ಕರ್ನಾಟಕ

karnataka

ಪೋಕ್ಸೋ ಪ್ರಕರಣದಲ್ಲಿ ಬಿಎಸ್​​ವೈಗೆ ಖುದ್ದು ಹಾಜರಾತಿಯಿಂದ ಹೈಕೋರ್ಟ್ ವಿನಾಯತಿ - High Court

By ETV Bharat Karnataka Team

Published : Jul 12, 2024, 3:57 PM IST

Updated : Jul 12, 2024, 7:45 PM IST

ಪೋಕ್ಸೋ ಪ್ರಕರಣ ಸಂಬಂಧ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ವಿಚಾರಣಾಧೀನ ನ್ಯಾಯಾಲಯ ಜು.15 ರಂದು ಖುದ್ದು ಹಾಜರಾತಿಯಿಂದ ಹೈಕೋರ್ಟ್ ವಿನಾಯಿತಿ ನೀಡಿ‌ ಆದೇಶಿಸಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)

ಬೆಂಗಳೂರು:ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ ಪೋಕ್ಸೋ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಚಾರಣಾಧೀನ ನ್ಯಾಯಾಲಯ ಜು.15 ರಂದು ಖುದ್ದು ಹಾಜರಾತಿಯಿಂದ ಹೈಕೋರ್ಟ್ ವಿನಾಯಿತಿ ನೀಡಿ‌ ಆದೇಶಿಸಿದೆ. ತಮ್ಮ ವಿರುದ್ಧದ ಪೋಕ್ಸೋ ಪ್ರಕರಣ ರದ್ದುಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ವಿಚಾರಣೆ ವೇಳೆ ಹಾಜರಿದ್ದ ಹೆಚ್ಚುವರಿ ಎಸ್​ಪಿಪಿ ಬಿ.ಎನ್.ಜಗದೀಶ್, ಅರ್ಜಿಯ ಸಂಬಂಧ ಅಡ್ವೊಕೇಟ್ ಜನರಲ್ ವಾದ ಮಂಡಿಸಲಿದ್ದಾರೆ. ಆದರೆ, ಪ್ರಸ್ತುತ ಅವರು ರಾಜ್ಯದಲ್ಲಿ ಇಲ್ಲ. ಹೀಗಾಗಿ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಆಕ್ಷೇಪಿಸಿದ ಯಡಿಯೂರಪ್ಪ ಪರ ವಕೀಲರು, ವಿಚಾರಣಾ ನ್ಯಾಯಾಲಯ ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಆದ್ದರಿಂದ ಇಂದೇ ವಿಚಾರಣೆ ನಡೆಸಿ ಸೂಕ್ತ ಆದೇಶ ನೀಡಬೇಕು ಎಂದು ಕೋರಿದರು. ಇದನ್ನು ತಳ್ಳಿಹಾಕಿದ ಪೀಠ, ಮುಂದಿನ ವಿಚಾರಣೆಗೆ ಖುದ್ದು ಹಾಜರಿಯಿಂದ ವಿನಾಯಿತಿ ನೀಡಿ ಆದೇಶಿಸಿತು.

ಆನಂತರ ಸಂತ್ರಸ್ತೆಯ ತಾಯಿಯಾದ ದೂರುದಾರೆಯು ಸಾವನ್ನಪ್ಪಿರುವುದರಿಂದ ಯಾರನ್ನು ಪ್ರತಿವಾದಿಯನ್ನಾಗಿಸಬೇಕು ಎಂಬ ವಿಚಾರ ನ್ಯಾಯಾಲಯದ ಜಿಜ್ಞಾಸೆಗೆ ಒಳಪಟ್ಟಿತು. ಸಂತ್ರಸ್ತೆಯನ್ನೇ ಪ್ರತಿವಾದಿಯಾಗಿ ಮಾಡಬಹುದು ಎಂದು ಹೆಚ್ಚುವರಿ ಎಸ್​ಪಿಪಿ ಜಗದೀಶ್ ಹೇಳಿದರು. ಆಕೆ ಅಪ್ರಾಪ್ತೆಯಾಗಿರುವುದರಿಂದ ಹಾಗೆ ಮಾಡಲಾಗದು ಎಂಬ ತೀರ್ಮಾನಕ್ಕೆ ನ್ಯಾಯಾಲಯ ಬಂದಿತು.

ಸಂತ್ರಸ್ತೆ ತಂದೆ ಬದುಕಿರುವುದರಿಂದ ಅವರನ್ನೇ ಪ್ರತಿವಾದಿಯನ್ನಾಗಿಸಬಹುದು ಎಂದು ಬಿಎಸ್​​​ವೈ ಪರ ಹಿರಿಯ ವಕೀಲ ಸಿ ವಿ ನಾಗೇಶ್ ಸಲಹೆ ನೀಡಿದರು. ಆಗ ಸಂತ್ರಸ್ತೆಯ ಸಹೋದರನ ಪರವಾಗಿ ಹಾಜರಾಗಿದ್ದ ವಕೀಲ ಎಸ್ ಬಾಲನ್ ಅವರು, ತಂದೆಯ ಜೊತೆ ವಿವಾದವಿದೆ. ಹೀಗಾಗಿ, ಸಹೋದರನ ಮೂಲಕ ಅರ್ಜಿ ಸಲ್ಲಿಸಲಾಗಿದೆ. ಸಹೋದರನನ್ನೇ ಪ್ರತಿವಾದಿಯನ್ನಾಗಿಸಬಹುದು ಎಂದರು. ಇದಕ್ಕೆ ಆಕ್ಷೇಪಿಸಿದ ನಾಗೇಶ್ ಅವರು ಸಹೋದರನನ್ನು ಗಾರ್ಡಿಯನ್ ಆಗಿ ಪರಿಗಣಿಸಲು ಅವಕಾಶವಿಲ್ಲ ಎಂದರು. ಇದಕ್ಕೆ ಪೀಠವೂ ಸಹಮತ ವ್ಯಕ್ತಪಡಿಸಿತು. ಅಂತಿಮವಾಗಿ ಸಹೋದರನನ್ನು ಗಾರ್ಡಿಯನ್ ಆಗಿ ಪರಿಗಣಿಸಿ ಪ್ರತಿವಾದಿಯನ್ನಾಗಿಸಬಹುದೇ ಎಂಬುದರ ಕುರಿತು ಅಧ್ಯಯನ ನಡೆಸಿ, ಮುಂದಿನ ವಿಚಾರಣೆಯಲ್ಲಿ ವಾದಿಸುವಂತೆ ತಿಳಿಸಿ ವಿಚಾರಣೆ ಮುಂದೂಡಿತು.

ಅಲ್ಲದೆ, ಸದಾಶಿವನಗರ ಠಾಣೆಯಲ್ಲಿ ದಾಖಲಾಗಿರುವ ಪೋಕ್ಸೋ ಪ್ರಕರಣ ರದ್ದುಪಡಿಸುವಂತೆ ಹಾಗೂ ಈ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳು ಹಾಗೂ ಇದೇ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಅರುಣ ವೈ.ಎಂ ಅವರು ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು.

ಇದನ್ನೂ ಓದಿ:ಮೂಡಾ ಹಗರಣ ಸಿಬಿಐಗೆ ವಹಿಸಲು ಕೋರಿ ಮುಖ್ಯನ್ಯಾಯಮೂರ್ತಿಗೆ ಪತ್ರ ಬರೆದ ಶಾಸಕ ಯತ್ನಾಳ್ - MUDA Scam

Last Updated : Jul 12, 2024, 7:45 PM IST

ABOUT THE AUTHOR

...view details