ಕರ್ನಾಟಕ

karnataka

ETV Bharat / state

ಕಿತ್ತೂರು ರಾಣಿ ಚೆನ್ನಮ್ಮ ಗೊತ್ತು, ರಾಣಿ ರುದ್ರಮ್ಮ ಯಾರೆಂದು ಗೊತ್ತೇ?

ನಮ್ಮ ದೇಶದ ಶ್ರೇಷ್ಠ ವೀರಾಗ್ರಣಿಗಳ ಪೈಕಿ ಕಿತ್ತೂರು ರಾಣಿ ಚೆನ್ನಮ್ಮ ಕೂಡಾ ಒಬ್ಬರು. ಇವರ ಬಗ್ಗೆ ನಿಮಗೆ ಹೆಚ್ಚು ಹೇಳಬೇಕೆಂದಿಲ್ಲ. ಆದರೆ, ರಾಣಿ ರುದ್ರಮ್ಮ ಯಾರೆಂಬುದು ಗೊತ್ತೇ? ಇಲ್ಲಿದೆ ವಿಶೇಷ ವರದಿ.

HISTORY OF RANI RUDRAMA
ಕಿತ್ತೂರಿನ ರಾಣಿ ರುದ್ರಮ್ಮನ ಚರಿತ್ರೆ (ETV Bharat)

By ETV Bharat Karnataka Team

Published : 10 hours ago

Updated : 9 hours ago

ಬೆಳಗಾವಿ:'ಭಾರತ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ' ರಾಣಿ ಚೆನ್ನಮ್ಮ ಎಲ್ಲರಿಗೂ ಚಿರಪರಿಚಿತ. ಆದರೆ, ಕಿತ್ತೂರು ಸಂಸ್ಥಾನದ ರಾಣಿ ರುದ್ರಮ್ಮನ ಬಗ್ಗೆ ಅದೆಷ್ಟೋ ಜನರಿಗೆ ಗೊತ್ತೇ ಇಲ್ಲ.

ಕನಸಿನಲ್ಲೂ ಸೋಲನ್ನೇ ಕಾಣದ, ಜಗತ್ತಿನ ಅನೇಕ ರಾಷ್ಟ್ರಗಳನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದ ಬ್ರಿಟಿಷರನ್ನು ಮೊಟ್ಟ ಮೊದಲ ಬಾರಿಗೆ ಬಗ್ಗುಬಡಿದ ಹೆಗ್ಗಳಿಕೆ ವೀರವನಿತೆ ಚೆನ್ನಮ್ಮನಿಗೆ ಸಲ್ಲುತ್ತದೆ. ಈ ಐತಿಹಾಸಿಕ ಘಟನೆಗೀಗ 200 ವಸಂತ!. ಇಂಥ ದಿಟ್ಟ ಕಿತ್ತೂರು ಸಾಮ್ರಾಜ್ಯದಲ್ಲಿ 1782ರಿಂದ 1816ರವರೆಗೆ ಆಳ್ವಿಕೆ ನಡೆಸಿದ 11ನೇ ದೊರೆ ಮಲ್ಲಸರ್ಜನ ಮೊದಲ ಧರ್ಮಪತ್ನಿಯೇ ರಾಣಿ ರುದ್ರಮ್ಮ. ಎರಡನೇ ಪತ್ನಿ ರಾಣಿ ಚೆನ್ನಮ್ಮ.

ರಾಣಿ ರುದ್ರಮ್ಮನವರ ಸಮಾಧಿ (ETV Bharat)

ಯುದ್ಧ ನೈಪುಣ್ಯತೆ: ರುದ್ರಮ್ಮ ಇಂದಿನ ಸವದತ್ತಿ ತಾಲೂಕಿನ ತಲ್ಲೂರ ಗ್ರಾಮದ ದೇಸಾಯಿ ಮನೆತನದ ವೀರಪ್ಪ ಮತ್ತು ನೀಲಾಂಬಿಕೆ ದಂಪತಿ ಪುತ್ರಿ. ಇವರನ್ನು ಕಿತ್ತೂರು ರಾಜ ಮಲ್ಲಸರ್ಜನಿಗೆ ವಿವಾಹ ಮಾಡಿಕೊಡಲಾಗಿತ್ತು. ರಾಣಿ ರುದ್ರಮ್ಮ ಆಂಗ್ಲ, ಉರ್ದು, ಪಾರ್ಸಿ ಹಾಗೂ ಮರಾಠಿ ಭಾಷೆಗಳನ್ನು ಮಾತನಾಡುತ್ತಿದ್ದರು. ಕತ್ತಿ ವರಸೆ, ಕುದುರೆ ಸವಾರಿ, ಯುದ್ಧಕಲೆಗಳನ್ನು ಅವರ ತಂದೆಯಿಂದ ಕಲಿತಿದ್ದ ರುದ್ರಮ್ಮ, ಯುದ್ಧದಲ್ಲಿ ನೈಪುಣ್ಯತೆ ಹೊಂದಿದ್ದರು.

