ಕರ್ನಾಟಕ

karnataka

ಹೆಚ್.ಡಿ. ಕುಮಾರಸ್ವಾಮಿಗೆ ದೊರೆತ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ: ರಾಜ್ಯದ ನಿರೀಕ್ಷೆಗಳೇನು? - HD Kumaraswamy

By ETV Bharat Karnataka Team

Published : Jun 11, 2024, 12:34 PM IST

ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ದೊರೆತಿರುವ ಹಿನ್ನೆಲೆ ರಾಜ್ಯದ ನಿರೀಕ್ಷೆಗಳೇನು ಎಂಬುದನ್ನು ತಿಳಿಯೋಣ ಬನ್ನಿ.

Heavy Industry and Steel Department  HD Kumaraswamy  Bengaluru
ಬೃಹತ್ ಕೈಗಾರಿಕೆ ಹಾಗೂ ಉಕ್ಕು ಇಲಖೆಯ ನೂತನ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಉಕ್ಕು ಸಚಿವಾಲಯದ ಅಧಿಕಾರಿ ಅಭಿನಂದನೆ ಸಲ್ಲಿಸಿದರು. (ETV Bharat)

ಬೆಂಗಳೂರು: ಕೃಷಿ ಖಾತೆ ಮೇಲೆ ಒಲವು ತೋರಿಸಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಿಕ್ಕಿದೆ. ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅನುಭವ ಇರುವ ಕುಮಾರಸ್ವಾಮಿ ಅವರಿಗೆ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಎಂತಹ ಮಹತ್ವದ ಸ್ಥಾನ ದೊರಕಿದೆ.

ಇನ್ನು, ಈ ಖಾತೆ ಸಿಕ್ಕಿರುವುದರಿಂದ ಸಹಜವಾಗಿಯೇ ಕರ್ನಾಟಕ ಉದ್ಯಮ ಕ್ಷೇತ್ರದ ಕನಸುಗಳು ಚಿಗುರಿವೆ. ರಾಜ್ಯಕ್ಕೆ ಬೃಹತ್‌ ಉದ್ಯಮವನ್ನು ಹಾಗೂ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವಲ್ಲಿ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರು ಪ್ರಮುಖ ಪಾತ್ರ ವಹಿಸಬಹುದು.

ಉಕ್ಕು ಸಚಿವಾಲಯದ ಅಧಿಕಾರಿ ನೂತನ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿದರು (ETV Bharat)

ಇದೇ ರೀತಿ ನೆರೆ ರಾಜ್ಯಗಳಿಗೆ ಕೈಗಾರಿಕೋದ್ಯಮಿಗಳ ವಲಸೆ ತಡೆಯುವ ನಿಟ್ಟಿನಲ್ಲೂ ಅನುಕೂಲವಾಗಬಹುದೆಂಬ ನಿರೀಕ್ಷೆ ಇದೆ. ಇದರ ಜೊತೆಗೆ ಉಕ್ಕು ಖಾತೆಯನ್ನೂ ಹೊಂದಿರುವುದರಿಂದ ರಾಜ್ಯದ ಭದ್ರಾವತಿಯ ವಿಐಎಸ್‌ಎಲ್‌ ಕಾರ್ಖಾನೆ ಪುನಃಶ್ಚೇತನದ ಆಸೆಗೆ ಮತ್ತೆ ಚಿಗುರೊಡೆದಿದೆ. ಎಂಪಿಎಂ ಕಾರ್ಖಾನೆ ಮತ್ತು ಎನ್‌ಜಿಇಎಫ್ ಕಾರ್ಖಾನೆಗಳೂ ಸಹ ಮರುಜೀವ ಪಡೆದುಕೊಳ್ಳುವ ಆಶಾಭಾವನೆ ಇದೆ. ಖಾತೆ ಹಂಚಿಕೆ ಬೆನ್ನಲ್ಲೇ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಇಲಾಖೆಯ ಅಧಿಕಾರಿಗಳ ಜೊತೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಸಮಾಲೋಚನೆ ನಡೆಸಿದ್ದಾರೆ.

ಇಲಾಖೆಗಳ ಅಧಿಕಾರಿಗಳ ಜೊತೆ ನಿನ್ನೆ ಸಂಜೆ ದೆಹಲಿಯಲ್ಲಿರುವ ಕರ್ನಾಟಕ ಭವನದಲ್ಲಿ ಚರ್ಚೆ ನಡೆಸಿದ ನೂತನ ಸಚಿವರು, ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಬೃಹತ್ ಕೈಗಾರಿಕೆ ಹಾಗೂ ಉಕ್ಕು ಇಲಾಖೆಯ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.

ಇಲಾಖೆಗಳ ಕುರಿತು ತಮ್ಮ ಕನಸುಗಳನ್ನು ಹಂಚಿಕೊಂಡ ಸಚಿವರು, ತಾವು ಕರ್ನಾಟಕದ ಸಿಎಂ ಆಗಿದ್ದಾಗ ಕೈಗಾರಿಕಾ ವಲಯಯಲ್ಲಿ ತಂದ ಸುಧಾರಣೆಗಳ ಬಗ್ಗೆ ಅಧಿಕಾರಿಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಮೊದಲ ಸಭೆಯಲ್ಲಿಯೇ ಕೂಲಂಕಷವಾಗಿ ಮಾಹಿತಿ ಪಡೆದುಕೊಂಡ ಕುಮಾರಸ್ವಾಮಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಕನಸುಗಳನ್ನು ಈಡೇರಿಸುವ ಬದ್ಧತೆ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರು.

