ಕರ್ನಾಟಕ

karnataka

ಒಂದೇ 1 ಎಕರೆ ಜಮೀನಿನಲ್ಲಿ 20 ಟನ್ ಅನಾನಸ್; ಬರಗಾಲದಲ್ಲೂ ಬಂಗಾರದ ಬೆಳೆ, ಹಾವೇರಿ ರೈತನ ಸಂಪಾದನೆ ಎಷ್ಟು ಗೊತ್ತಾ? - successful pineapple crop

By ETV Bharat Karnataka Team

Published : Apr 10, 2024, 11:57 AM IST

Updated : Apr 10, 2024, 2:52 PM IST

ಬರಗಾಲದಲ್ಲೂ ಹಾವೇರಿ ಜಿಲ್ಲೆಯಲ್ಲಿ ರೈತನೊಬ್ಬ ಅನನಾಸ್​ ಬೆಳೆದು ಯಶಸ್ವಿ ಕೃಷಿಕನಾಗಿದ್ದಾನೆ.

ಅನನಾಸ್​
ಅನನಾಸ್​

ಅನನಾಸ್​ ಬೆಳೆದು ಯಶಸ್ವಿ ಕೃಷಿಕನಾದ ರೈತ

ಹಾವೇರಿ:ಬರಗಾಲದಲ್ಲಿ ರೈತನೊಬ್ಬ ಬಂಗಾರದಂತಹ ಬೆಳೆ ಬೆಳೆದಿದ್ದಾನೆ. ಹೌದು, ಹಾವೇರಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ರೈತನೊಬ್ಬ ಅನಾನಸ್ ಬೆಳೆದಿದ್ದು, ಕೃಷಿ ಇಲಾಖೆ ಇವರ ಸಾಧನೆಗೆ ರೈತ ಪ್ರಶಸ್ತಿ ನೀಡಿ 25 ಸಾವಿರ ರೂಪಾಯಿ ಸಹಾಯದನವನ್ನೂ ನೀಡಿದೆ. ಅಲ್ಲದೇ ರಾಜ್ಯಮಟ್ಟದ ಪ್ರಶಸ್ತಿಗೆ ಈ ರೈತನ ಹೆಸರನ್ನು ಶಿಪಾರಸು ಕೂಡಾ ಮಾಡಿದೆ.

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಸಿದ್ದಾಪುರ ಗ್ರಾಮದ ಮಲ್ಲಿಕಾರ್ಜುನ ಹನುಮಂತಪ್ಪ ಕಚವಿ ಎಂಬ ರೈತ ತಮ್ಮ ಒಂದು ಎಕರೆ ಅಡಕೆ ತೋಟದಲ್ಲಿ ಮಿಶ್ರ ಬೆಳೆಯಾಗಿ ಅನಾನಸ್ ಬೆಳೆದಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಹವಾಗುಣ ಮೊದಲಿನಿಂದಲೂ ಅನಾನಸ್‌ಗೆ ಹೇಳಿ ಮಾಡಿಸಿದಂತಿಲ್ಲ. ಇಲ್ಲಿ ಅನಾನಸ್ ಬೆಳೆಯುವುದು ಕಷ್ಟಸಾಧ್ಯ ಎಂದು ಹಲವು ರೈತರು ಕೈಚೆಲ್ಲಿದ್ದರು. ಆದರೆ, ಮಲ್ಲಿಕಾರ್ಜುನ ಶಿವಮೊಗ್ಗ ಜಿಲ್ಲೆಯ ಉತ್ತರಕನ್ನಡ ಜಿಲ್ಲೆ ರೈತರು ಅಡಕೆ ಬೆಳೆಯಲ್ಲಿ ಅನಾನಸ್ ಬೆಳೆ ಬೆಳೆದಿರುವ ಕುರಿತಂತೆ ನೋಡಿದ್ದರು. ಈ ಬಗ್ಗೆ ಮಾಹಿತಿ ಪಡೆದು ತಾವು ಸಹ ತಮ್ಮ ಜಮೀನಿನಲ್ಲಿ ಅನಾನಸ್ ಬೆಳೆಯಲು ಮುಂದಾದರು.

