ಕರ್ನಾಟಕ

karnataka

ETV Bharat / state

ವಿಜಯದಶಮಿ ಪ್ರಯುಕ್ತ ಅದ್ಧೂರಿಯಾಗಿ ಜರುಗಿದ ಶೋಭಾಯಾತ್ರೆ; ಡಿಜೆ ಸದ್ದಿಗೆ ಹೆಜ್ಜೆ ಹಾಕಿದ್ರು ಬೆಣ್ಣೆನಗರಿ ಯುವಕರು

ವಿಜಯದಶಮಿ ಪ್ರಯುಕ್ತ ದಸರಾ ಸಮಿತಿ ಹಾಗೂ ವಿಶ್ವ ಹಿಂದೂ ಪರಿಷತ್​​ ನೇತೃತ್ವದಲ್ಲಿ ದಾವಣಗೆರೆಯಲ್ಲಿ ಶೋಭಾಯಾತ್ರೆ ನಡೆಯಿತು.

By ETV Bharat Karnataka Team

Published : 4 hours ago

Updated : 3 hours ago

Dasara Shobhayatra
ದಸರಾ ಶೋಭಾಯಾತ್ರೆ (ETV Bharat)

ದಾವಣಗೆರೆ : ನಾಡಹಬ್ಬ ದಸರಾದ ಸಂಭ್ರಮ ಎಲ್ಲೆಡೆ ಮನೆ‌ಮಾಡಿದೆ.‌ ವಿಜಯದಶಮಿ ಪ್ರಯುಕ್ತ ದಾವಣಗೆರೆಯಲ್ಲೂ ಶೋಭಾಯಾತ್ರೆ ಅದ್ಧೂರಿಯಾಗಿ ಜರುಗಿದೆ. ದಸರಾ ಸಮಿತಿ ಹಾಗೂ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಜರುಗಿದ ಮೆರವಣಿಗೆಯಲ್ಲಿ ಸಾಕಷ್ಟು ಯುವಕರು ಜಮಾಯಿಸಿದ್ದರು. ಕಲಾ ತಂಡಗಳು ಮೆರಗು ತಂದವು. ಅಲ್ಲದೆ ಡಿಜೆ ಸದ್ದಿಗೆ ಯುವಕರು ಕುಣಿದು ಕುಪ್ಪಳಿಸಿದ್ದಾರೆ.

ದಾವಣಗೆರೆಯಲ್ಲೂ ನಾಡಹಬ್ಬ ದಸರಾ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ವಿಜಯದಶಮಿ ಪ್ರಯುಕ್ತ ದಸರಾ ಸಮಿತಿ, ವಿಹೆಚ್​ಪಿ ನೇತೃತ್ವದಲ್ಲಿ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿತ್ತು. ‌ದಾವಣಗೆರೆ ನಗರದ ಬೇತೂರು ವೃತ್ತದ ವೆಂಕಟೇಶ್ವರ ದೇವಸ್ಥಾನದ ಆವರಣದಿಂದ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.

ದಾವಣಗೆರೆಯಲ್ಲಿ ಅದ್ಧೂರಿಯಾಗಿ ಜರುಗಿದ ಶೋಭಾಯಾತ್ರೆ (ETV Bharat)

ಈ ವೇಳೆ ಪಾಲಿಕೆ ಮಹಾಪೌರರಾದ ಕೆ. ಚಮನ್ ಸಾಬ್ ಅವರು ಶ್ರೀ ಚಾಮುಂಡೇಶ್ವರಿ ದೇವಿಗೆ ಹೂವಿನ ಮಾಲೆ ಹಾಕಿ ನಮಿಸಿದರು. ಡಿಜೆ ಸದ್ದಿಗೆ ಯುವ ಮನಸುಗಳು ಕುಣಿದು ಕುಪ್ಪಳಿಸಿದರು. ಜೈ ಶ್ರೀರಾಮ್, ಜೈ ಭವಾನಿ, ಭಾರತ್ ಮಾತಾ ಕೀ ಜೈ ಎಂಬ ಜೈಕಾರ ಕೇಳಿ ಬಂದವು.

ಡಿಜೆ ವ್ಯವಸ್ಥೆ ಮಾಡಿಲ್ಲ ಎಂಬ ಕಾರಣಕ್ಕೆ ವೆಂಕಟೇಶ್ವರ ವೃತ್ತದಲ್ಲಿ ಕೆಲ ಕಾಲ ಗೊಂದಲ ಮನೆ ಮಾಡಿತ್ತು. ಅಲ್ಲದೆ ಡಿಜೆ ಬೇಕೇ ಬೇಕೆಂದು ಯುವಕರು ಪಟ್ಟು ಹಿಡಿದು ಡಿಜೆ ತರಿಸಿ ಭರ್ಜರಿ ಸ್ಟೆಪ್ ಹಾಕಿದರು. ಬಿಜೆಪಿ ನಾಯಕರು ಕೂಡ ಶೋಭಾಯಾತ್ರೆಯಲ್ಲಿ ಭಾಗಿಯಾಗಿ ಸಖತ್ ಎಂಜಾಯ್ ಮಾಡಿದರು. ಮೆರವಣಿಗೆ ತೆರಳುವ ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಶೋಭಾಯಾತ್ರೆ (ETV Bharat)