ಬೃಹತ್ ಕೈಗಾರಿಕೆ ಹಾಗೂ ಉಕ್ಕು ಇಲಖೆಯ ನೂತನ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಉಕ್ಕು ಸಚಿವಾಲಯದ ಅಧಿಕಾರಿ ಅಭಿನಂದನೆ ಸಲ್ಲಿಸಿದರು. (ETV Bharat)

ಹೆಚ್​ಡಿ ಕುಮಾರಸ್ವಾಮಿ ಗುರಿ:ಯಾವುದೇ ಉದ್ದೇಶಕ್ಕೆ ಬಳಕೆಯಾಗದೆ ವ್ಯರ್ಥವಾಗಿ ಉಳಿದಿರುವ ಗಣಿ ಭೂಮಿ, ದೇಶದ ಉದ್ದಗಲಕ್ಕೂ ಉತ್ಪಾದನೆ ಹೆಚ್ಚಿಸಿ ಹೆಚ್ಚೆಚ್ಚು ಉದ್ಯೋಗ ಕಲ್ಪಿಸುವುದು ತಮ್ಮ ಗುರಿ ಎಂದು ಅಧಿಕಾರಿಗಳಿಗೆ ತಿಳಿಸಿದ ಹೆಚ್ ಡಿ ಕುಮಾರಸ್ವಾಮಿ ಅವರು, 15 ದಿನಗಳ ಒಳಗಾಗಿ ನೀಲನಕ್ಷೆ ಸಿದ್ಧಪಡಿಸುವ ಬಗ್ಗೆ ಹೇಳಿದರು.

ಇನ್ನು ಉಕ್ಕು ಇಲಾಖೆಯ ಬಗ್ಗೆ ಉಕ್ಕು ಸಚಿವಾಲಯದ ಕಾರ್ಯದರ್ಶಿ ನಾಗೇಂದ್ರನಾಥ ಸಿನ್ಹಾ ಮಾಹಿತಿ ನೀಡಿದರು. ಸಭೆಯಲ್ಲಿದ್ದ ಕೋಲಾರ ಜೆಡಿಎಸ್ ಸಂಸದ ಮಲ್ಲೇಶ್ ಬಾಬು, ಕೆಜಿಎಫ್ ಗಣಿ ಪ್ರದೇಶದಲ್ಲಿ 12,000 ಎಕರೆ ಭೂಮಿಯನ್ನು ಕೈಗಾರಿಕೆ ಅಭಿವೃದ್ಧಿಗೆ ಬಳಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇಂದು ಸಂಜೆ ಕುಮಾರಸ್ವಾಮಿ ಅವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ತಮ್ಮ ಮೇಲೆ ವಿಶ್ವಾಸವಿಟ್ಟು ಮಹತ್ವದ ಖಾತೆ ನೀಡಿರುವ ಪ್ರಧಾನಿ ಮೋದಿ ಅವರಿಗೆ ಕುಮಾರಸ್ವಾಮಿ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.

''ದೇಶದ ಅಭಿವೃದ್ಧಿ ಇದರಲ್ಲಿ ಅಡಗಿದೆ. ಉತ್ಪಾದನಾ ಕ್ಷೇತ್ರದಲ್ಲಿ ಬಹಳ ನಿರೀಕ್ಷೆಗಳಿವೆ. ಹೊಸ ಬದಲಾವಣೆ ತರಲು ಪ್ರಯತ್ನ ಮಾಡುತ್ತೇನೆ. ಇದೊಂದು ದೊಡ್ಡ ಇಲಾಖೆ. ಯುವಕರ ಉದ್ಯೋಗ, ದೇಶದ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಮುಂದಿನ 15 ದಿನಗಳಲ್ಲಿ ಇಲಾಖೆ ಕುರಿತು ವಿಷನ್ ಡಾಕ್ಯುಮೆಂಟ್ ಮಾಡಲಿದ್ದೇನೆ'' ಎಂದು ಹೆಚ್.ಡಿ. ಕುಮಾರಸ್ವಾಮಿ ಮಾಹಿತಿ ಹಂಚಿಕೊಂಡಿದ್ದಾರೆ.

''ಕೈಗಾರಿಕೋದ್ಯಮಿಗಳು ಸೇರಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಕರ್ನಾಟಕಕ್ಕೆ ಒಳ್ಳೆಯ ದಿನಗಳು ಪ್ರಾರಂಭವಾಗಿವೆ'' ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ:ಲೋಕಸಭೆ ಚುನಾವಣೆ ಸೋಲಿನ ಪರಾಮರ್ಶೆಗೆ ಮುಂದಾದ ರಾಜ್ಯ ಕಾಂಗ್ರೆಸ್; ಸೋಲಿನ ವರದಿ ನೀಡಲು ಸಜ್ಜಾದ ಕೈ ನಾಯಕರು! - Congress Review of Defeat

ABOUT THE AUTHOR

...view details