ಕರ್ನಾಟಕ

karnataka

ETV Bharat / state

ಶಿಗ್ಗಾಂವ್ ವಿಧಾನಸಭೆ ಉಪಚುನಾವಣೆ: ಎರಡು ಪಕ್ಷಗಳಿಗೂ ಪ್ರತಿಷ್ಠೆಯಾದ ಕಣ - Shiggaon Assembly By Election

ಹಾವೇರಿ ಲೋಕಸಭಾ ಕ್ಷೇತ್ರದ ಸಂಸದನಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗುತ್ತಿದ್ದಂತೆ ಶಿಗ್ಗಾಂವ್ ವಿಧಾನಸಭೆಗೆ ಉಪಚುನಾವಣೆಯ ಚರ್ಚೆಗಳು ಆರಂಭವಾಗಿವೆ.

By ETV Bharat Karnataka Team

Published : Jun 24, 2024, 9:25 PM IST

Congress aspirants Ajjampir Khadri
ಶಿಗ್ಗಾಂವ್ ವಿಧಾನಸಭೆ ಉಪಚುನಾವಣೆ (ETV Bharat)

ಶಿಗ್ಗಾಂವ್ ವಿಧಾನಸಭೆ ಉಪಚುನಾವಣೆ- ಪ್ರತಿಕ್ರಿಯೆಗಳು (ETV Bharat)

ಹಾವೇರಿ: ಜಿಲ್ಲೆಯ ಶಿಗ್ಗಾಂವ್ ಸವಣೂರು ಕ್ಷೇತ್ರದ ಶಾಸಕರಾಗಿದ್ದ ಬಸವರಾಜ್ ಬೊಮ್ಮಾಯಿ ಈಗ ಹಾವೇರಿ ಲೋಕಸಭಾ ಕ್ಷೇತ್ರದ ಸಂಸದರು. ಜೂನ್ 15ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ಲೋಕಸಭೆಯ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಶಿಗ್ಗಾಂವ್ ಸವಣೂರು ಕ್ಷೇತ್ರದ ಉಪಚುನಾವಣೆಗೆ ತಮ್ಮ ಪುತ್ರ ಭರತ ಬೊಮ್ಮಾಯಿ ಅವರನ್ನು ಕಣಕ್ಕಿಳಿಸಲಿದ್ದಾರೆ ಎಂಬ ಚರ್ಚೆಗೆ ಸ್ವತಃ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಪಕ್ಷದ ಹೈಕಮಾಂಡ್ ಎಲ್ಲ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ಯಾರನ್ನಾದರೂ ಅಭ್ಯರ್ಥಿ ಮಾಡಲಿ, ಅವರನ್ನು ಗೆಲ್ಲಿಸಿಕೊಂಡು ಬರುವುದಾಗಿ ತಿಳಿಸಿದ್ದಾರೆ.

ಬಿಜೆಪಿಯಲ್ಲಿ ಭರತ ಬೊಮ್ಮಾಯಿ ಜೊತೆ ಶ್ರೀಕಾಂತ ದುಂಡಿಗೌಡರ, ಶಶಿಧರ ಯಲಿಗಾರ್, ಶೋಭಾ ನಿಶ್ಸೀಮಗೌಡರ ಹೆಸರುಗಳು ಹೆಚ್ಚು ಚರ್ಚೆಗೊಳಗಾಗಿವೆ.

ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಶಿಗ್ಗಾಂವ್ ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು ಬಿಜೆಪಿಗಿಂತ ಹೆಚ್ಚು ಮತಗಳನ್ನು ಕಾಂಗ್ರೆಸ್‌ಗೆ ನೀಡಿದ್ದಾರೆ. ಇದು ಕಾಂಗ್ರೆಸ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿಸಿದೆ. ಕಳೆದ ಚುನಾವಣೆಯ ಪರಾಜಿತ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್, ಅಜ್ಜಂಪೀರ್ ಖಾದ್ರಿ ಸೋಮಣ್ಣ ಬೇವಿನಮರದ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಂಜೀವಕುಮಾರ್ ನೀರಲಗಿ ಸಹ ಅಭ್ಯರ್ಥಿ ಆಕಾಂಕ್ಷಿ ಎಂದು ತಿಳಿಸಿದ್ದಾರೆ.

