ಕರ್ನಾಟಕ

karnataka

By ETV Bharat Karnataka Team

Published : 17 hours ago

ETV Bharat / state

ಪ್ರಜ್ವಲ್ ರೇವಣ್ಣ ಜಾಮೀನು, ನಿರೀಕ್ಷಣಾ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್ - Prajwal Revanna

ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿದ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.

prajwal revanna
ಪ್ರಜ್ವಲ್ ರೇವಣ್ಣ, ಹೈಕೋರ್ಟ್ (ETV Bharat)

ಬೆಂಗಳೂರು: ಮನೆ ಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ. ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರ್ಜಿದಾರರು ಸಲ್ಲಿಸಿರುವ ಜಾಮೀನು ಅರ್ಜಿ ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳ ತೀರ್ಪು ಒಟ್ಟಾಗಿ ಪ್ರಕಟಿಸುವುದಾಗಿ ತಿಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಪ್ರಭುಲಿಂಗ ನಾವದಗಿ, ''ಅತ್ಯಾಚಾರ ನಡೆದ ಆರೋಪ 5 ವರ್ಷಗಳ ಹಿಂದೆ ನಡೆದಿರುವುದಾಗಿದೆ. ಅತ್ಯಾಚಾರ ನಡೆದಿದೆ ಎಂಬುದಾಗಿ ಆರೋಪಿಸಿದ್ದರೂ, ಅವರ ಮನೆಯಲ್ಲಿಯೇ ಕೆಲಸ ಮಾಡಿಕೊಂಡು ಉಳಿದುಕೊಂಡಿದ್ದರು'' ಎಂದು ಪೀಠಕ್ಕೆ ತಿಳಿಸಿದರು.

ಸರ್ಕಾರದ ಪರ ವಕೀಲರ ವಾದವೇನು?: ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರೋ.ರವಿವರ್ಮ ಕುಮಾರ್, ''ಘಟನೆ ಭಯಾನಕವಾಗಿದೆ. ಅತ್ಯಾಚಾರಕ್ಕೊಳಗಾದ ಮಹಿಳೆಗೆ ಅರ್ಜಿದಾರ ಆರೋಪಿ ಘಟನೆ ಸಂಬಂಧ ಎಲ್ಲಿಯೂ ಚರ್ಚೆ ನಡೆಸಿದಲ್ಲಿ ಮತ್ತು ಇತರರಿಗೆ ಮಾಹಿತಿ ನೀಡಿದಲ್ಲಿ ವಿಡಿಯೋವನ್ನು ಸಂತ್ರಸ್ತೆಯ ಮಗನಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೇ, ಘಟನೆ ನಡೆದ ಸಂದರ್ಭದಲ್ಲಿ ಕಿರಿಯ ಮಗಳಿಗೆ ಮದುವೆ ಆಗಿರಲಿಲ್ಲ. ಹಿರಿಯ ಪುತ್ರಿಗೆ ಮಾತ್ರ ಮದುವೆಯಾಗಿತ್ತು. ಅವರ ಭವಿಷ್ಯಕ್ಕೆ ಸಮಸ್ಯೆ ಆಗಲಿದೆ ಎಂಬ ಕಾರಣದಿಂದ ದೂರು ನೀಡಿರಲ್ಲ. ಇದೀಗ ಎಲ್ಲರೂ ಅವರೊಂದಿಗೆ ಇದ್ದಾರೆ. ಹೀಗಾಗಿ, ದೂರು ದಾಖಲಿಸುವುದಕ್ಕೆ ವಿಳಂಬವಾಗಿದೆ'' ಎಂದು ವಿವರಿಸಿದರು.

''ಘಟನೆ ಸಂಬಂಧಿಸಿದಂತೆ ದೂರು ದಾಖಲಿಸುವುದಕ್ಕೂ ಒಂದು ವರ್ಷ ಮುನ್ನ ಅರ್ಜಿದಾರರು ನಿರ್ಬಂಧಕಾಜ್ಞೆ ಆದೇಶವನ್ನು ಪಡೆದುಕೊಂಡಿದ್ದರು. ಲೋಕಸಭಾ ಚುನಾವಣೆಗೂ ಮುನ್ನ ಮತ್ತು ಚುನಾವಣೆ ನಡೆದ ಬಳಿಕ ಸಂತ್ರಸ್ತೆಯನ್ನು ಅಪಹರಣ ಮಾಡಲಾಗಿತ್ತು. ಈ ಸಂಬಂಧ ಎಲ್ಲ ಮಾಹಿತಿ ಇದ್ದಕಾರಣ ಪ್ರತಿಬಂಧಕಾಜ್ಞೆ ಪಡೆದುಕೊಂಡಿದ್ದು, ಮಾಧ್ಯಮಗಳಲ್ಲಿ ಪ್ರಸಾರಕ್ಕೆ ತಡೆ ಪಡೆದುಕೊಂಡಿದ್ದರು. ಆರೋಪಿಗಳ ಕುಟುಂಬ ರಾಜಕೀಯ ಮತ್ತು ಆರ್ಥಿಕವಾಗಿ ಅತ್ಯಂತ ಪ್ರಬಲವಾಗಿದ್ದಾರೆ, ಅತ್ಯಾಚಾರ ಪ್ರಕರಣಗಳು ನಡೆಯಲಿದ್ದು, ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆಯಿದೆ'' ಎಂದು ವಾದ ಮಂಡಿಸಿದರು.