ಕಿತ್ತೂರು ಕೋಟೆ (ETV Bharat)

ಮಲ್ಲಸರ್ಜ ದೇಸಾಯಿಗೆ ಇಬ್ಬರು ಪತ್ನಿಯರಾದರೂ ಇಬ್ಬರೂ ಒಡಹುಟ್ಟಿದ ಅಕ್ಕ-ತಂಗಿಯರಂತೆ ಅನ್ಯೋನ್ಯವಾಗಿದ್ದರು. ಇತಿಹಾಸದಲ್ಲಿ ಯಾವ ರಾಣಿಯರಲ್ಲೂ ಕಾಣದ ಹೊಂದಾಣಿಕೆ ರಾಣಿ ರುದ್ರಮ್ಮ ಮತ್ತು ರಾಣಿ ಚೆನ್ನಮ್ಮ ಅವರ ನಡುವೆ ಇತ್ತು. ಇದು ರಾಜ ಮಲ್ಲಸರ್ಜನಿಗೆ ದೊಡ್ಡ ಶಕ್ತಿಯಾಗಿತ್ತು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ.

ಕಿತ್ತೂರು ಕೋಟೆ (ETV Bharat)

ಮಲ್ಲಸರ್ಜನ ಅನುಪಸ್ಥಿತಿಯಲ್ಲಿ ಸಮರ್ಥ ಆಡಳಿತ:ಮಲ್ಲಸರ್ಜ ದೇಸಾಯಿ ಹಾಗೂ ರಾಣಿ ರುದ್ರಮ್ಮ ಮೈಸೂರಿನ ಟಿಪ್ಪು ಸುಲ್ತಾನನ ಸೈನ್ಯದೊಂದಿಗೆ ದೇಶನೂರಿನ ರಣಭೂಮಿಯಲ್ಲಿ ವೀರಾವೇಶದಿಂದ ಹೋರಾಡಿ ಗೆಲುವು ಸಾಧಿಸುತ್ತಾರೆ. ಕೆಲ ದಿನಗಳ ನಂತರ ಬದ್ರುತ್‌ ಜಮಾನ್‌ ಖಾನ್‌ ನೇತೃತ್ವದಲ್ಲಿ ಟಿಪ್ಪು ಸುಲ್ತಾನನ ಸೈನ್ಯ ಕಿತ್ತೂರು ಸಂಸ್ಥಾನದ ಸೈನ್ಯದ ಮೇಲೆ ದಾಳಿ ನಡೆಸಿದಾಗ ಮಲ್ಲಸರ್ಜನನ್ನು ಯುದ್ಧದಲ್ಲಿ ಸೋಲಿಸಿ, ಆತನನ್ನು ಪಿರಿಯಾಪಟ್ಟಣದ ಕಪಾಳದುರ್ಗದಲ್ಲಿರುವ ಕೋಟೆಯಲ್ಲಿ ಬಂಧಿಸಿಡುತ್ತಾರೆ. ಟಿಪ್ಪು ಸುಲ್ತಾನನ ಸೈನ್ಯ ಕಿತ್ತೂರು ಕೋಟೆಯನ್ನು ಲೂಟಿ ಮಾಡಿದ ಸಂದರ್ಭದಲ್ಲಿ ಕಿತ್ತೂರಿನಲ್ಲಿ ಮರಳಿ ಸೈನ್ಯ ಕಟ್ಟಲು ತನ್ನ ಬಂಗಾರದ ಒಡವೆಗಳನ್ನು ಸೇನಾಧಿಪತಿ ತಿಮ್ಮನಗೌಡನಿಗೆ ನೀಡಿ ರಾಣಿ ರುದ್ರಮ್ಮ ಔದಾರ್ಯತೆ ಮೆರೆಯುತ್ತಾರೆ. ಅಲ್ಲದೇ ಮಲ್ಲಸರ್ಜ ದೇಸಾಯಿ ಟಿಪ್ಪುವಿನ ಬಂಧನದಲ್ಲಿದ್ದಾಗ 1885ರಿಂದ 1888ವರೆಗೆ ಕಿತ್ತೂರು ಸಂಸ್ಥಾನವನ್ನು ಮೂರು ವರ್ಷಗಳ ಕಾಲ ಸಮರ್ಥವಾಗಿ ಮುನ್ನಡೆಸಿದ ಕೀರ್ತಿಯೂ ರಾಣಿ ರುದ್ರಮ್ಮ ಅವರಿಗೆ ಸಲ್ಲುತ್ತದೆ ಎಂದು ಈಟಿವಿ ಭಾರತಕ್ಕೆ ಸಂಶೋಧಕ ಮಹೇಶ ಚನ್ನಂಗಿ ತಿಳಿಸಿದರು.

