ಕರ್ನಾಟಕ

karnataka

By PTI

Published : Jan 26, 2024, 8:27 AM IST

ETV Bharat / state

ಹನಿಮೂನ್‌ಗೆ ಹೋಗದೆ ಸಮುದ್ರ ತೀರ ಸ್ವಚ್ಛತೆ: ಉಡುಪಿ ದಂಪತಿಗೆ ದೆಹಲಿ ಗಣರಾಜ್ಯೋತ್ಸವಕ್ಕೆ ಆಹ್ವಾನ

ಮದುವೆಯಾದ ಬಳಿಕ ದಂಪತಿ ಹನಿಮೂನ್‌ಗೆ ಹೋಗದೆ ತಮ್ಮೂರಿನ ಸೋಮೇಶ್ವರ ಸಮುದ್ರ ತೀರವನ್ನು ಸ್ವಚ್ಛಗೊಳಿಸಿದ್ದರು. ಉಡುಪಿಯ ಈ ಜೋಡಿಗೆ ಇಂದಿನ ದೆಹಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಲಭಿಸಿದೆ.

Karnataka couple  Mann Ki Baat  REPUBLIC DAY  ಸಮುದ್ರ ತೀರ  ಉಡುಪಿ ದಂಪತಿ  ಗಣರಾಜ್ಯೋತ್ಸವ ಕಾರ್ಯಕ್ರಮ
ಸಮುದ್ರ ತೀರವನ್ನು ಸ್ವಚ್ಛಗೊಳಿಸಿದ್ದ ಉಡುಪಿ ದಂಪತಿ

ಉಡುಪಿ: ಮದುವೆಯಾದ ಬಳಿಕ ಹನಿಮೂನ್‌ಗೆ ಹೋಗುವುದು ನವದಂಪತಿಗಳ ಸಹಜ ಬಯಕೆ. ಆದರೆ ಕಳೆದ ಫೆಬ್ರವರಿಯಲ್ಲಿ ಉಡುಪಿಯ ನವಜೋಡಿಯೊಂದು ಮದುವೆಯಾದ ಬಳಿಕ ಮಾಡಿರುವ ಸಮಾಜಮುಖಿ ಕಾರ್ಯ ಭಾರಿ ಸುದ್ದಿಯಾಗಿತ್ತು. ಈಗ ಇದೇ ಜೋಡಿಗೆ ಕೇಂದ್ರ ಸರ್ಕಾರ ದೆಹಲಿ ಗಣರಾಜ್ಯೋತ್ಸವದಲ್ಲಿ ಹಾಜರಾಗುವಂತೆ ಆಹ್ವಾನ ನೀಡಿದೆ. ಅನುದೀಪ್ ಹೆಗಡೆ ಮತ್ತು ಮಿನುಷಾ ಕಾಂಚನ್ ಎಂಬವರೇ ಈ ದಂಪತಿ.

ಬೈಂದೂರಿನವರಾದ ಇವರು ಮದುವೆಯಾಗಿ ಕೇವಲ ಒಂದು ವಾರವಷ್ಟೇ ಕಳೆದಿತ್ತು. ಮದುವೆಗೂ ಮುನ್ನ 6 ವರ್ಷಗಳ ಲವ್ ಸ್ಟೋರಿ ಇವರದ್ದು. ಕೊರೊನಾದಿಂದಾಗಿ ಹನಿಮೂನ್​ಗೆ ಹೋಗಲು ಸಾಧ್ಯವಾಗಿರಲಿಲ್ಲ. ಹೀಗಿದ್ದರೂ ನೆನಪಿನಲ್ಲಿ ಉಳಿಯುವ ಯಾವುದಾದರೂ ಕೆಲಸ ಮಾಡಲೇ ಬೇಕು ಅಂತ ನಿರ್ಧರಿಸಿದ್ದರು. ಆಗ ಹೊಳೆದಿದ್ದೇ ಮನೆಯಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಸೋಮೇಶ್ವರ ಬೀಚ್.

ಸಮುದ್ರ ತೀರವನ್ನು ಸ್ವಚ್ಛಗೊಳಿಸಿದ್ದ ಉಡುಪಿ ದಂಪತಿ

ಮದುವೆಯಾದ ಹೊಸದರಲ್ಲಿ ಸೋಮೇಶ್ವರ ಬೀಚ್​ಗೆ ಹೋದಾಗ ಸಮುದ್ರ ದಡ ಬಹಳ ಮಲೀನವಾಗಿರುವುದು ಇವರ ಗಮನಕ್ಕೆ ಬಂದಿತ್ತು. ಬೀಚ್​ನಲ್ಲಿ ಚಪ್ಪಲಿ, ಮದ್ಯದ ಬಾಟಲಿ ಮತ್ತು ಔಷಧಗಳ ಬಾಟಲಿಗಳು ಎಲ್ಲೆಂದರಲ್ಲಿ ಬಿದ್ದಿದ್ದವು. ಸಮುದ್ರ ದಡ ಕಸದ ರಾಶಿಯಿಂದ ತುಂಬಿಹೋಗಿತ್ತು. ಅನುದೀಪ್ ತಮ್ಮ ಪತ್ನಿ ಮಿನುಷಾ ಅವರಲ್ಲಿ ಸಮುದ್ರ ತೀರ ಸ್ವಚ್ಛಗೊಳಿಸುವ ಪ್ರಸ್ತಾಪವಿಟ್ಟರು.