ಈ ಮಧ್ಯೆ ವಿನಯ್ ಕುಲಕರ್ಣಿ ಪತ್ನಿ ಹಾಗೂ ಸಲೀಂ ಅಹ್ಮದ್ ಹೆಸರೂ ಸಹ ಕೇಳಿಬರಲಾರಂಭಿಸಿವೆ. ಅಜ್ಜಂಪೀರ್ ಖಾದ್ರಿ ಕಳೆದ ಮೂರು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿಗೆ ಭರ್ಜರಿ ಫೈಟ್ ನೀಡಿದ್ದು, ಈ ಬಾರಿ ಟಿಕೆಟ್ ನನ್ನದೇ ಎನ್ನುತ್ತಿದ್ದಾರೆ. ಅಲ್ಲದೆ ಪಠಾಣ್ ಹಾನಗಲ್ ತಾಲೂಕಿನವರು ಸ್ಥಳೀಯರಿಗೆ ಟಿಕೆಟ್ ಸಿಗುತ್ತೆ, ನಾನು ಸಹ ಆಕಾಂಕ್ಷಿ ಎಂದಿದ್ದಾರೆ. ಈ ಬಾರಿ ನನಗೆ ಟಿಕೆಟ್ ಫಿಕ್ಸ್ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲದೇ, ಖಾದ್ರಿ ಈಗಾಗಲೇ ಕ್ಷೇತ್ರದಲ್ಲಿ ಪಾದಯಾತ್ರೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಅಖಾಡದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

ಶಿಗ್ಗಾಂವ್ ಸವಣೂರು ಕ್ಷೇತ್ರಕ್ಕೆ ಸವಣೂರಿನ ದೊಡ್ಡಹುಣಸಿಮರದ ಕಲ್ಮಠದ ಚನ್ನಬಸವ ಶ್ರೀಗಳೂ ಸಹ ತಾವು ಆಕಾಂಕ್ಷಿ ಎನ್ನುತ್ತಿದ್ದಾರೆ. ಆದರೆ, ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ. ಅಲ್ಲದೆ ಸ್ಥಳೀಯ ಪಕ್ಷದ ಬೆಂಬಲದಿಂದ ಸಹ ಸ್ಪರ್ಧಿಸುವುದಿಲ್ಲ. ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಧುಮುಕಬೇಕು ಎಂದುಕೊಂಡಿದ್ದೇನೆ ಎಂದಿದ್ದಾರೆ.

ಈ ಕುರಿತಂತೆ ಈಗಾಗಲೇ ಕಾಂಗ್ರೆಸ್ ಪಕ್ಷ ಸಂಪರ್ಕ ಮಾಡಿರುವ ಸ್ವಾಮೀಜಿ ಪಕ್ಷ ಸೇರ್ಪಡೆ ಕುರಿತ ಚಿಂತನೆಯಲ್ಲಿದ್ದಾರೆ. ಭಕ್ತರು ಸ್ವಾಮೀಜಿಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹೇಳುತ್ತಿರುವುದು ಸ್ವಾಮೀಜಿಗೆ ಹೆಚ್ಚಿನ ಶಕ್ತಿ ನೀಡಿದೆ. ಬಿಜೆಪಿ ಕಾಂಗ್ರೆಸ್ ಪಕ್ಷಗಳಿಗೆ ಅಭ್ಯರ್ಥಿ ಆಯ್ಕೆ ಮಾಡುವುದು ಕಗ್ಗಂಟಾಗಿ ಪರಿಣಿಸಿದೆ.

ಬಸವರಾಜ್ ಬೊಮ್ಮಾಯಿ ಇಲ್ಲಿ ನಾಲ್ಕು ಬಾರಿ ಬಿಜೆಪಿಯಿಂದ ಗೆದ್ದು ಬಿಜೆಪಿ ಭದ್ರಕೋಟೆ ಮಾಡಿದ್ದಾರೆ. ಇತ್ತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇದ್ದು, ಕಾಂಗ್ರೆಸ್ ಪಕ್ಷ ಸಹ ಈ ಕ್ಷೇತ್ರವನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಎರಡು ಪಕ್ಷಗಳು ಅಳೆದು ತೂಗಿ ಅಭ್ಯರ್ಥಿ ಆಯ್ಕೆ ಮಾಡುವತ್ತ ಬ್ಯುಸಿಯಾಗಿವೆ. ಶಿಗ್ಗಾಂವ್ ಸವಣೂರು ಉಪಚುನಾವಣೆ ಎರಡು ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಅಭ್ಯರ್ಥಿಗಳು ಯಾರಾಗಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ:ಚನ್ನಪಟ್ಟಣ ಉಪ ಚುನಾವಣೆ: ಮುಹೂರ್ತಕ್ಕೂ ಮುನ್ನವೇ ರಾಜಕೀಯ ಚದುರಂಗದಾಟ - Channapatna By Election

ABOUT THE AUTHOR

...view details