ಅನನಾಸ್​

ಕೃಷಿ ತಜ್ಞರು, ಸಂಬಂಧಿಕರು, ಗ್ರಾಮಸ್ಥರು ಅನಾನಸ್​​ ಬೆಳೆಯದಂತೆ ಸಲಹೆ ನೀಡಿದರು. ಅಲ್ಲದೇ ನಮ್ಮ ಬಿಸಿ ವಾತಾವರಣಕ್ಕೆ ಅನಾನಸ್ ಬರುವುದಿಲ್ಲ ಎಂದವರೇ ಅಧಿಕ ಜನ. ಇದನ್ನೇ ಸವಾಲಾಗಿ ತೆಗೆದುಕೊಂಡ ಮಲ್ಲಿಕಾರ್ಜುನ್​ ಒಂದು ಎಕರೆ ಅಡಕೆ ತೋಟದಲ್ಲಿ ಅನಾನಸ್​ ಬೆಳೆಯಲು ಮುಂದಾದರು. ಅನಾನಸ್ 18 ತಿಂಗಳ ಬೆಳೆ. ಆದರೆ, ಬರಗಾಲ ಆವರಿಸಿದಾಗ ಮಲ್ಲಿಕಾರ್ಜುನ್​ಗೆ ಆತಂಕ ತಂದಿತ್ತು. ಎದೆಗುಂದದೆ ತಮಗೆ ಇರುವ ಕೊಳವೆ ಬಾವಿಗಳ ನೀರನ್ನು ಸಮರ್ಪಕವಾಗಿ ಬಳಸಿ ಅಡಕೆ ತೋಟದಲ್ಲಿ ಅನಾನಸ್ ಬೆಳೆದರು. ಇವರ ಪರಿಶ್ರಮಕ್ಕೆ ಇದೀಗ ಒಂದು ಎಕರೆ ಅಡಕೆ ತೋಟದಲ್ಲಿ ಅನಾನಸ್ ಬೆಳೆದು ನಿಂತಿದೆ.

ಮಲೆನಾಡ ರೈತರೇ ಅಚ್ಚರಿ ಪಡುವಂತಹ ಬೆಳೆ:ಸ್ವತಃ ಮಲೆನಾಡಿನ ಜನರೇ ಇವರ ಅನಾನಸ್​​ ಬೆಳೆ ನೋಡಿ ಅಚ್ಚರಿ ಪಟ್ಟಿದ್ದಾರೆ. ಹಾವೇರಿ ಜಿಲ್ಲೆಗಿಂತ ಐದು ಡಿಗ್ರಿ 10 ಡಿಗ್ರಿ ಉಷ್ಣಾಂಶ ಕಡಿಮೆ ಇರುವ ಪ್ರದೇಶದಲ್ಲಿಯೇಈ ರೀತಿ ಇಳುವರಿ ಬರುವುದಿಲ್ಲ. ಅಂತಹದರಲ್ಲಿ ನೀನು ಉತೃಷ್ಟವಾಗಿ ಅನಾನಸ್​ ಬೆಳೆದಿದ್ದೀಯಾ ಎಂದು ಬೇರೆ ಜಿಲ್ಲೆಯ ರೈತರು ಶಹಬ್ಬಾಸಗಿರಿ ಕೂಡಾ ಕೊಟ್ಟಿದ್ದಾರೆ. ಮಲ್ಲಿಕಾರ್ಜುನ್ ಒಂದು ಎಕರೆ ಅಡಕೆ ತೋಟದಲ್ಲಿ ಅನಾನಸ್ ಬೆಳೆಯಲು ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾರೆ. ಇದೀಗ ಒಂದು ಎಕರೆಯಲ್ಲಿ ಸುಮಾರು 20 ಟನ್ ಅನಾನಸ್ ಬೆಳೆದು ನಿಂತಿದೆ.

