ಕರ್ನಾಟಕ

karnataka

ETV Bharat / state

ಕೋವಿಡ್​ 2ನೇ ಅಲೆಯಲ್ಲಿ ದುಬಾರಿ ಬೆಲೆಗೆ ಪಿಪಿಇ ಕಿಟ್​ ಪೂರೈಕೆ: ಹೈಕೋರ್ಟ್​ಗೆ ವರದಿ ಸಲ್ಲಿಸಿದ ಸರ್ಕಾರ - COVID SCAM

ಕೋವಿಡ್ ಎರಡನೇ ಅಲೆ ವೇಳೆ ದುಬಾರಿಗೆ ಬೆಲೆಗೆ ಪಿಪಿಇ ಕಿಟ್ ಪೂರೈಕೆ ಪ್ರಕರಣ ಸಂಬಂಧ ಹೈಕೋರ್ಟ್​ಗೆ ರಾಜ್ಯ ಸರ್ಕಾರ ವರದಿ ಸಲ್ಲಿಸಿದೆ.

ಹೈಕೋರ್ಟ್, High Court, Covid PPE Kit, ಪಿಪಿಇ ಕಿಟ್
ಹೈಕೋರ್ಟ್ (ETV Bharat)

By ETV Bharat Karnataka Team

Published : Feb 11, 2025, 9:11 PM IST

ಬೆಂಗಳೂರು: ಕೋವಿಡ್-19 ಎರಡನೇ ಅಲೆ ಸಂದರ್ಭದಲ್ಲಿ ದುಬಾರಿ ದರಕ್ಕೆ ಪಿಪಿಇ ಕಿಟ್‌ಗಳನ್ನು ಪೂರೈಸಿದ ಆರೋಪ ಸಂಬಂಧ ಪ್ರೂಡಂಟ್ ಮ್ಯಾನೇಜ್‌ಮೆಂಟ್ ಸೊಲ್ಯೂಷನ್ ಹಾಗೂ ಲಾಜ್ ಎಕ್ಸ್‌‌ಪೋರ್ಟ್ ಲಿಮಿಟೆಡ್ ಕಂಪೆನಿಗಳ ವಿರುದ್ಧದ ವರದಿಯನ್ನು ಸರ್ಕಾರ ಇಂದು ಹೈಕೋರ್ಟ್‌ಗೆ ಸಲ್ಲಿಸಿತು.

