ಕರ್ನಾಟಕ

karnataka

ಬದುಕುವ ಗ್ಯಾರಂಟಿ ಇರಲಿಲ್ಲ, ಕಣ್ಣೆದುರೇ ಎಲ್ಲಾ ಕೊಚ್ಚಿ ಹೋಗ್ತಿತ್ತು: ವಯನಾಡ್ ದುರಂತದಲ್ಲಿ ಪಾರಾದ ಗುಂಡ್ಲುಪೇಟೆ ಮಹಿಳೆ - Wayanad Landslide Tragedy

By ETV Bharat Karnataka Team

Published : Aug 3, 2024, 3:35 PM IST

Updated : Aug 3, 2024, 4:17 PM IST

ಬದುಕುವ ಗ್ಯಾರಂಟಿಯೇ ಇರಲಿಲ್ಲ, ಎಲ್ಲಾ ಕೊಚ್ಚಿ ಹೋಗ್ತಿತ್ತು; ದುರಂತದಲ್ಲಿ ಪಾರಾದ ಗುಂಡ್ಲುಪೇಟೆ ಮಹಿಳೆ ಮಾತು

wayanad tragedy
ವಯನಾಡ್ ದುರಂತ, ಪಾರಾದ ಗುಂಡ್ಲುಪೇಟೆ ಮಹಿಳೆ (ETV Bharat)

ವಯನಾಡ್ ದುರಂತದಲ್ಲಿ ಪಾರಾದ ಗುಂಡ್ಲುಪೇಟೆ ಮಹಿಳೆ (ETV Bharat)

ಚಾಮರಾಜನಗರ: ಆ‌ ಮಳೆಯ ನೀರಲ್ಲಿ ಬದುಕುವ ಗ್ಯಾರಂಟಿಯೇ ಇರಲಿಲ್ಲಾ, ಗುಡ್ಡದ ಮೇಲೆ ನಾವು ನಿಂತಿದ್ದೆವು. ಎಲ್ಲವೂ ಕೊಚ್ಚಿಕೊಂಡು ಹೋಗುತ್ತಿತ್ತು ಎಂದು ದುರಂತದಲ್ಲಿ ಪಾರಾಗಿ ಬಂದ ಮಹಿಳೆ ಕಣ್ಣೀರು ಹಾಕಿದರು.

ಕೇರಳದ ವಯನಾಡು ಭೂ ಕುಸಿತದಲ್ಲಿ ಪಾರಾಗಿ ಸ್ವಗ್ರಾಮ ಗುಂಡ್ಲುಪೇಟೆ ತಾಲೂಕಿನ ಕೋಡಗಳ್ಳಿಗೆ ಬಂದಿರುವ ಗೌರಮ್ಮ ಈಗಲೂ ದುರಂತದಲ್ಲಾದ ಆಘಾತದಿಂದ ಚೇತರಿಸಿಕೊಂಡಿಲ್ಲ. ಅಂದು ಇಡೀರಾತ್ರಿ ಮಳೆಯಲ್ಲಿ ತೊಯ್ದು, ಕೊನೆಗೆ ಸುರಕ್ಷಿತವಾಗಿ ಮನೆಗೆ ಬಂದಿದ್ದಾರೆ.

ಕೇರಳದ ವಯನಾಡಿನ ಚೂರಲ್ ಮಲೆ ಟೀ ಎಸ್ಟೇಟ್‍ನಲ್ಲಿ 30 ವರ್ಷಗಳಿಂದ ಕೆಲಸ ಮಾಡಿ ಜೀವನ ಕಟ್ಟಿಕೊಂಡಿದ್ದ ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿ ಗ್ರಾಮದ ಗೌರಮ್ಮ ಅವರ ಕುಟುಂಬ, ಹಸುಗಳ ಕಿರುಚಾಟದಿಂದ ಜೀವ ಉಳಿಸಿಕೊಂಡು ಗುಡ್ಡ ಕುಸಿತದ ಘಟನೆಯಲ್ಲಿ ಬದುಕುಳಿದಿದ್ದಾರೆ.

'ಹಸುಗಳ ಕಿರುಚಾಟದಿಂದ ಎದ್ದೆವು':ಕೋಡಹಳ್ಳಿಯ ಗೌರಮ್ಮ, ಮಗ ವಿನೋದ್, ಅಣ್ಣ ಸಿದ್ದರಾಜು, ಅತ್ತಿಗೆ ಜಯಮ್ಮ, ಅಣ್ಣನ ಮಗ ಮಹೇಶ್ ಐದು ಮಂದಿ ಚೂರಲ್ ಮಲೆಯಲ್ಲಿ ದುರಂತ ನಡೆದ ಸೋಮವಾರ ರಾತ್ರಿ ಎಂದಿನಂತೆ ಊಟ ಮುಗಿಸಿ ಮಲಗಿದ್ದರು. ಮಧ್ಯ ರಾತ್ರಿ ಕುಟುಂಬಸ್ಥರು ಸಾಕಿದ್ದ 18 ಹಸುಗಳ ಕಿರುಚಾಟ ಜೋರಾದ ಹಿನ್ನೆಲೆಯಲ್ಲಿ ಎದ್ದು ನೋಡಿದಾಗಿ ಕೊಟ್ಟಿಗೆಯೊಳಗೆ ನೀರು ನುಗ್ಗಿ ಹಸುಗಳ ದೇಹಕ್ಕೆ ಆವರಿಸತೊಡಗಿತ್ತು. ಎಲ್ಲಾ ಹಸುಗಳ ಹಗ್ಗ ಚಿಚ್ಚಿ ಬಿಟ್ಟಿದ್ದಾರೆ. ನಂತರ ಕುಟುಂಬದ 6, ಅಕ್ಕಪಕ್ಕದ 12 ಮಂದಿ ಸೇರಿ ಒಟ್ಟು 18 ಮಂದಿ ಪಕ್ಕದ ಗುಡ್ಡವನ್ನೇರಿ, ತಾವಿದ್ದ ಪ್ರದೇಶದಿಂದ 5 ಕಿ.ಮೀ ಮೇಲೆ ಹತ್ತಿ ಬಚಾವಾಗಿದ್ದಾರೆ.

