ಕರ್ನಾಟಕ

karnataka

By ETV Bharat Karnataka Team

Published : Jan 24, 2024, 8:13 AM IST

ETV Bharat / state

ಅಪಘಾತದಲ್ಲಿ ಮೃತಪಟ್ಟ ಚಾಲಕ ಪರವಾನಗಿ ಹೊಂದಿಲ್ಲದ ವೇಳೆ ಪಾವತಿ & ವಸೂಲಾತಿ ನೀತಿ ಬಳಸಿ: ಹೈಕೋರ್ಟ್‌

ಅಪಘಾತದಲ್ಲಿ ಚಾಲಕ ಮೃತಪಟ್ಟು ಆತನಲ್ಲಿ ಚಾಲನಾ ಪರವಾನಗಿ ಇರುವುದು ಸಾಬೀತಾಗದೇ ಇದ್ದಲ್ಲಿ ವಿಮಾ ಕಂಪನಿ ಮೊದಲು ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡಿ ವಾಹನ ಮಾಲೀಕರಿಂದ ಹಣ ವಸೂಲಿ ಮಾಡಬೇಕು ಎಂದು ಹೈಕೋರ್ಟ್​ ತಿಳಿಸಿದೆ.

ಹೈಕೋರ್ಟ್​
ಹೈಕೋರ್ಟ್​

ಬೆಂಗಳೂರು:ರಸ್ತೆ ಅಪಘಾತದಲ್ಲಿ ವಾಹನ ಚಾಲಕ ಮೃತಪಟ್ಟ ಪ್ರಕರಣದಲ್ಲಿ ಘಟನೆಯ ವೇಳೆ ಆತ ಚಾಲನಾ ಪರವಾನಗಿ ಹೊಂದಿರುವುದು ಸಾಬೀತಾಗದ ಸಂದರ್ಭದಲ್ಲಿ 'ಪಾವತಿ ಮತ್ತು ವಸೂಲಾತಿ'ನೀತಿಯ ಅನುಸಾರ ವಿಮಾ ಕಂಪನಿ ಸಂತ್ರಸ್ತರಿಗೆ ಪರಿಹಾರ ಪಾವತಿಸಿ ನಂತರ ವಾಹನ ಮಾಲೀಕರಿಂದ ವಸೂಲಿ ಮಾಡಬೇಕು ಎಂದು ಹೈಕೋರ್ಟ್​ ಆದೇಶಿಸಿದೆ.

ರಸ್ತೆ ಅಘಾತದಲ್ಲಿ ಮೃತಪಟ್ಟ ಲಾರಿ ಚಾಲಕನಿಗೆ ಪರಿಹಾರ ಪಾವತಿಯ ಹೊಣೆಯನ್ನು ತನಗೆ ಹೊರಿಸಿದ ಚಿತ್ರದುರ್ಗದ ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕರ ಪರಿಹಾರ ಆಯುಕ್ತರ ಆದೇಶ ಪ್ರಶ್ನಿಸಿ ವಿಮಾ ಕಂಪನಿಯೊಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರ ಪೀಠ ಈ ಆದೇಶ ಮಾಡಿತು.

ಮೃತರ ಚಾಲನಾ ಪರವಾನಗಿ ಅಪಘಾತ ಸಂಭವಿಸಿದ ಸ್ಥಳದಲ್ಲಿ ಪತ್ತೆಯಾಗಿಲ್ಲ. ಚಾಲಕ ಅಧಿಕೃತ ಚಾಲನಾ ಪರವಾನಗಿ ಹೊಂದಿರುವ ಬಗ್ಗೆ ಯಾವುದೇ ಸಾಕ್ಷ್ಯ ಒದಗಿಸಿಲ್ಲ. ಚಾಲನಾ ಪರವಾನಗಿ ಇಲ್ಲದೆಯೇ ಲಾರಿ ಚಲಾಯಿಸಲು ಚಾಲಕನಿಗೆ ಅನುಮತಿಸಿರುವುದು ಮಾಲೀಕನ ತಪ್ಪು. ಹಾಗಾಗಿ, ಪ್ರಕರಣದ ಸಂತ್ರಸ್ತರಿಗೆ ಪರಿಹಾರ ಪಾವತಿಸುವ ಹೊಣೆ ಲಾರಿ ಮಾಲೀಕನ ಮೇಲಿರುತ್ತದೆ ಎಂದು ವಿಮಾ ಕಂಪನಿ ಪರ ವಕೀಲರು ವಾದ ಮಂಡಿಸಿದ್ದರು.