ಪಿಪಿಇ ಕಿಟ್ ಪೂರೈಸಿದ ಈ ಎರಡು ಖಾಸಗಿ ಸಂಸ್ಥೆಗಳ ಪರವಾಗಿ ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶ ರದ್ದುಪಡಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಪೀಠಕ್ಕೆ ವರದಿ ಸಲ್ಲಿಸಲಾಗಿದೆ.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ರೂಬೆನ್ ಜಾಕಬ್, ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಪಿಪಿಇ ಕಿಟ್‌ಗಳನ್ನು ಪೂರೈಸಲು ಪ್ರೂಡಂಟ್ ಮ್ಯಾನೇಜ್‌ಮೆಂಟ್ ಸೊಲ್ಯೂಷನ್ ಹಾಗೂ ಲಾಜ್ ಎಕ್ಸ್‌ಪೋರ್ಟ್ ಲಿಮಿಟೆಡ್ ಕಂಪೆನಿಗಳು ಟೆಂಡರ್ ಪಡೆದುಕೊಂಡಿದ್ದವು. ಆದರೆ, ಎರಡನೇ ಅಲೆ ಸಂದರ್ಭದಲ್ಲಿ ಹೊಸದಾಗಿ ಟೆಂಡರ್‌ನಲ್ಲಿ ಪಾಲ್ಗೊಳ್ಳದೇ ಅಧಿಕಾರಿಗಳ ಜೊತೆ ಶಾಮೀಲಾಗಿ ಈ ಎರಡು ಕಂಪೆನಿಗಳು ಆರೋಗ್ಯ ಇಲಾಖೆಗೆ ಪಿಪಿಇ ಕಿಟ್‌ಗಳನ್ನು ಪೂರೈಸಿವೆ. ಆದರೆ, ಪ್ರತಿ ಪಿಪಿಇ ಕಿಟ್‌ಗೆ 400 ರೂ. ಮೂಲ ಬೆಲೆ ಇದ್ದದ್ದು ಅದನ್ನು 1,312 ರೂ.ಗೆ ಪೂರೈಸಿದ್ದಾರೆ. ಈ ಸಂಬಂಧ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ತನಿಖೆ ನಡೆಸಿದ್ದು, ಅಕ್ರಮ ಪತ್ತೆ ಮಾಡಿದ್ದಾರೆ. ಇಲಾಖಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಇಡೀ ಕೋವಿಡ್ ಹಗರಣದ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಮೈಖಲ್​ ಡಿ ಕುನ್ಹಾ ಅವರ ನೇತೃತ್ವದಲ್ಲಿ ಆಯೋಗ ರಚಿಸಲಾಗಿತ್ತು. ಆಯೋಗವು ವರದಿ ನೀಡಿದ್ದು, ಆ ವರದಿಯಲ್ಲಿ ಪ್ರೂಡಂಟ್ ಮ್ಯಾನೇಜ್‌ಮೆಂಟ್ ಸೊಲ್ಯೂಷನ್ ಹಾಗೂ ಲಾಜ್ ಎಕ್ಸ್‌‌ಪೋರ್ಟ್ ಲಿಮಿಟೆಡ್ ಸಂಸ್ಥೆಗಳಿಗೆ ಸಂಬಂಧಿಸಿದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದರು.

ವರದಿಯ ಲಕೋಟೆಯನ್ನು ತೆರೆದ ನ್ಯಾಯಪೀಠ, ಆ ವರದಿಯ ಪ್ರತಿಯನ್ನು ಖಾಸಗಿ ಸಂಸ್ಥೆಗಳ ಪರ ವಕೀಲರಿಗೆ ನೀಡುವಂತೆ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅವರಿಗೆ ಸೂಚಿಸಿತು. ಅಲ್ಲದೇ ವರದಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಖಾಸಗಿ ಸಂಸ್ಥೆಗಳ ಪರ ವಕೀಲರಿಗೆ ತಿಳಿಸಿ ವಿಚಾರಣೆಯನ್ನು ಮಾರ್ಚ್ 3ಕ್ಕೆ ಮುಂದೂಡಿತು.

ಕೋವಿಡ್ ಸಂದರ್ಭದಲ್ಲಿ ಪಿಪಿಇ ಕಿಟ್‌ಗಳನ್ನು ಪೂರೈಸಿದ ಬಿಲ್ ಮೊತ್ತ ಪಾವತಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಖಾಸಗಿ ಕಂಪೆನಿಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. 6 ವಾರಗಳಲ್ಲಿ ಬಾಕಿ ಬಿಲ್ ಮೊತ್ತ 38.26 ಕೋಟಿ ರೂ. ಪಾವತಿಸುವಂತೆ ಏಕ ಸದಸ್ಯ ಪೀಠ 2024ರ ಏಪ್ರಿಲ್ 10ಕ್ಕೆ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.

ಇದನ್ನೂ ಓದಿ: ವ್ಹೀಲ್ ಚೇರ್‌ನಲ್ಲಿ 'ಇನ್ವೆಸ್ಟ್ ಕರ್ನಾಟಕ' ಸಮಾವೇಶಕ್ಕೆ ಬಂದ ಸಿಎಂ: ಶೀಘ್ರ ಗುಣಮುಖರಾಗುವಂತೆ ರಾಜನಾಥ್ ಸಿಂಗ್ ಹಾರೈಕೆ

ಇದನ್ನೂ ಓದಿ:ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ವಿರುದ್ಧದ ಪ್ರಕರಣ ರದ್ದು

ABOUT THE AUTHOR

...view details