ಅನನಾಸ್​

ಸದ್ಯ ಅನಾನಸ್ ಒಂದು ಕೆಜಿಗೆ 21 ರೂಪಾಯಿ ದರ ಇದೆ. ಈ ರೀತಿ 20 ಟನ್‌ಗೆ ನನಗೆ 4 ಲಕ್ಷ 20 ಸಾವಿರ ರೂಪಾಯಿ ಆದಾಯ ಬರುತ್ತದೆ. ಅದರಲ್ಲಿ 1 ಲಕ್ಷ ರೂಪಾಯಿ ತೆಗೆದರೆ ಮೂರು ಲಕ್ಷ ರೂಪಾಯಿ ನಿವ್ವಳ ಆದಾಯವೇ ಎನ್ನುತ್ತಿದ್ದಾರೆ ಮಲ್ಲಿಕಾರ್ಜುನ್. ಒಂದು ಎಕರೆಯಲ್ಲಿ 12 ಸಾವಿರ ಅನಾನಸ್​ ಗಿಡಗಳು, 36 ಸಾವಿರ ಸಸಿಗಳು ಹುಟ್ಟುತ್ತವೆ. ಒಂದೊಂದು ಸಸಿ ಸದ್ಯ 5 ರೂಪಾಯಿ ದರದಲ್ಲಿ ಮಾರಾಟವಾಗುತ್ತವೆ. ಇದರಿಂದಲೇ ನಾನು ಅನಾನಸ್ ಬೆಳೆಗೆ ಮಾಡಿದ ಖರ್ಚು ತೆಗೆಯಬಹುದು.

ಇವರ ಸಾಧನೆಗೆ ಸಾವಯುವ ಕೃಷಿ ತಜ್ಞ ಗಂಗಯ್ಯ ಕುಲಕರ್ಣಿ ಸಲಹೆ ಮಾರ್ಗದರ್ಶನ ಸಹ ಕಾರಣವಾಗಿದೆ. ಬೆಳೆಯಲ್ಲಿ ನೀರಿನ ಅಂಶ ಬರಗಾಲದಲ್ಲಿ ಸಹ ಉಷ್ಣಾಂಶ ನಿರ್ವಹಣೆ ಮಾಡಿದ ಪರಿಣಾಮ ಮಲ್ಲಿಕಾರ್ಜುನ ಭರಪೂರ ಅನಾನಸ್ ಬೆಳೆದಿದ್ದಾರೆ. ಸಾವಯವ ಗೊಬ್ಬರದ ಬಳಕೆ ಮತ್ತು ಸೂಕ್ತ ಜೈವಿಕ ಕ್ರಿಮಿನಾಶಕಗಳ ಬಳಕೆ ಮಲ್ಲಿಕಾರ್ಜುನ ಸಾಧನೆಗೆ ಸಹಕಾರಿಯಾಗಿದೆ. ಮಲ್ಲಿಕಾರ್ಜುನ ಯೋಶಗಾಥೆಯಿಂದ ಪ್ರೇರಣೆಗೊಂಡಿರುವ ಸುತ್ತಮುತ್ತಲಿನ ರೈತರು ಸಹ ಇದೀಗ ಅನಾನಸ್ ಬೆಳೆಯುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಮಲ್ಲಿಕಾರ್ಜುನ್ ಕೊಳವೆ ಬಾವಿಗಳಲ್ಲಿ ಸಹ ನೀರಿ ಕಡಿಮೆಯಾಗುತ್ತಿದೆ. ಆದರೆ, ಅವನ ಹೊಲದಲ್ಲಿ ಕೃಷಿಹೊಂಡ ನಿರ್ಮಿಸಿದ್ದು, ಅದರಿಂದ ಇನ್ನು ಎರಡು ತಿಂಗಳು ಕಾಲ ನೀರು ನಿರ್ವಹಣೆ ಮಾಡಬಹುದು. ಅನನಾಸ್​ ಅಲ್ಲದೇ ಮಾವು, ಚಿಕ್ಕು, ಬಾಳೆ, ಮಹಾಗನಿ ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿದ್ದು ಅದರಲ್ಲಿ ಸಹ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ಬತ್ತಿದ ವರದಾ ನದಿಗೆ ಕೊಳವೆಬಾವಿಯಿಂದ ನೀರು ಹರಿಸುತ್ತಿರುವ ರೈತ - Borewell Water To River

Last Updated : Apr 10, 2024, 2:52 PM IST

ABOUT THE AUTHOR

...view details