ಪ್ರಸ್ತುತ ಪ್ರಕರಣದಲ್ಲಿ ಲಾರಿ ಮಾಲೀಕ ಮತ್ತು ಮೃತ ಚಾಲಕನ ನಡುವೆ ಉದ್ಯೋಗದಾತ-ಉದ್ಯೋಗಿ ಸಂಬಂಧವಿರುವುದು ದೃಢಪಟ್ಟಿದೆ. ಮೃತ ಚಾಲನಾ ಪರವಾನಗಿ ಹೊಂದಿದ್ದ ಎಂಬುದಾಗಿ ಆತನ ಕುಟುಂಬದ ಸದಸ್ಯರು ಹೇಳುತ್ತಾರೆ. ಆದರೆ, ಅದಕ್ಕೆ ಯಾವುದೇ ಪುರಾವೆ ಒದಗಿಸಿಲ್ಲ. ಮೃತರು ಚಾಲನಾ ಪರವಾನಗಿ ಹೊಂದಿರುವುದು ಸಾಬೀತಾಗದ ವೇಳೆ ಪಾವತಿ ಮತ್ತು ವಸೂಲಾತಿ ನೀತಿಯನ್ನು ಅನ್ವಯಿಸಬಹುದು. ಅದರಂತೆ ಪರಿಹಾರ ಮೊತ್ತವನ್ನು ಮೊದಲು ಲಾರಿಗೆ ವಿಮೆ ಸೌಲಭ್ಯ ಕಲ್ಪಿಸಿದ್ದ ಕಂಪನಿ ಪಾವತಿಸಬೇಕು. ನಂತರ ಆ ಮೊತ್ತವನ್ನು ಲಾರಿ ಮಾಲೀಕನಿಂದ ವಸೂಲಿ ಮಾಡಬೇಕು ಎಂದು ಕೋರ್ಟ್ ತಿಳಿಸಿದೆ.

ಪ್ರಕರಣದ ಹಿನ್ನೆಲೆ:ಎಸ್.ಎಂ.ನೂರುದ್ದೀನ್ ಒಡೆತನದ ಲಾರಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಫೌಸ್, 2008ರಲ್ಲಿ ಚಿತ್ರದುರ್ಗದ ಅಡಕಮಾರನಹಳ್ಳಿ ಬಳಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯ ಮೃತನ ಕುಟುಂಬದವರಿಗೆ ವಾರ್ಷಿಕ ಶೇ.12 ರಷ್ಟು ಬಡ್ಡಿದರಲ್ಲಿ 4,23,580 ರು. ಪರಿಹಾರ ಪಾವತಿಸುವಂತೆ ವಿಮಾ ಕಂಪನಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ವಿಮಾ ಕಂಪೆನಿ ಹೈಕೋರ್ಟ್ ಮೆಟ್ಟಿಲೇರಿತ್ತು. ಅಲ್ಲದೆ, ಘಟನೆ ವೇಳೆ ಮೃತಪಟ್ಟ ಚಾಲಕ ಚಾಲನಾ ಪರವಾನಿಗೆ ಹೊಂದಿರುವ ಸಂಬಂಧ ಸಾಕ್ಷಿಗಳಿಲ್ಲ. ಆದ್ದರಿಂದ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ತಮ್ಮ ಅರ್ಜಿಯಲ್ಲಿ ಕೋರಿದ್ದರು.

ಇದನ್ನೂ ಓದಿ:29 ವಾರಗಳ ಭ್ರೂಣದ ಗರ್ಭಪಾತಕ್ಕೆ ನೀಡಿದ್ದ ಅನುಮತಿ ಹಿಂಪಡೆದ ಹೈಕೋರ್ಟ್

ABOUT THE AUTHOR

...view details