ನಮ್ಮ ಪ್ರವಾಸಿ ತಾಣಗಳು ನಮ್ಮ ಸಂಪತ್ತು. ಕಡಲ ತೀರಗಳನ್ನು ಸುಂದರವಾಗಿಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡಾ ತಮ್ಮ ಮಾಸಿಕ ಬಾನುಲಿ ಕಾರ್ಯಕ್ರಮ 'ಮನ್ ಕಿ ಬಾತ್' ಮೂಲಕ ಕರೆ ಕೊಟ್ಟಿದ್ದರು.

ಅನುದೀಪ್ ಹೆಗ್ಡೆ ವೃತ್ತಿಯಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಉದ್ಯೋಗಿ. ಮಿನುಷಾ ಫಾರ್ಮಾಸುಟಿಕಲ್ ಕಂಪನಿ ಉದ್ಯೋಗಿ. ಇಬ್ಬರೂ ಪ್ರಕೃತಿಪ್ರಿಯರೇ. ಮಿನುಷಾ ಪತಿಯ ಅಭಿಪ್ರಾಯಕ್ಕೆ ತಕ್ಷಣ ಒಪ್ಪಿಕೊಂಡಿದ್ದರು. ತಮ್ಮ ಪಾಡಿಗೆ ಬೀಚ್ ಶುಚಿಗೊಳಿಸೋಕೆ ಶುರು ಮಾಡಿದ್ದರು. ನಿಧಾನಕ್ಕೆ ಇವರೊಂದಿಗೆ ಸ್ಥಳೀಯ ಉತ್ಸಾಹಿಗಳೂ ಕೈಜೋಡಿಸಿದರು. 2020ರ ನವೆಂಬರ್ 27ರಿಂದ ಡಿಸೆಂಬರ್ 5ರವರೆಗೆ ಇಡೀ ಸೋಮೇಶ್ವರ ಸಮುದ್ರ ತೀರದಲ್ಲಿರುವ ಕಸವನ್ನೆಲ್ಲ ಸ್ವಚ್ಛಗೊಳಿಸಿದರು. ಸುಮಾರು 6 ಕ್ವಿಂಟಲ್ ಕಸ ಒಟ್ಟುಗೂಡಿಸಿದ್ದರು. ಈ ಸ್ವಚ್ಛತಾ ಕಾರ್ಯ ರಾಷ್ಟ್ರಮಟ್ಟದಲ್ಲೂ ಸುದ್ದಿಯಾಯಿತು. ನವಜೋಡಿಯ ಸಾಮಾಜಿಕ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

ಇವರ ಕೆಲಸ ಪ್ರಧಾನಿ ಮೋದಿ ಅವರ ಗಮನ ಸೆಳೆದಿತ್ತು. 2020ನೇ ವರ್ಷದ ಕೊನೆಯ 'ಮನ್ ಕೀ ಬಾತ್'ನಲ್ಲಿ ಮೋದಿ ದಂಪತಿಯ ಕಾರ್ಯ ಶ್ಲಾಘಿಸಿದ್ದರು. ಯುವ ಪೀಳಿಗೆಗೆ ದಾರಿದೀಪ ಎಂದು ಹೊಗಳಿದ್ದರು. ಈ ವೇಳೆ ಅನುದೀಪ್ ಹೆಗ್ಡೆ, ವಿನುಷಾ ದಂಪತಿ ಮತ್ತೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದರು.

ಸಮುದ್ರ ತೀರವನ್ನು ಸ್ವಚ್ಛಗೊಳಿಸಿದ್ದ ಉಡುಪಿ ದಂಪತಿ

ಇದೀಗ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲೂ ಭಾಗಿಯಾಗುವ ಅವಕಾಶ ಸಿಕ್ಕಿದೆ. ಕೇಂದ್ರ ಸರ್ಕಾರ ಇಬ್ಬರಿಗೂ ಆಮಂತ್ರಣ ನೀಡಿದೆ. ಹಾಗಾಗಿ ದೆಹಲಿ ತಲುಪಿದ್ದಾರೆ. ಈ ಸಂತೋಷವನ್ನು ಇಬ್ಬರು ಹಂಚಿಕೊಂಡಿದ್ದಾರೆ. ಭಾರತ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

"ಪ್ರವಾಸಕ್ಕೆಂದು ಹೋಗುವ ಎಲ್ಲರೂ ಪರಿಸರವನ್ನು ಕಲುಷಿತ ಮಾಡಬೇಡಿ. ಕೊಂಡು ಹೋದ ವಸ್ತುವನ್ನು ಎಲ್ಲೂ ಎಸೆಯದೆ ಹಿಂದಕ್ಕೆ ತನ್ನಿ" ಎನ್ನುವುದು ಈ ದಂಪತಿಯ ಸಾಮಾಜಿಕ ಕಳಕಳಿ.

ಇದನ್ನೂ ಓದಿ:ಸಮುದ್ರ ತೀರದಲ್ಲಿ ನವ ದಂಪತಿ: ಹನಿಮೂನ್​ ಬಿಟ್ಟು ಬೀಚ್ ಸ್ವಚ್ಛಗೊಳಿಸಿದ ಜೋಡಿ..!

ABOUT THE AUTHOR

...view details