪಂದನೆ ಸಿಕ್ಕಿದೆ.
ಯಾವ್ಯಾವ ಪ್ರಾಣಿಗಳಿವೆ?:ನಿರುಪಮಾ ಮತ್ತು ಕೃಷ್ಣಾ ಎಂಬ 2 ಸಿಂಹಗಳು, ಕನಿಷ್ಕಾ, ಶೌರ್ಯ, ಕೃಷ್ಣಾ ಹೆಸರಿನ 3 ಹುಲಿಗಳು, ಅರ್ಪಿತಾ, ಅರ್ಜುನ, ಅನನ್ಯ ಹೆಸರಿನ 3 ಚಿರತೆಗಳು, ಲಕ್ಷ್ಮಣ, ತೀರ್ಥ ಎಂಬ 2 ಕರಡಿಗಳು ಇಲ್ಲಿವೆ. ಅಲ್ಲದೇ 13 ನರಿ, 16 ಜಿಂಕೆ, 26 ಕೃಷ್ಣಮೃಗ, 4 ಕತ್ತೆಕಿರುಬ, 6 ನವಿಲು, ಮೊಸಳೆ, ಕಡವೆ, ಯಮು, ಗುಲಾಬಿ ಕೊರಳಿನ ಗಿಳಿ, ಕೆಂದಲೆ ಗಿಳಿ ಸೇರಿದಂತೆ 25 ಪ್ರಭೇದಗಳ ಒಟ್ಟು 198 ಪ್ರಾಣಿ–ಪಕ್ಷಿಗಳನ್ನು ಇಲ್ಲಿ ನೋಡಬಹುದು.
125 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಮೃಗಾಲಯವು, ಈ ಹಿಂದೆ ಚುಕ್ಕೆ ಜಿಂಕೆಗಳ ವಾಸಸ್ಥಾನವಾಗಿತ್ತು. ಹಾಗಾಗಿ, ಅದಕ್ಕೆ ಸ್ಥಳೀಯರು 'ಚಿಗರಿ ಮಾಳ' ಎಂದು ಕರೆಯುತ್ತಿದ್ದರು. ಆ ಬಳಿಕ ಇಲ್ಲಿ 1989ರಲ್ಲಿ ನಿಸರ್ಗಧಾಮ ನಿರ್ಮಿಸಲಾಯಿತು. 2018ರಲ್ಲಿ ಕೇಂದ್ರೀಯ ಮೃಗಾಲಯ ಪ್ರಾಧಿಕಾರದಿಂದ ಅನುಮತಿ ಪಡೆದುಕೊಂಡು ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯ ಆರಂಭಿಸಲಾಯಿತು.
ಪ್ರವೇಶ ಶುಲ್ಕ:ಮೃಗಾಲಯ ಪ್ರವೇಶಕ್ಕೆ ವಯಸ್ಕರರಿಗೆ 50 ರೂ, ಮಕ್ಕಳಿಗೆ 30 ರೂ ಟಿಕೆಟ್ ನಿಗದಿಪಡಿಸಲಾಗಿದೆ. ಮಂಗಳವಾರ ಮೃಗಾಲಯಕ್ಕೆ ರಜೆ ಇರುತ್ತದೆ. ಅದನ್ನು ಹೊರತುಪಡಿಸಿ ವಾರದ ಆರು ದಿನ ಬೆಳಿಗ್ಗೆ 9ರಿಂದ ಸಂಜೆ 5.30ರವರೆಗೆ ಜನರಿಗೆ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ದಾರಿಯುದ್ದಕ್ಕೂ ಪೇವರ್ಸ್ ಅಳವಡಿಸಲಾಗಿದ್ದು, ಹಚ್ಚ ಹಸಿರಿನಿಂದ ಇಡೀ ಮೃಗಾಲಯ ಕಂಗೊಳಿಸುತ್ತಿದೆ. ಇನ್ನು ಎರಡು ಇಲೆಕ್ಟ್ರಿಕ್ ವಾಹನಗಳು ಇಲ್ಲಿದ್ದು, ತಲಾ ಒಬ್ಬರಿಗೆ 75 ರೂ ದರವಿದೆ.
ಟೈಗರ್ ಸಫಾರಿ ಆಕರ್ಷಣೆ:ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದ ಪ್ರಮುಖ ಆಕರ್ಷಣೆ ಎಂದರೆ ಅದು ಟೈಗರ್ ಸಫಾರಿ. 20 ಹೆಕ್ಟೇರ್ ಪ್ರದೇಶದಲ್ಲಿ ಸಫಾರಿ ಮಾಡಬಹುದಾಗಿದೆ. ಎರಡು ವಾಹನಗಳಿದ್ದು, ವೀಕ್ಷಕರು ಯಾವುದೇ ಭೀತಿ ಇಲ್ಲದೇ ಎರಡು ಹುಲಿಗಳನ್ನು ಕಣ್ತುಂಬಿಕೊಳ್ಳಬಹುದು. ಟೈಗರ್ ಸಫಾರಿಗೆ ಪ್ರತ್ಯೇಕ ಶುಲ್ಕ ನಿಗದಿಪಡಿಸಲಾಗಿದ್ದು, ವಯಸ್ಕರರಿಗೆ 40 ರೂ., ಮಕ್ಕಳಿಗೆ 20 ರೂ. ಟೀಕೆಟ್ ಪಡೆಯಬೇಕು. ಮೃಗಾಲಯಕ್ಕೆ ಬರುವ ಹೆಚ್ಚಿನ ಜನರು ಟೈಗರ್ ಸಫಾರಿಗೆ ಅಂತಾನೆ ಬರುವುದು ವಿಶೇಷ.
ಕಿರು ಮೃಗಾಲಯದ ವಲಯ ಅರಣ್ಯ ಅಧಿಕಾರಿ ಪವನ ಕುರನಿಂಗ 'ಈಟಿವಿ ಭಾರತ' ಜೊತೆ ಮಾತನಾಡಿ, ವೀಕ್ಷಕರಿಂದ 2023–24 ರಲ್ಲಿ ನಮಗೆ 1.80 ಕೋಟಿ ರೂ., 2024–25ರಲ್ಲಿ ಈವರೆಗೆ 85 ಲಕ್ಷ ರೂ. ಆದಾಯ ಬಂದಿದೆ. ಇನ್ನು ಕಳೆದ ವರ್ಷ 2.80 ಲಕ್ಷ ಜನರು ಮೃಗಾಲಯಕ್ಕೆ ಭೇಟಿ ನೀಡಿದ್ದರು. ಈ ವರ್ಷ ಇಲ್ಲಿಯವರೆಗೆ 89 ಸಾವಿರ ಜನ ಬಂದಿದ್ದಾರೆ. ಮೃಗಾಲಯದ ಆದಾಯದಿಂದ ಪ್ರಾಣಿ–ಪಕ್ಷಿಗಳ ಆಹಾರ, ಆರೈಕೆ, ಹೊರಗುತ್ತಿಗೆ ಸಿಬ್ಬಂದಿಗೆ ವೇತನ ಪಾವತಿ, ಮೃಗಾಲಯದ ನಿರ್ವಹಣೆ, ಸಂದರ್ಶಕರಿಗೆ ಸೌಕರ್ಯ ಕಲ್ಪಿಸಲು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.