ಬೆಂಗಳೂರು/ಧಾರವಾಡ:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ (ಮುಡಾ) ನಿವೇಶನ ಹಂಚಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ತನ್ನ ತೀರ್ಪನ್ನು ಕಾಯ್ದಿರಿಸಿದೆ.
ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ)ಗೆ ವಹಿಸಬೇಕು ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಆದೇಶವನ್ನು ಕಾಯ್ದಿರಿಸಿತು.
ಸ್ನೇಹಮಯಿ ಕೃಷ್ಣ ಪರವಾಗಿ ವಾದ ಮಂಡಿಸಿದ ಸುಪ್ರೀಂಕೋರ್ಟ್ನ ಹಿರಿಯ ವಕೀಲರ ಮಣೀಂದ್ರ್ ಸಿಂಗ್, ''ಪ್ರಕರಣದಲ್ಲಿ ಸರ್ಕಾರದಲ್ಲಿರುವ ಹಿರಿಯ ವ್ಯಕ್ತಿಗಳು ಆರೋಪಿಯಾಗಿರುವುದರಿಂದ ರಾಜ್ಯ ಸರ್ಕಾರದ ಅಧೀನದ ಸಂಸ್ಥೆ ವಿಚಾರಣೆ ನಡೆಸಿದರೂ ಸತ್ಯಾಂಶ ಹೊರಬರುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ, ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಕೋರಿದರು.
ನಮ್ಮ ಕಕ್ಷಿದಾರರು ಇಂತಹದ್ದೇ ಏಜೆನ್ಸಿಗೆ ತನಿಖೆ ವಹಿಸಬೇಕು ಎಂದು ಆಯ್ಕೆ ಮಾಡಿಕೊಂಡಿಲ್ಲ. ಸಿಬಿಐ ಇಲ್ಲವೇ ಇತರ ಯಾವುದೇ ಸ್ವತಂತ್ರ ತನಿಖೆಗೆ ಕೋರುತ್ತಿದ್ದೇವೆ. ಸರ್ಕಾರದ ಸಚಿವಾಲಯವೇ ಮುಖ್ಯಮಂತ್ರಿಗಳನ್ನು ಸಮರ್ಥನೆ ಮಾಡಿಕೊಳ್ಳಲು ನಿಂತಿತ್ತು. ಅಧಿಕಾರಿಗಳು ಇದನ್ನೇ ಅನುಸರಿಸಿದ್ದಾರೆ. ಹೀಗಾಗಿ ಕೆಲವು ಅಂಶಗಳು ಸ್ವಾತಂತ್ರ್ಯ ತನಿಖೆ ಅಗತ್ಯವವಿದೆ ಎಂಬ ಅಗತ್ಯವನ್ನು ನಿರ್ಮಾಣ ಮಾಡಿದೆ. ಅದು ಸಿಬಿಐ ನಿಂದ ತನಿಖೆ ನಡೆಸಿದರೆ ಮಾತ್ರ ಪಾರದರ್ಶಕವಾಗಲಿದೆ. ಹಗರಣದಲ್ಲಿ ಮುಖ್ಯಮಂತ್ರಿಗಳು, ಮತ್ತವರ ಕುಟುಂಬದ ಸದಸ್ಯರು ಭಾಗಿಯಾಗಿರುವುದರಿಂದ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕಾಗಿದೆ ಎಂದು ಅವರು ಪೀಠಕ್ಕೆ ವಿವರಿಸಿದರು