ಮೆರಗು ತಂದ ಜಾನಪದ ಕಲಾತಂಡಗಳು :ಶೋಭಾಯಾತ್ರೆಗೆ ಕಲಾ ತಂಡಗಳು ಮೆರುಗು ತಂದವು. ಕಾಸರಗೋಡಿನ ಚಂಡೆ ಮದ್ದಳೆ, ಕೀಲು ಕುದುರೆ, ಡೊಳ್ಳು ಕುಣಿತ, ನಂದಿಕೋಲು, ವೀರಗಾಸೆ ಕಲಾ, ನಾಸೀಕ್ ಡೋಲ್, ಗೊಂಬೆಗಳ ಕುಣಿತ, ಈ ಕಲಾ ತಂಡಗಳು ಶೋಭಾಯಾತ್ರೆಗೆ ವಿಶೇಷವಾಗಿ ಮೆರುಗು ನೀಡಿದವು.

ಶೋಭಾಯಾತ್ರೆಯಲ್ಲಿ ಪೊಲೀಸ್ ಬಂದೋಬಸ್ತ್​ (ETV Bharat)

ಇನ್ನು ಡಿಜೆ ಸದ್ದು ಆರಂಭ ಆಗುತ್ತಿದ್ದಂತೆ ಯುವಕರು ಕೇಸರಿ ಶಾಲು ಧರಿಸಿ ಕುಣಿದರು. ಮೆರವಣಿಗೆ ವೆಂಕಟೇಶ್ವರ ವೃತ್ತದಿಂದ ಆರಂಭವಾಗಿ ಮಟ್ಟಿಕಲ್, ಬಂಬೂ ಬಜಾರ್, ಜಗಳೂರು ಬಸ್ ನಿಲ್ದಾಣ, ಹಾಸ್ಬಾವಿ ಸರ್ಕಲ್, ಕೆ. ಆರ್ ಮಾರುಕಟ್ಟೆ, ಹೈಸ್ಕೂಲ್ ಮೈದಾನದಲ್ಲಿರುವ ಬೀರಲಿಂಗೇಶ್ವರ ದೇವಾಲಯಕ್ಕೆ ಬಂದು ಕೊನೆಗೊಂಡಿತು.

ಶಾಂತಿಯುತವಾಗಿ ಸಾಗಿದ ಮೆರವಣಿಗೆ :ಇನ್ನು ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳಲ್ಲಿ ಖಾಕಿ ಕಟ್ಟೆಚ್ಚರ ವಹಿಸಿತ್ತು.‌ ಡ್ರೋನ್ ಕಣ್ಗಾವಲಾಗಿತ್ತು.‌ ಎಸ್ಪಿ, ಎಎಸ್ಪಿಗಳು ಸೇರಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಇದರಿಂದಾಗಿ ಶೋಭಾಯಾತ್ರೆ ಶಾಂತಿಯುತವಾಗಿ ಜರುಗಿತು.

ಈ ಮೆರವಣಿಗೆಯಲ್ಲಿ ದೇವಿ ಶ್ರೀ ಚಾಮುಂಡೇಶ್ವರಿ, ವಾಲ್ಮೀಕಿ ಮಹರ್ಷಿ, ಮದಕರಿ ನಾಯಕ, ಕನಕದಾಸ, ವೀರ ವನಿತೆಯರಾದ ಒನಕೆ ಓಬವ್ವ, ಜಾನ್ಸಿರಾಣಿ ಲಕ್ಷ್ಮಿ ಬಾಯಿ, ವಿಶ್ವಗುರು ಬಸವಣ್ಣ, ದೇಶಪ್ರೇಮಿಗಳಾದ ಶಿವಾಜಿ, ರಾಣ ಪ್ರತಾಪ್​ಸಿಂಗ್, ಭಗತ್‌ಸಿಂಗ್, ರಾಜಗುರು, ಸುಖದೇವ್, ಚಂದ್ರಶೇಖರ್ ಆಜಾದ್, ಸುಭಾಷ್ ಚಂದ್ರಬೋಸ್, ಸಾವರ್ಕರ್, ಡಾ. ಬಿ. ಆರ್ ಅಂಬೇಡ್ಕರ್ ಮುಂತಾದವರ ಭಾವಚಿತ್ರಗಳನ್ನು ಮೆರವಣಿಗೆಯಲ್ಲಿ ಬಳಕೆ ಮಾಡಲಾಗಿತ್ತು.

ಇದನ್ನೂ ಓದಿ :ಇಂದು ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ: ವಿಜಯದಶಮಿ ಪೂಜಾ ವಿಧಾನಗಳ ಮಾಹಿತಿ ಇಲ್ಲಿದೆ

Last Updated : 3 hours ago

ABOUT THE AUTHOR

...view details