ಕಿತ್ತೂರಿನ ರಾಣಿ ರುದ್ರಮ್ಮನವರ ಇತಿಹಾಸ (ETV Bharat)

ರಾಣಿ ರುದ್ರಮ್ಮನವರಿಗೆ ಇಬ್ಬರು ಮಕ್ಕಳು. ಮೊದಲನೆಯ ಮಗ ಶಿವಲಿಂಗರುದ್ರಸರ್ಜ(ಬಾಪುಸಾಹೇಬ), ಎರಡನೇಯ ಪುತ್ರ ವೀರಭದ್ರ ಸರ್ಜ(ಭಾವುಸಾಹೇಬ). ರಾಣಿ ಚೆನ್ನಮ್ಮಗೆ ಒಬ್ಬನೇ ಮಗ ಶಿವಬಸವರಾಜ(ಬಾಳಾಸಾಹೇಬ). ರಾಣಿ ರುದ್ರಮ್ಮ ಅವರ ತವರು ಮನೆಯ ಸಂಬಂಧಿಕ ಸಂಸ್ಥಾನವಾದ ಬೆಳವಡಿ ಮೇಲೆ ರಾಜ ಮಲ್ಲಸರ್ಜ ದಾಳಿ ಮಾಡಿ ಘಾಸಿಗೊಳಿಸುತ್ತಾನೆ. ಇದು ರುದ್ರಮ್ಮಳನ್ನು ಬಹಳಷ್ಟು ಜರ್ಜಿತರನ್ನಾಗಿ ಮಾಡುತ್ತದೆ. ಆ ಬಳಿಕ 1816ರಲ್ಲಿ ಮಲ್ಲಸರ್ಜ ದೇಸಾಯಿ ಮೃತಪಟ್ಟ ಬಳಿಕ ರಾಣಿ ಚೆನ್ನಮ್ಮ ಸ್ವತಃ ಮುಂದೆ ನಿಂತು ಸಹೋದರಿ ರುದ್ರಮ್ಮನ ಮಗನಾಗಿರುವ ಶಿವಲಿಂಗರುದ್ರಸರ್ಜನಿಗೆ ಕಿತ್ತೂರಿನ ದೊರೆಯಾಗಿ ಪಟ್ಟ ಕಟ್ಟಿ, ತನ್ನ ಪುತ್ರ ಶಿವಬಸವರಾಜನಿಗೆ ಭೈರವಿ ಕಂಕಣ ತೊಡಿಸುತ್ತಾರೆ. ಇದರಿಂದಾಗಿ ಇತಿಹಾಸದಲ್ಲಿ ಚೆನ್ನಮ್ಮ ಮಹಾತ್ಯಾಗಿ ಎನಿಸಿಕೊಳ್ಳುತ್ತಾರೆ.