''ಘಟನೆ ಸಂಬಂಧ ವಿಧಿ ವಿಜ್ಞಾನ ಪ್ರಯೋಗಾಲಯ ನೀಡಿರುವ ವರದಿಯಲ್ಲಿ ಅರ್ಜಿದಾರರ ಧ್ವನಿ ದೃಢವಾಗಿದೆ. ವರದಿಯಲ್ಲಿನ ಅಂಶಗಳನ್ನು ಓದುವುದಕ್ಕೂ ಕಷ್ಟವಾಗಲಿದೆ. ಸಂತ್ರಸ್ತೆಯ ನೋವು, ಗೋಳು ದಾಖಲಾಗಿದೆ. ಈ ಎಲ್ಲ ಅಂಶಗಳನ್ನು ಪರಿಶೀಲಿಸಿದ ಬಳಿಕವೂ ಒಪ್ಪಿತ ಲೈಂಗಿಕ ಕ್ರಿಯೆ ಎಂದರೆ ಹೇಗೆ?'' ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಗುತ್ತಿಗೆ ನೌಕರರ ಒಪ್ಪಂದ ಅಂತಿಮಗೊಳಿಸುವ ಮುನ್ನ ಅಹವಾಲು ಸ್ವೀಕರಿಸಬೇಕು: ಹೈಕೋರ್ಟ್ - HAL Case

''ಜೊತೆಗೆ, ಸಂತ್ರಸ್ತೆ ಮಹಿಳೆ ಅರ್ಜಿದಾರರ ವಯಸ್ಸಿಗಿಂತಲೂ ಎರಡುಪಟ್ಟು ದೊಡ್ಡವರಾಗಿದ್ದಾರೆ. ಅಷ್ಟಾದರೂ, ಪ್ರಜ್ವಲ್ ಅವರ ಪಾದಗಳನ್ನು ಹಿಡಿದುಕೊಂಡು ಬೇಡಿಕೊಂಡಿದ್ದಾಳೆ. ಆದರೂ, ಅರ್ಜಿದಾರರ ನಿಯಂತ್ರಣದಲ್ಲಿಯೇ ಉಳಿಯಬೇಕಾಗಿತ್ತು'' ಎಂದು ವಿವರಿಸಿದರು.

''ಘಟನೆ ಬೆಳಕಿಗೆ ಬರುತ್ತಿದಂತೆ ವಿದೇಶಕ್ಕೆ ತೆರಳಿದ್ದ ಅರ್ಜಿದಾರ ಪ್ರಜ್ವಲ್ 34 ದಿನಗಳ ಕಾಲ ಹೊರಗಿದ್ದು, ಬಳಿಕ ದೇಶಕ್ಕೆ ಹಿಂದಿರುಗಿದ್ದು ಏಕೆ?'' ಎಂದು ಪ್ರಭುಲಿಂಗ ನಾವದಗಿ ಪ್ರಶ್ನಿಸಿದರು.

ಆಗ ಅರ್ಜಿದಾರರ ಪರ ವಕೀಲರು, ''ಕೆಲವು ಆಶ್ಲೀಲ ವಿಡಿಯೋಗಳು ಹರಿದಾಡುತ್ತಿದ್ದವು. ಇದೇ ಕಾರಣದಿಂದ ನ್ಯಾಯಾಲಯದಿಂದ ನಿರ್ಬಂಧಕಾಜ್ಞೆ ಆದೇಶ ಪಡೆದುಕೊಂಡಿದ್ದರು'' ಎಂದು ತಿಳಿಸಿದರು.

ಇದೇ ವೇಳೆ ಸಂತ್ರಸ್ತೆ ಪರ ವಕೀಲರು, ''ಪ್ರಜ್ವಲ್ ರೇವಣ್ಣಗೆ ಜಾಮೀನು ನೀಡಬಾರದು'' ನ್ಯಾಯಾಲಯಕ್ಕೆ ಮನವಿ ಮಾಡಿದರು. ವಾದ ಆಲಿಸಿದ ಪೀಠ, ''ಎಲ್ಲ ಅರ್ಜಿಗಳ ತೀರ್ಪನ್ನು ಪ್ರತ್ಯೇಕವಾಗಿ ಒಂದೇ ದಿನ ಪ್ರಕಟಿಸಲಾಗುವುದು'' ಎಂದು ತಿಳಿಸಿತು.

ಇದನ್ನೂ ಓದಿ:ಮಂಗಳೂರು: ಕಾಲಿಯ ರಫೀಕ್ ಕೊಲೆ ಪ್ರಕರಣ, ನಾಲ್ವರು ಆರೋಪಿಗಳು ಖುಲಾಸೆ - Court Judgement

ABOUT THE AUTHOR

...view details