''ಲೈಟ್ ಇಲ್ಲದೆ ಕತ್ತಲೆಯಲ್ಲಿ ಕೈಗೆ ಸಿಗುವ ಬೇಲಿ, ಕಲ್ಲು ಹಿಡಿದು ಗುಡ್ಡ ಹತ್ತಿದೆವು, ನಾವು ಬದುಕಲು ಸಾಧ್ಯವಿಲ್ಲ ಎಂಬ ಆಲೋಚನೆಯೂ ಸಹ ಬಂದಿತ್ತು. ಸದ್ಯ ದೇವರ ಕೃಪೆಯಿಂದ ಹೇಗೋ ಬಚಾವ್ ಆದೆವು'' ಎಂದು ಗೌರಮ್ಮ ದುರಂತದ ಭೀಕರತೆ ಬಿಚ್ಚಿಟ್ಟರು.

ಮನೆ, ಅಂಗನವಾಡಿ, ಶಾಲೆ ಎಲ್ಲವೂ ನಿರ್ನಾಮ:''ಗುಡ್ಡ ಕುಸಿತ ಮೊದಲಿಗೆ ಕುಂಜರಿ ಎಂಬ ಗುಡ್ಡದಲ್ಲಿ ಸಂಭವಿಸಿತ್ತು. ನಂತರ ಮುಂಡಕ್ಕೈ, ಚೂರಲ್ ಮಲೆ, ಪಡವಟ್ಟಿ ಗುಡ್ಡಕ್ಕೂ ಆವರಿಸಿತು. ದುರಂತದಲ್ಲಿ ಮುಂಡಕ್ಕೈನಲ್ಲಿದ್ದ ಬಹುತೇಕ ಮನೆಗಳು ಕೊಚ್ಚಿಹೋಗಿವೆ. ರಾತ್ರಿ ಕಳೆದು ಬೆಳಗಾದ ನಂತರ ನೋಡಿದರೆ ನಮ್ಮ ಮನೆ, ಮಕ್ಕಳು ಓದಿದ ಅಂಗನವಾಡಿ, ಶಾಲೆ ಎಲ್ಲವೂ ನೀರಿನಲ್ಲಿ ಕೊಚ್ಚಿ ನಿರ್ನಾಮವಾಗಿದ್ದವು. ಇದನ್ನು ಕಂಡು ಎದೆಯಲ್ಲಿ ನಡುಕ ಹುಟ್ಟಿಸಿತು'' ಎಂದು ಕಣ್ಣೀರಿಟ್ಟರು.

''ಪಕ್ಕದ ಗುಡ್ಡದಲ್ಲಿ ನಾವು ಇರುವ ಮಾಹಿತಿ ತಿಳಿದ ನಂತರ ಮಂಗಳವಾರ ಸೇನಾ ಹೆಲಿಕಾಪ್ಟರ್​ನಲ್ಲಿ ಮೆಪ್ಪಾಡಿಯ ನಿರಾಶ್ರಿತ ಕೇಂದ್ರಕ್ಕೆ ತಂದು ಬಿಟ್ಟರು. ಸದ್ಯ ಚಾಮರಾಜನರಕ್ಕೆ ಅಣ್ಣ ಸಿದ್ದರಾಜು, ಅತ್ತಿಗೆ ಜಯಮ್ಮ ತೆರಳಿದ್ದು, ನಾನು ಗುಂಡ್ಲುಪೇಟೆಯ ಕೋಡಹಳ್ಳಿ ಗ್ರಾಮಕ್ಕೆ ಬಂದಿದ್ದೇನೆ. ಮಗ ವಿನೋದ್, ಅಣ್ಣನ ಮಗ ಮಹೇಶ್ ಇಬ್ಬರು ಮೆಪ್ಪಾಡಿಯಲ್ಲಿಯೇ ಇದ್ದಾರೆ'' ಎಂದು ಗೌರಮ್ಮ ಮಾಹಿತಿ ನೀಡಿದರು.

ಇದನ್ನೂ ಓದಿ:ವಯನಾಡ್‌ ಭೀಕರ ಭೂಕುಸಿತ: 3 ದಿನದ ಬಳಿಕ ಸಾವು ಗೆದ್ದು ಬಂದ ಒಂದೇ ಕುಟುಂಬದ ನಾಲ್ವರು! - Wayanad Rescue Operation

Last Updated : Aug 3, 2024, 4:17 PM IST

ABOUT THE AUTHOR

...view details