ಸಂಗೊಳ್ಳಿ ಗ್ರಾಮ ಪಂಚಾಯತ್ (ETV Bharat)

ಮಲಪ್ರಭಾ ನದಿಯಲ್ಲಿ ಮುಳುಗಿದ ರುದ್ರಮ್ಮನ ಸಮಾಧಿ:ಸಂಸ್ಥಾನದಲ್ಲಿ ಮೂರು ಮಕ್ಕಳನ್ನು ಚೆನ್ನಮ್ಮ ತುಂಬಾ ಪ್ರೀತಿಯಿಂದ ಸಲಹುತ್ತಿರುವುದನ್ನು ಕಂಡು ರುದ್ರಮ್ಮ ಕಿತ್ತೂರು ಸಂಸ್ಥಾನದಿಂದ ದೂರವಾಗಿ ಸಂಗೊಳ್ಳಿಯಲ್ಲಿ ಅವರಿಗೆ ಸೇರಿದ ಕೋಟೆಯಲ್ಲಿ ತಮ್ಮ ಜೀವನದ ಕೊನೆಯ ದಿನಗಳನ್ನು ಕಳೆಯುತ್ತಾರೆ. ಇಷ್ಟಲಿಂಗ ಪೂಜೆ, ಅಧ್ಯಾತ್ಮಿಕ ಜೀವನ ಸಾಗಿಸುತ್ತಾ ಸಂಗೊಳ್ಳಿಯಲ್ಲಿ ಲಿಂಗೈಕ್ಯರಾಗುತ್ತಾರೆ. 1972ರಲ್ಲಿ ಸವದತ್ತಿ ತಾಲ್ಲೂಕಿನ ಮುನವಳ್ಳಿ ಬಳಿಯ ನವಿಲುತೀರ್ಥದಲ್ಲಿ ಅಣೆಕಟ್ಟು ಕಟ್ಟಿದ ಕಾರಣ ರಾಣಿ ರುದ್ರಮ್ಮನ ಸಮಾಧಿ ಮಲಪ್ರಭಾ ನದಿಯಲ್ಲಿ ಮುಳುಗಿ ಹೋಗಿದೆ. ಬೇಸಿಗೆಯಲ್ಲಿ ನದಿ ನೀರು ಪೂರ್ಣವಾಗಿ ಖಾಲಿಯಾದ ವೇಳೆ ಮಾತ್ರ ನೋಡಬಹುದಾಗಿದೆ. ಆಗ ಸಾಕಷ್ಟು ಜನರು ಇಲ್ಲಿಗೆ ಭೇಟಿ ನೀಡಿ ಪೂಜೆ ದರ್ಶನ ಪಡೆಯುತ್ತಾರೆ ಎಂದು ಮಹೇಶ ಚನ್ನಂಗಿ ತಿಳಿಸಿದರು.

ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಡಿ ರಾಣಿ ರುದ್ರಮ್ಮ ಅವರ ಸಮಾಧಿಯನ್ನು ಸಂರಕ್ಷಿಸಬೇಕು. ಕೂಡಲಸಂಗಮದಲ್ಲಿ ವಿಶ್ವಗುರು ಬಸವಣ್ಣನವರ ಐಕ್ಯಮಂಟಪವನ್ನು ನಿರ್ಮಿಸಿದಂತೆ ರುದ್ರಮ್ಮನವರ ಸಮಾಧಿಯನ್ನು ಅಭಿವೃದ್ಧಿಪಡಿಸಬೇಕು. ಇದರಿಂದ ಇದೊಂದು ಪ್ರಸಿದ್ಧ ಪ್ರವಾಸಿ ಕೇಂದ್ರವಾಗುತ್ತದೆ. ಈ ಬಗ್ಗೆ ಸರ್ಕಾರ, ಜಿಲ್ಲಾಡಳಿತ ಮನಸ್ಸು ಮಾಡಬೇಕಿದೆ ಎಂಬುದು ನ್ಯಾಯವಾದಿ ಉಮೇಶ ಲಾಳ ಅವರ ಒತ್ತಾಯ.

ಇದನ್ನೂ ಓದಿ: ಕಿತ್ತೂರು ಸೇನೆಯ ದಂಡನಾಯಕ ಸರ್ದಾರ ಗುರುಸಿದ್ದಪ್ಪನ ತ್ಯಾಗ, ಬಲಿದಾನಕ್ಕೆ ಗೌರವ ಸಿಗಲೇ ಇಲ್ಲ!

Last Updated : 9 hours ago

ABOUT THE AUTHOR

...view details