ಕರ್ನಾಟಕ

karnataka

By ETV Bharat Karnataka Team

Published : Feb 28, 2024, 9:50 PM IST

ETV Bharat / state

ಸಾಲ ವಸೂಲಾತಿಗೆ ಹಸುಗೂಸು ಸಮೇತ ಬಾಣಂತಿಯನ್ನೇ ಕಚೇರಿಗೆ ಕರೆತಂದ ಫೈನಾನ್ಸ್ ಸಿಬ್ಬಂದಿ!

ನಾಲ್ಕು ತಿಂಗಳಿಂದ ಸಾಲ ಕಟ್ಟುತ್ತಿದ್ದೇನೆ. ಕಳೆದ ತಿಂಗಳ ಕಂತು ಮಾತ್ರ ಬಾಕಿ ಇತ್ತು. ಅಷ್ಟಕ್ಕೆ ಮಗುವಿನಸಮೇತ ನನ್ನನ್ನು ಫೈನಾನ್ಸ್​ ಕಚೇರಿಗೆ ಕರೆತಂದು ಕೂರಿಸಿದರು ಎಂದು ಬಾಣಂತಿ ಅಳಲು ತೋಡಿಕೊಂಡಿದ್ದಾರೆ.

Davanagere
ದಾವಣಗೆರೆ

ದಾವಣಗೆರೆ:ಸಾಲದ ಕಂತು ಕಟ್ಟಿಲ್ಲ ಎನ್ನುವ ಕಾರಣಕ್ಕೆ ಫೈನಾನ್ಸ್ ಸಿಬ್ಬಂದಿ ಒಂದೂವರೆ ತಿಂಗಳ ಹಸುಗೂಸುಸಮೇತ ಬಾಣಂತಿಯನ್ನು ಕಚೇರಿಗೆ ಕರೆತಂದ ಆರೋಪ ಕೇಳಿ ಬಂದಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಣದಲ್ಲಿ ಮಂಗಳವಾರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬಾಣಂತಿಯಾದರೆ ಮಗುವಿನ ಜೊತೆಗೆ ಬಂದು ಸಾಲ ಕಟ್ಟುವಂತೆ ಒತ್ತಾಯಿಸಲಾಗುತ್ತಿದೆ. ಸತತ ಮೂರು ಗಂಟೆಗಳ ಕಾಲ ಫೈನಾನ್ಸ್​ ಕಚೇರಿಯಲ್ಲೇ ಕೂರಿಸಿ ಹಣ ಕಟ್ಟುವಂತೆ ಒತ್ತಾಯಿಸಿದರು ಎಂದು ಮಹಿಳೆ ತಿಳಿಸಿದ್ದಾರೆ.

ಬಾಣಂತಿ ತನ್ನ ಮಗುವನ್ನು ಕಂಕುಳಲ್ಲಿಟ್ಟುಕೊಂಡು ಫೈನಾನ್ಸ್ ಕಚೇರಿಯಲ್ಲಿ ಕಾಲ ಕಳೆದಿದ್ದಾಳೆ ಎಂದು ಸಾಮಾಜಿಕ ಹೋರಾಟಗಾರ ಹನುಮಂತಪ್ಪ ಸೊರಟೂರು ಅವರು ಮಹಿಳೆ ಜೊತೆ ತೆರಳಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಪಡೆದ ಹೊನ್ನಾಳಿ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಫೈನಾನ್ಸ್ ಸಿಬ್ಬಂದಿಗೆ ತಿಳಿ ಹೇಳಿ ಮಹಿಳೆಯನ್ನು ವಾಪಸ್​ ಕರೆದುಕೊಂಡು ಬಂದಿದ್ದಾರೆ.

ಘಟನೆಯ ಹಿನ್ನೆಲೆ: ಮಹಿಳೆ ಹಾಗೂ ಆಕೆಯ ಪತಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಪತಿ ಫೈನಾನ್ಸ್​ನಲ್ಲಿ 80 ಸಾವಿರ ರೂ ಸಾಲ ಮಾಡಿದ್ದು, ಪ್ರತಿ ತಿಂಗಳು ಫೈನಾನ್ಸ್​ಗೆ 4,500 ರೂಪಾಯಿ ಕಂತು ಕಟ್ಟುತ್ತಿದ್ದರು. ನಾಲ್ಕು ತಿಂಗಳು ಸರಿಯಾಗಿಯೇ ಕಂತು ಕಟ್ಟಿದ್ದಾರೆ. ಆದರೆ ಕಳೆದ 15 ದಿನಗಳಿಂದ 5ನೇ ಕಂತಿನ ಹಣ ಕಟ್ಟಿರಲಿಲ್ಲ. ಹೀಗಾಗಿ ಫೈನಾನ್ಸ್​ ಸಿಬ್ಬಂದಿ ಬಾಣಂತಿಯನ್ನು ಕರೆತಂದು ಕಚೇರಿಯಲ್ಲಿ ಕೂರಿಸಿದ್ದರು.

ಹೊನ್ನಾಳಿ ಸಿಪಿಐ ಮುದ್ದುರಾಜ್ ಪ್ರತಿಕ್ರಿಯಿಸಿ, "ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ ಎಂದು ಬಾಣಂತಿ ದೂರು ನೀಡಿದ್ದಾರೆ. ಆದರೆ ಎಫ್ಐಆರ್ ದಾಖಲಾಗಿಲ್ಲ. ಮಹಿಳೆಯ ಪತಿ ಮನೆಬಿಟ್ಟು ಹೋಗಿದ್ದಾನೆ. ಆ ಮಹಿಳೆಯನ್ನು ಫೈನಾನ್ಸ್ ಕಚೇರಿಯಿಂದ ಕರೆತಂದಿದ್ದೇವೆ" ಮಾಹಿತಿ ನೀಡಿದರು.

ಈ ಘಟನೆ ಸಂಬಂಧ ಬಾಣಂತಿ ಪ್ರತಿಕ್ರಿಯಿಸಿ, "ನಾನು ಒಂದೂವರೆ ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದೆ. ಫೈನಾನ್ಸ್ ಸಿಬ್ಬಂದಿ ಹಣ ಕಟ್ಟಿಲ್ಲ ಎಂದು ಹಸುಗೂಸು ಸಮೇತ ನನ್ನನ್ನು ಕಚೇರಿಗೆ ಕರೆತಂದು ಕೂರಿಸಿದ್ದರು. 80 ಸಾವಿರ ಸಾಲ ಪಡೆದಿದ್ದೆವು. ಈ ತಿಂಗಳ ಕಂತು ಐದು ಸಾವಿರ ಕಟ್ಟಿಲ್ಲ. ಮಧ್ಯಾಹ್ನ ಎರಡು ಗಂಟೆಗೆ ಕರೆತಂದವರು ಸಂಜೆ ಐದು ಗಂಟೆ ತನಕ ಕಚೇರಿಯಲ್ಲಿ ಕೂರಿಸಿದರು" ಎಂದು ಹೇಳಿದರು.

ಇದನ್ನೂ ಓದಿ:ಮಗನಿಗೆ ಜಾಮೀನು ಕೊಡಿಸಲು ಆತನ ತಾಯಿ ಮೇಲೆ ಅತ್ಯಾಚಾರ ಆರೋಪ: ಪ್ರಕರಣ ದಾಖಲು

ABOUT THE AUTHOR

...view details